ಅತಂತ್ರವಾದ ಮೈಸೂರು ಮಹಾನಗರ ಪಾಲಿಕೆ, ಇನ್ನು ಪಕ್ಷಾಂತರ ಪರ್ವ ಶುರು!
ಮೈಸೂರು, ಸೆಪ್ಟೆಂಬರ್.4: ಸ್ಥಳೀಯ ಮಿನಿ ಸಮರ ಎಂದೇ ಕರೆಸಿಕೊಂಡಿದ್ದ ಮೈಸೂರು ಮಹಾನಗರಪಾಲಿಕೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಮತ್ತೊಮ್ಮೆ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದರೂ ಕಾಂಗೆಸ್-ಜಾತ್ಯತೀತ ಜನತಾದಳ ಮೈತ್ರಿ ಸಾಧಿಸಿ ಅಧಿಕಾರ ಹಿಡಿಯುವುದು ನಿಚ್ಚಳವಾಗಿದೆ.
ಮೈಸೂರು ಮಹಾನಗರಪಾಲಿಕೆಯಲ್ಲಿ ಮೈತ್ರಿ ಆಡಳಿತದ ಸರಣಿ ಮುಂದುವರೆದಿದ್ದು, ಈ ಬಾರಿಯೂ ಯಾವುದೇ ಒಂದು ಪಕ್ಷಕ್ಕೆ ಬಹುಮತ ಸಾಧಿಸಲು ಸಾಧ್ಯವಾಗಿಲ್ಲ. ನಗರಪಾಲಿಕೆಯಲ್ಲಿ 22 ಸ್ಥಾನಗಳೊಂದಿಗೆ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಅಧಿಕಾರ ಪಡೆಯಲು ಅಗತ್ಯವಾದ ಬಹುಮತ ಪಡೆಯಲಾಗಿಲ್ಲ.
ಮೈಸೂರು ಅತಂತ್ರ ಫಲಿತಾಂಶ: ಲೋಕಲ್ ಫೈಟ್ ನಲ್ಲೂ ಕೈ -ತೆನೆ ಮೈತ್ರಿ ಸಾಧ್ಯತೆ
19 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ 18 ಸ್ಥಾನಗಳನ್ನು ಪಡೆದಿರುವ ಜಾ.ದಳ ಮೈತ್ರಿ ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ರಾಜ್ಯದಲ್ಲಿ ಜಾ.ದಳ-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರವಿದ್ದರೂ ಪ್ರತ್ಯೇಕವಾಗಿ ಚುನಾವಣೆ ಎದುರಿಸಿವೆ. ಜಿದ್ದಾಜಿದ್ದಿ ಹೋರಾಟದಲ್ಲಿ ಏಕಪಕ್ಷದ ಬಹುಮತ ಪಡೆಯುವಲ್ಲಿ ವಿಫಲವಾಗಿವೆ.
ಆದರೆ ರಾಜ್ಯ ಸರ್ಕಾರದಲ್ಲಿನ ಮೈತ್ರಿಯನ್ನು ಸ್ಥಳೀಯ ಸಂಸ್ಥೆಗಳಲ್ಲೂ ಮುಂದುವರಿಸುವ ನಿರ್ಧಾರವನ್ನು ಜಾ.ದಳ ತೆಗೆದುಕೊಂಡಿದೆ.
ಮೈಸೂರು ಪಾಲಿಕೆ ಚುನಾವಣೆಯಲ್ಲಿ ಸತತ ಏಳನೇ ಬಾರಿಯೂ ಈ ತೆರನಾದ ಅತಂತ್ರ ಪರಿಸ್ಥಿತಿ ಎದುರಾಗಿದೆ. ಈ ಬಾರಿಯೂ ಪಾಲಿಕೆಯಲ್ಲಿ ಮೈತ್ರಿ ಪರಂಪರೆ ಮುಂದುವರೆಯುವುದು ಅನಿವಾರ್ಯವಾಗಿದೆ.
ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ : 2013 v/s 2018
ಸ್ವತಂತ್ರವಾಗಿ ಗದ್ದುಗೆ ಏರಲು ಜಿದ್ದಾಜಿದ್ದಿಗೆ ಬಿದ್ದಿದ್ದ, ವಿಶ್ವಾಸದಿಂದ ಬೀಗುತ್ತಿದ್ದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಗೆ ಸಹಜವಾಗಿಯೇ ನಿರಾಸೆ ಉಂಟಾಗಿದೆ.ಹಾಗಾದರೆ ಇದಕ್ಕೆ ಕಾರಣ ಏನಿರಬಹುದು? ಇಲ್ಲಿದೆ ನೋಡಿ ಉತ್ತರ...
ಮೇಯರ್ ಪಟ್ಟ ಜೆಡಿಎಸ್ ಗೆ!
1983ರಿಂದ ಪಾಲಿಕೆಯಲ್ಲಿ ಯಾವುದೇ ಪಕ್ಷ ಸ್ವಂತ ಬಲದಿಂದ ಇದುವರೆಗೆ ಅಧಿಕಾರ ಹಿಡಿದಿಲ್ಲ. ಕಳೆದ ಬಾರಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದರಿಂದ ಜೆಡಿಎಸ್- ಬಿಜೆಪಿ ಜೊತೆಗೂಡಿ ಅಧಿಕಾರ ಹಿಡಿದಿದ್ದವು.
ರಾಜ್ಯಮಟ್ಟದಲ್ಲಿ ಮೈತ್ರಿ ಮಾಡಿಕೊಂಡಿದ್ದರೂ ಕಾಂಗ್ರೆಸ್, ಜೆಡಿಎಸ್ ಪ್ರತ್ಯೇಕವಾಗಿ ಕಣಕ್ಕಿಳಿದಿದ್ದವು. ಇಷ್ಟಾದರೂ ಜನರ ಮನಸ್ಸನ್ನು ಪೂರ್ಣ ಪ್ರಮಾಣದಲ್ಲಿ ಗೆಲ್ಲುವಲ್ಲಿ ವಿಫಲವಾಗಿವೆ.
ಜೆಡಿಎಸ್ ಜೊತೆ ಸೇರಿ ಮತ್ತೆ ಅಧಿಕಾರ ಹಿಡಿಯಲು ಬಿಜೆಪಿ ಕೂಡ ಪ್ರಯತ್ನ ನಡೆಸಿದೆ. ಈ ಬಗ್ಗೆ ಪಕ್ಷದ ಮುಖಂಡರೇ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಮೈತ್ರಿಗಾಗಿ ಮೇಯರ್ ಪಟ್ಟವನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಮುಂದಾಗಿರುವುದು ಗೊತ್ತಾಗಿದೆ.
ಅತಂತ್ರ ಪರಿಸ್ಥಿತಿಗೆ ಇದೇ ಕಾರಣ
ಬಿಜೆಪಿ ನಗರ ಘಟಕದ ಅಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್ ಅವರು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಜೊತೆ ಮಾತುಕತೆ ಕೂಡ ನಡೆಸಿದ್ದಾರೆ. ಮೈತ್ರಿಗೆ ಸಂಸದ ಪ್ರತಾಪಸಿಂಹ ಕೂಡ ಪ್ರಯತ್ನಿಸಿದ್ದಾರೆ. ಹೊಂದಾಣಿಕೆ ಸಾಧ್ಯವಾಗದಿದ್ದರೆ ವಿರೋಧ ಪಕ್ಷದಲ್ಲಿ ಕೂರಲು ಸಿದ್ಧರಿರುವುದಾಗಿ ಹೇಳಿದ್ದಾರೆ.
ಹೀಗಾಗಿ, ಪಾಲಿಕೆ ಗದ್ದುಗೆ ಯಾರ ಪಾಲಿಗೆ ಎಂಬ ಕುತೂಹಲ ಸಹಜವಾಗಿಯೇ ಮೂಡಿಸಿದೆ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಏರ್ಪಟ್ಟರೆ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ ವಿಧಾನಸಭೆ ಚುನಾವಣೆಯಲ್ಲಿ ಉಂಟಾದ ಪರಿಸ್ಥಿತಿ ಎದುರಾಗಲಿದೆ.
ಮತದಾನ ಪ್ರಮಾಣ ತಗ್ಗಿದ್ದೇ ಮತ್ತೆ ಅತಂತ್ರ ಪರಿಸ್ಥಿತಿಗೆ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಇದು ಹಲವು ಅಭ್ಯರ್ಥಿಗಳ ಸೋಲಿಗೆ ದಾರಿ ಮಾಡಿಕೊಟ್ಟಿದೆ. ಜೊತೆಗೆ ಮರುವಿಂಗಡಣೆ, ಬದಲಾದ ಮೀಸಲಾತಿ, ಮತಗಟ್ಟೆಗಳ ಗುರುತಿಸುವಿಕೆಯಲ್ಲಿ ಉಂಟಾದ ಗೊಂದಲವೂ ಕಾರಣ ಎನ್ನಲಾಗಿದೆ.
ಸ್ಥಳೀಯ ಸಂಸ್ಥೆ ಚುನಾವಣೆ : ಯಾವ ಪಕ್ಷಕ್ಕೆ ಎಷ್ಟು ಸೀಟು?
ಬಹುಮತದ ಲೆಕ್ಕಾಚಾರ ಶುರು
ಅತಂತ್ರ ಫಲಿತಾಂಶ ಬಂದಿರುವುದರಿಂದ 65 ಸದಸ್ಯರ ಬಲದ ಪಾಲಿಕೆಯಲ್ಲಿ ಬಹುಮತದ ಲೆಕ್ಕಾಚಾರ ಶುರುವಾಗಿದೆ. ಪಾಲಿಕೆ ಅಧಿಕಾರ ಹಿಡಿಯಲು 33 ಸದಸ್ಯರಷ್ಟೇ ಸಾಕಾಗುವುದಿಲ್ಲ. ಗದ್ದುಗೆ ಏರಲು ಮ್ಯಾಜಿಕ್ ಸಂಖ್ಯೆ 38 ಬೇಕು. ಏಕೆಂದರೆ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರಿಗೂ ಮತದಾನದ ಹಕ್ಕು ಇದೆ.
ಹೀಗಾಗಿ, ಅವರ ಸಂಖ್ಯೆಯೂ ಬಹುಮತದ ಲೆಕ್ಕಾಚಾರದಲ್ಲಿ ಸೇರುತ್ತದೆ. ಅವರ ಮತವೂ ನಿರ್ಣಾಯಕವಾಗುತ್ತದೆ.
ಸಂಸದ ಪ್ರತಾಪಸಿಂಹ (ಬಿಜೆಪಿ), ಶಾಸಕರಾದ ಜಿ.ಟಿ.ದೇವೇಗೌಡ (ಜೆಡಿಎಸ್), ತನ್ವೀರ್ ಸೇಠ್ (ಕಾಂಗ್ರೆಸ್), ಎಲ್.ನಾಗೇಂದ್ರ (ಬಿಜೆಪಿ), ಎಸ್.ಎ.ರಾಮದಾಸ್ (ಬಿಜೆಪಿ), ವಿಧಾನ ಪರಿಷತ್ ಸದಸ್ಯರಾದ ಆರ್.ಧರ್ಮಸೇನಾ (ಕಾಂಗ್ರೆಸ್), ಮರಿತಿಬ್ಬೇಗೌಡ, ಸಂದೇಶ್ ನಾಗರಾಜ್, ಕೆ.ಟಿ.ಶ್ರೀಕಂಠೇಗೌಡ (ಜೆಡಿಎಸ್) ಮತದಾನದ ಹಕ್ಕು ಹೊಂದಿದ್ದಾರೆ.
ಹೀಗಾಗಿ, ಪಾಲಿಕೆ ಸದಸ್ಯರ ಸಂಖ್ಯೆ 74ಕ್ಕೆ ಏರುತ್ತದೆ. ಆಗ ಬಹುಮತಕ್ಕೆ 38 ಸ್ಥಾನ ಬೇಕಾಗುತ್ತದೆ. ಪಾಲಿಕೆಯಲ್ಲಿ ಸದ್ಯ ಕಾಂಗ್ರೆಸ್, ಜೆಡಿಎಸ್, ಬಿಎಸ್ಪಿಯಿಂದ ಗೆದ್ದಿರುವ ಸದಸ್ಯರ ಸಂಖ್ಯೆ ಸೇರಿ 38 ಆಗುತ್ತದೆ. ಜೊತೆಗೆ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಆರ್.ಧರ್ಮಸೇನಾ, ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಸಂದೇಶ್ ನಾಗರಾಜ್ ಸೇರಿ ಸಂಖ್ಯೆ 44ಕ್ಕೇರುತ್ತದೆ.
ಸಂಸದ, ಇಬ್ಬರು ಶಾಸಕರು ಸೇರಿ ಬಿಜೆಪಿ ಸಂಖ್ಯೆ 25 ಕ್ಕೇರುತ್ತದೆ.
ಎಚ್.ವಿಶ್ವನಾಥ್ ಹೇಳುವಂತೆ
'ಜೆಡಿಎಸ್- ಕಾಂಗ್ರೆಸ್ ಸೇರಿ ರಾಜ್ಯದಲ್ಲಿ ಸರ್ಕಾರ ನಡೆಸುತ್ತಿವೆ. ಹೀಗಾಗಿ, ರಾಜ್ಯದ ಯಾವುದೇ ಭಾಗದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಪರಸ್ಪರ ಒಪ್ಪಂದದ ಮೇಲೆ ಅಧಿಕಾರ ಹಿಡಿಯಲು ಪ್ರಯತ್ನ ಮಾಡುತ್ತೇವೆ. ಪ್ರಚಾರದ ಕೊರತೆಯಿಂದ ನಿರೀಕ್ಷಿಸಿದಷ್ಟು ಸ್ಥಾನ ಗೆಲ್ಲಲು ಜೆಡಿಎಸ್ ಗೆ ಸಾಧ್ಯವಾಗಿಲ್ಲ' ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.
ಈ ಬಾರಿಯೂ ಮೈತ್ರಿ ಮುಂದುವರೆದರೆ ಮೇಯರ್ ಸ್ಥಾನಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.