ಎಚ್ಡಿ ಕೋಟೆ: ಜೆಡಿಎಸ್ ಅಭ್ಯರ್ಥಿ ಕೊಲೆಗೆ ಯತ್ನಿಸಿದ ಇಬ್ಬರ ಬಂಧನ
ಮೈಸೂರು, ಫೆಬ್ರವರಿ,13: ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ಹೆಚ್.ಡಿ.ಕೋಟೆ ತಾಲೂಕಿನ ಜೆಡಿಎಸ್ ಕಚೇರಿಗೆ ಬೆಂಕಿ ಹಾಕಿದ್ದ ಬಂಡಾಯ ಅಭ್ಯರ್ಥಿ ನಾಗೇಶ್ ಅವರ ಬೆಂಬಲಿಗರಾದ ಇಬ್ಬರು ಅಧಿಕೃತ ಅಭ್ಯರ್ಥಿಯ ಹತ್ಯೆಗೆ ಯತ್ನಿಸಿ ಗ್ರಾಮಸ್ಥರಿಂದ ಧರ್ಮದೇಟು ತಿಂದು ಪೊಲೀಸರ ಅತಿಥಿಯಾಗಿದ್ದಾರೆ.
ಧರ್ಮ ಹಾಗೂ ಮಹೇಶ್ ಎಂಬುವರೇ ಸಿಕ್ಕಿಬಿದ್ದ ಬಂಡಾಯ ಅಭ್ಯರ್ಥಿ ನಾಗೇಶ್ ಅವರ ಬೆಂಬಲಿಗರು. ಇವರು ಸೇರಿದಂತೆ ನಾಲ್ವರು ಪಕ್ಷದಿಂದ ಅಧಿಕೃತ ಅಭ್ಯರ್ಥಿಯಾಗಿದ್ದ ಈರೇಗೌಡ ಅವರ ಹತ್ಯೆಗೆ ಶುಕ್ರವಾರ ರಾತ್ರಿ ಸಂಚು ಹೂಡಿದ್ದರು.[ಜೆಡಿಎಸ್ ಅಭ್ಯರ್ಥಿಗಳ ನಡುವೆಯೇ ಕಿಡಿ ಭುಗಿಲೆದ್ದಿದ್ದೇಕೆ?]
ಹೆಚ್.ಡಿ.ಕೋಟೆ ತಾಲೂಕಿನ ಕಣಿಯ್ಯನಹುಂಡಿ ಗ್ರಾಮದಲ್ಲಿರುವ ಈರೇಗೌಡರ ಮನೆಗೆ ತಡರಾತ್ರಿ ನುಗ್ಗಿದ ಧರ್ಮ ಹಾಗೂ ಮಹೇಶ್ ಕೊಲೆಗೆ ಸಂಚು ರೂಪಿಸಿದ್ದಾರೆ. ಇದನ್ನು ಕಂಡ ಈರೇಗೌಡರು ಕೂಗಿಕೊಂಡಿದ್ದಾರೆ. ಇದರಿಂದ ಹೆದರಿದ ದುಷ್ಕರ್ಮಿಗಳು ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ.[ಮಾಜಿ, ಹಾಲಿಗಳ ಮುಗಿಯದ 'ವ್ಯಾಕ್' ಸಮರ: ಆಗ ವಾಚ್, ಈಗ ಕಾರ್]
ವಿಷಯ ತಿಳಿದ ಗ್ರಾಮಸ್ಥರು ಇವರನ್ನು ಹಿಡಿಯಲು ಮುಂದಾಗಿದ್ದು, ನಾಲ್ವರ ಪೈಕಿ ಇಬ್ಬರು ತಪ್ಪಿಸಿಕೊಂಡರೆ ಧರ್ಮ ಹಾಗೂ ಮಹೇಶ್ ಸಿಕ್ಕಿ ಬಿದ್ದಿದ್ದಾರೆ. ಅವರ ಬಟ್ಟೆ ಬಿಚ್ಚಿದ ಗ್ರಾಮಸ್ಥರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಬಳಿಕ ಹೆಚ್.ಡಿ.ಕೋಟೆ ಠಾಣೆ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.