ಅಮ್ಮನಿಗಾಗಿ ಮೈಸೂರಿನ ಚಾಮುಂಡೇಶ್ವರಿಗೆ ವಿಶೇಷ ಪೂಜೆ
ಜಯಲಲಿತಾ ಅವರು ಗುಣಮುಖರಾಗಲೆಂದು ಅಭಿಮಾನಿಗಳು ದೇಶದಾದ್ಯಂತ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ.ಅದಂರಂತೆ ಮೈಸೂರಿನ ಅಮ್ಮ ಅಭಿಮಾನಿಗಳು ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.
ಮೈಸೂರು, ಡಿಸೆಂಬರ್. 05 : ತೀವ್ರ ಗಂಭೀರ ಸ್ಥಿತಿಯಲ್ಲಿರುವ ತಮಿಳುನಾಡಿನ ಮುಖ್ಯಮಂತ್ರಿ ಜನರ ಪಾಲಿನ ಅಮ್ಮ ಆಗಿರುವ ಜಯಲಲಿತಾ ಅವರು ಶೀಘ್ರ ಗುಣಮುಖವಾಗಲೆಂದು ಮೈಸೂರಿನ ಅಭಿಮಾನಿಗಳು ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.
ಮೈಸೂರಿನಾದ್ಯಂತ ನೆಲೆಸಿರುವ ತಮಿಳುನಾಡಿನ ವಾಸಿಗಳಲ್ಲಿ ದುಃಖದ ಛಾಯೆ ಆವರಿಸಿದ್ದು, ಅಮ್ಮ ಬೇಗ ಗುಣಮುಖವಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. [ಜಯಲಲಿತಾ ಗುಣವಾಗಲೆಂದು ಚಾಮುಂಡಿಗೆ ಹರಕೆ ಸಲ್ಲಿಕೆ]
ಜಯಲಲಿತಾ ಅವರು ಆಡಿ ಬೆಳೆದ ಮೈಸೂರಿನ ಲಕ್ಷ್ಮಿಪುರಂ 2ನೇ ಕ್ರಾಸ್ (ಹಳೇ ಕೆಇಬಿ ಕಚೇರಿ) ಸ್ಪೋಟ್ರ್ಸ್ ಕ್ಲಬ್ ಬಳಿಯ ನಿವಾಸಿಗಳು, ರಾಜ್ಯ ದಲಿತ ಹಿಂದುಳಿದ ಅಲ್ಪಸಂಖ್ಯಾತ ಸಂಘದ ಸದಸ್ಯರು, ಜಯಲಲಿತಾ ಅಭಿಮಾನಿಗಳು ಬೆಳಿಗ್ಗೆ 11.30ಕ್ಕೆ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ಕುಂಕುಮಾರ್ಚನೆ, ಪುಷ್ಪಾರ್ಚನೆ ನೆರವೇರಿಸಿದರು.
ಈ ಸಂದರ್ಭ ಇವರೊಂದಿಗೆ ತಮಿಳುನಾಡಿನ ಕಾಂಗ್ರೆಸ್ ಶಾಸಕ ಪನ್ನೀರ ಸೆಲ್ವಂ ಕೂಡ ಇದ್ದರು. ಈ ಸಂದರ್ಭ ಮಾತನಾಡಿದ ಲಕ್ಷ್ಮಿಪುರಂ ನಿವಾಸಿ ಹಾಗೂ ಜಯಲಲಿತಾ ಅವರ ಅಭಿಮಾನಿ ಜಯರಾಜ್ ಹೆಗಡೆ ಅವರು, ಜಯಲಲಿತಾ ಅವರು ಬಾಲ್ಯದಲ್ಲಿ ನಮ್ಮ ಬೀದಿಯಲ್ಲೇ ಆಡಿಬೆಳೆದಿದ್ದು,
ನಮ್ಮೂರಿನ ಹೆಣ್ಣುಮಗಳು ತಮಿಳುನಾಡಿನ ಮುಖ್ಯಮಂತ್ರಿಯಾಗಿ, ಅಲ್ಲಿನ ಜನರ ಪಾಲಿನ ಅಮ್ಮನಾಗಿ ಬೆಳದಿದ್ದು ನಮಗೆ ಸಂತಸ ತಂದಿದೆ.
ಅವರು ಆರೋಗ್ಯವಂತರಾಗಿ ಇನ್ನಷ್ಟು ದಿನ ಬಾಳಬೇಕೆಂಬುದು ನಮ್ಮ ಬಯಕೆಯಾಗಿದ್ದು, ಆ ನಿಟ್ಟಿನಲ್ಲಿ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಕುಂಕುಮಾರ್ಚನೆ, ಪುಷ್ಪಾರ್ಚನೆ ನೆರವೇರಿಸಿದ್ದಾಗಿ ತಿಳಿಸಿದ್ದಾರೆ.
ಇದೇ ವೇಳೆ ಭಾನುವಾರ ರಾತ್ರಿಯೇ ಚೆನ್ನೈನಿಂದ ಹೊರಟು ಮೈಸೂರಿಗೆ ಆಗಮಿಸಿದ ಒಂದಷ್ಟು ಮಹಿಳೆಯರು ಪೂಜೆ ಸಲ್ಲಿಸಿ ಅಂಜನೇಯ, ಗಣಪತಿ ವಿಗ್ರಹಗಳಿಗೆ ಚಿನ್ನ ಹಾಗೂ ಬೆಳ್ಳಿಯ ಮುಖವಾಡವನ್ನು ಹರಕೆಯಾಗಿ ಅರ್ಪಿಸಿದರು. ಅಲ್ಲದೆ ನೂರೊಂದು ಈಡು ಕಾಯಿ ಒಡೆದು ಪ್ರಾರ್ಥಿಸಿದರು.
ವಿಶೇಷ ಪೂಜೆಯ ಸಂದರ್ಭ ಕಲಾವಿದರ ಸಂಘಗಳ ಒಕ್ಕೂಟಗಳ ಅಧ್ಯಕ್ಷ ಕಂಸಾಳೆ ರವಿ, ಯುವ ಗಾಣಿಗ ಸಮಾಜದ ಮುಖಂಡ ರಾಜು ಸೇರಿದಂತೆ ಹಲವು ಅಭಿಮಾನಿಗಳು ಹಾಜರಿದ್ದರು.
ಜಯಲಲಿತಾ ಅವರು ಮೈಸೂರಿನ ಚಾಮುಂಡೇಶ್ವರಿಯ ಭಕ್ತರಾಗಿದ್ದು, ತಮ್ಮ ಈಡೇರಿಕೆ ನೆರವೇರಿದಾಗಲೆಲ್ಲ ಹರಕೆಯನ್ನು ಅರ್ಪಿಸುತ್ತಿದ್ದರು. ಈಗಲೂ ತಾಯಿ ಚಾಮುಂಡೇಶ್ವರಿ ಅವರನ್ನು ಕೈಬಿಡದೆ ಗುಣಮುಖರನ್ನಾಗಿ ಮಾಡುತ್ತಾರೆ ಎಂಬ ವಿಶ್ವಾಸವನ್ನು ಅಭಿಮಾನಿಗಳು ಹೊರಹಾಕಿದ್ದಾರೆ.