ಮೈಸೂರು ಮೇಯರ್ ಚುನಾವಣೆ; ಕಾಂಗ್ರೆಸ್, ಜೆಡಿಎಸ್ ಮೈತ್ರಿ?
ಮೈಸೂರು, ಫೆಬ್ರವರಿ 17; ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಮೈತ್ರಿ ಈ ವರ್ಷವೂ ಮುಂದುವರೆಯುವ ಸಾಧ್ಯತೆ ಇದೆ. ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಅಖಾಡಕ್ಕೆ ಇಳಿದಿದ್ದಾರೆ.
ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಬುಧವಾರ ಸಂಜೆ ಕಾಂಗ್ರೆಸ್ ನಾಯಕರ ಪ್ರತ್ಯೇಕ ಸಭೆಯನ್ನು ಕರೆದಿದ್ದಾರೆ. ಪಕ್ಷದ ಸ್ಥಳೀಯ ನಾಯಕರು ಹಾಗೂ ಪಾಲಿಕೆ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್
ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸುವ ಮುನ್ಸೂಚನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಭೆಯನ್ನು ಕರೆದಿದೆ. ಸಭೆಯಲ್ಲಿ ಚುನಾವಣೆಯ ರಣತಂತ್ರಗಳ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆ ಇದ್ದು, ಮೈತ್ರಿ ಮುಂದುವರೆಸುವ ಕುರಿತು ಚರ್ಚೆ ನಡೆಯಲಿದೆ.
ಮೈಸೂರು ಮೇಯರ್ ಚುನಾವಣೆ: ಜೆಡಿಎಸ್ ನೊಂದಿಗೆ ಬಿಜೆಪಿ ಮೈತ್ರಿ?
ಮೈತ್ರಿ ಆಗುತ್ತದೆ; ಶಾಸಕ ತನ್ವೀರ್ ಸೇರ್ ಜೆಡಿಎಸ್ ಶಾಸಕ ಸಾ. ರಾ. ಮಹೇಶ್ ಭೇಟಿ ಮಾಡಿದರು. ಬಳಿಕ ಮಾತನಾಡಿದ ಅವರು, ನೂರಕ್ಕೆ ನೂರು ಜೆಡಿಎಸ್ ಜೊತೆ ಮೈತ್ರಿ ಆಗುತ್ತದೆ. ಮೇಯರ್ ಸ್ಥಾನ ನಮಗೆ ಬೇಕು ಅನ್ನೋದೇನಿಲ್ಲ. ನಮಗೆ ಜನರಿಗೆ ಕೊಟ್ಟ ಭರವಸೆ ಈಡೇರಿಸಲು ವೇದಿಕೆ ಬೇಕು" ಎಂದು ಹೇಳಿದರು.
ಮೈಸೂರು ಮೇಯರ್ ಚುನಾವಣೆ; ಮೀಸಲಾತಿ ಪ್ರಕಟ
ವರಿಷ್ಠರ ಜೊತೆ ಚರ್ಚೆ
ಸಾ. ರಾ. ಮಹೇಶ್ ಭೇಟಿ ಬಳಿಕ ಮಾತನಾಡಿದ ತನ್ವೀರ್ ಸೇಠ್, "ಎರಡೂ ಪಕ್ಷದವರು ಕುಳಿತು ಚರ್ಚಿಸಿ ಮುಂದಿನ ತೀರ್ಮಾನ ಮಾಡುತ್ತೇವೆ. ನಾನು ಹಿಂದೆಯೇ ಹೇಳಿದಂತೆ ಮುಂದಿನ 5 ವರ್ಷದ ತೀರ್ಮಾನ ಸ್ಥಳೀಯವಾಗಿ ಆಗಿದೆ. ಆದರೆ, ಕೆಲವು ಏರುಪೇರು ಸಹ ಆಗಿದೆ. ನಾವು ಮಾತನಾಡಿರುವಂತದ್ದು ಸ್ಪಷ್ಟವಾಗಿದ್ದರೂ ಕೂಡ. ಕೆಲವೊಂದು ವಿಚಾರಗಳನ್ನು ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ" ಎಂದರು.
"ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜನತಾದಳದ ವರಿಷ್ಠರ ಜೊತೆ ಮಾತುಕತೆ ನಡೆಸಲಿದ್ದಾರೆ. ಮೈಸೂರಿನಲ್ಲಿ ಕಾಂಗ್ರೆಸ್- ಜೆಡಿಎಸ್ ಪಾಲಿಕೆ ಸದಸ್ಯರ ಸಭೆ ನಡೆಯಲಿದೆ. ಎಲ್ಲರ ಒಟ್ಟಾರೆ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಮಾಡುತ್ತೇವೆ. ನಗರದ ಜನರಿಗೆ ಕೊಟ್ಟ ಭರವಸೆ ಈಡೇರಿಸುವ ಸಲುವಾಗಿ ಒಟ್ಟಾಗಿ ಕೆಲಸ ಮಾಡಲು ಮುಂದಾಗಿದ್ದೇವೆ" ಎಂದು ತನ್ವೀರ್ ಸೇಠ್ ಹೇಳಿದರು.
ಸಾ. ರಾ. ಮಹೇಶ್ ಹೇಳಿಕೆ
"ಕಾಂಗ್ರೆಸ್-ಜೆಡಿಎಸ್ ಸಂಬಂಧ ರಾಷ್ಟ್ರ ಮತ್ತು ಸ್ಥಳೀಯ ಮಟ್ಟದಲ್ಲಿ ಚೆನ್ನಾಗಿದೆ. ಮಧ್ಯದಲ್ಲಿ ಮಾತ್ರ ಒಂದಿಬ್ಬರಿಂದ ತೊಡಕಾಗಿದೆ. ಈ ಕಾರಣಕ್ಕಾಗಿ ಮೈಸೂರು ಮೇಯರ್ ಗದ್ದುಗೆ ವಿಚಾರ ಎಳೆದಾಡುತ್ತಿದೆ" ಎಂದು ಮೈಸೂರಿನಲ್ಲಿ ಸಾ. ರಾ. ಮಹೇಶ್ ಹೇಳಿಕೆ ನೀಡಿದರು.
ಹಿಂದಿನ ಮಾತುಕತೆ
"ಮೈಸೂರು ಪಾಲಿಕೆ ಮೇಯರ್ ವಿಚಾರದಲ್ಲಿ ಸ್ಥಳೀಯ ನಾಯಕರೆಲ್ಲ ಹಿಂದಿನ ಮಾತುಕತೆಗೆ ಬದ್ಧರಾಗಿದ್ದೇವೆ. ಎರಡು ಅವಧಿ ಕಾಂಗ್ರೆಸ್ಗೆ, ಮೂರು ಅವಧಿ ಜೆಡಿಎಸ್ಗೆ ಎಂಬ ಮಾತಾಗಿತ್ತು. ಇತ್ತೀಚಿಗೆ ಕೆಲವರು ಜೆಡಿಎಸ್ ಒಂದು ಪಕ್ಷವೇ ಅಲ್ಲ ಅಂತಾರೆ. ಜೆಡಿಎಸ್ ಪಕ್ಷ ಎಲ್ಲಿದೆ ಅಂತಾ ಹೇಳ್ತಾರೆ?. ಯಾರ ಜೊತೆಗೂ ಮೈತ್ರಿ ಇಲ್ಲ ಎಂಬ ಮಾತುಗಳನ್ನು ಆಡುತ್ತಾರೆ. ಇಂತಹ ಹೇಳಿಕೆಗಳೇ ಗೊಂದಲಕ್ಕೆ ಕಾರಣವಾಗಿರೋದು" ಎಂದು ಸಾ. ರಾ. ಮಹೇಶ್ ಹೇಳಿದರು.
ಗುರುವಾರ ಸಭೆ
"ನಮ್ಮ ವರಿಷ್ಠರು ಸ್ಪಷ್ಟ ಪಡಿಸಿದ್ದಾರೆ ಸ್ಥಳೀಯ ನಾಯಕರ ತೀರ್ಮಾನವನ್ನೇ ಅಂತಿಮಗೊಳಿಸುವಂತೆ ಹೇಳಿದ್ದಾರೆ. ಗುರುವಾರ ಜಿಲ್ಲಾಧ್ಯಕ್ಷರು, ಮಾಜಿ ಮೇಯರ್, ಪಾಲಿಕೆ ಸದಸ್ಯರ ಸಭೆ ಇದೆ. ಸಭೆಯಲ್ಲಿ ಕೈಗೊಳ್ಳುವ ತೀರ್ಮಾನವನ್ನು ವರಿಷ್ಠರಿಗೆ ತಿಳಿಸಿ ಅವರ ಸೂಚನೆಯಂತೆ ನಡೆದುಕೊಳ್ಳುತ್ತೇವೆ" ಎಂದು ಸಾ. ರಾ. ಮಹೇಶ್ ಹೇಳಿದರು.