ಮೈಸೂರು ವಿವಿಗೆ ಜಯಚಾಮರಾಜ ಒಡೆಯರ್ ಹೆಸರು: ಕುಲಪತಿ ಹೇಮಂತ್ ಕುಮಾರ್
ಮೈಸೂರು, ಜುಲೈ 19: ಮೈಸೂರು ವಿವಿ ನೂತನ ಕ್ಯಾಂಪಸ್ ಗೆ ಜಯಚಾಮರಾಜ ಒಡೆಯರ್ ಸೆಂಟರ್ ಆಫ್ ಹೈಯರ್ ಎಜುಕೇಷನ್ ಎಂದು ಹೆಸರಿಡಲು ತೀರ್ಮಾನಿಸಿರುವುದಾಗಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದ್ದಾರೆ.
ಸುಧಾಮೂರ್ತಿ, ಬಿ ಸರೋಜಾದೇವಿ ಸೇರಿ 9 ಮಂದಿಗೆ ಜಯಚಾಮರಾಜ ಒಡೆಯರ್ ಸ್ಮರಣಾರ್ಥ ಪ್ರಶಸ್ತಿ
ಜಯಚಾಮರಾಜ ಒಡೆಯರ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ದರ್ಬಾರ್ ಹಾಲ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದ ಅವರು, "ಜಯಚಾಮರಾಜ ಒಡೆಯರ್ ಅವರ ಕಾಲದಲ್ಲಿ ಆಯಿಷ್ ಸಂಸ್ಥೆಗೆ ಕುರುಬಾರಹಳ್ಳಿಯಲ್ಲಿ 22 ಎಕರೆ ಜಾಗ ನೀಡಲಾಗಿತ್ತು. ಆದರೆ ಆಯಿಷ್ ಸಂಸ್ಥೆಯನ್ನು ಬೇರೆ ಸ್ಥಳದಲ್ಲಿ ನಿರ್ಮಿಸಲಾಗಿದೆ. ಕುರುಬಾರಹಳ್ಳಿಯ ಜಾಗ ಮೈಸೂರು ವಿಶ್ವವಿದ್ಯಾಲಯದ ಒಡೆತನದಲ್ಲಿದೆ. ವಿ.ವಿ ಅಲ್ಲಿ ಹೊಸ ಕ್ಯಾಂಪಸ್ ನಿರ್ಮಿಸಲಿದ್ದು, ಅದಕ್ಕೆ ಜಯಚಾಮರಾಜ ಒಡೆಯರ್ ಉನ್ನತ ಅಧ್ಯಯನ ಕೇಂದ್ರ ಎಂದು ಹೆಸರಿಡಲು ತೀರ್ಮಾನಿಸಿದೆ. ಇದು ಸಂತಸದ ವಿಷಯ" ಎಂದರು.
ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಮಾತನಾಡಿ, "ಜಯಚಾಮರಾಜ ಒಡೆಯರ್ ಅವರು ಲಲಿತ ಕಲೆಗಳಿಗೆ ನೀಡಿದ ಪ್ರೋತ್ಸಾಹ, ಸಂಸ್ಕೃತ, ವೇದಶಾಸ್ತ್ರ, ಪುರಾಣವನ್ನು ಕನ್ನಡಕ್ಕೆ ಅನುವಾದಿಸಿದ್ದು ಮಹತ್ವದ ಕಾರ್ಯಗಳಾಗಿವೆ. ಕಲೆಗಳ ಮೇಲೆ ಅವರಲ್ಲಿದ್ದ ವಿಶೇಷ ಆಸಕ್ತಿಯ ಧ್ಯೋತಕವಾಗಿ ಜಗನ್ಮೋಹನ ಅರಮನೆ ಆರ್ಟ್ ಗ್ಯಾಲರಿಯನ್ನು ನವೀಕೃತಗೊಳಿಸಿ ಅವರಿಗೆ ಸಮರ್ಪಿಸುತ್ತಿದ್ದೇವೆ" ಎಂದು ಹೇಳಿದರು. ವಿವಿಗೆ ಜಯಚಾಮರಾಜ ಒಡೆಯರ್ ಹೆಸರಿಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ರಾಷ್ಟ್ರಪತಿಗಳಿಗೆ ಜಯಚಾಮರಾಜ ಒಡೆಯರ್ ಜನ್ಮ ಶತಾಬ್ದಿಗೆ ಆಹ್ವಾನ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 8 ಸಾಧಕರಿಗೆ ಜಯಚಾಮರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯೋಗ ಕ್ಷೇತ್ರದಲ್ಲಿ ಬಿ.ಕೆ.ಎಸ್.ಐಯ್ಯಂಗಾರ್, ತತ್ವಶಾಸ್ತ್ರಜ್ಞ ಪ್ರೊ.ಎ.ಎಲ್.ಶಿವರುದ್ರಪ್ಪ, ಸಾಹಿತ್ಯ ಕ್ಷೇತ್ರದಲ್ಲಿ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ, ಸಂಸ್ಕೃತ ಸಾಹಿತ್ಯದಲ್ಲಿ ಲಕ್ಷ್ಮೀ ತಾತಾಚಾರ್, ಚಲನಚಿತ್ರ ಕ್ಷೇತ್ರದಿಂದ ಬಿ.ಸರೋಜಾದೇವಿ, ಸಮಾಜ ಸೇವೆಗೆ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ.ಸುಧಾಮೂರ್ತಿ, ವನ್ಯಜೀವಿ ಸಂರಕ್ಷಣೆಗೆ ಡಾ.ಅಜಯ್ ದೇಸಾಯಿ, ಕೃಷಿ ಕ್ಷೇತ್ರದಿಂದ ಸೈಯ್ಯದ್ ಘನಿಖಾನ್, ಕ್ರೀಡಾ ಕ್ಷೇತ್ರದಲ್ಲಿ ಪ್ರಣವಿ ಅರಸ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಮೋದಾದೇವಿ ಒಡೆಯರ್ ಅವರಿಂದ ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು ಪ್ರಮೋದಾದೇವಿ ಅವರ ಕಾಲಿಗೆ ನಮಸ್ಕರಿಸುವ ಮೂಲಕ ಸರಳತೆಗೆ ಸಾಕ್ಷಿಯಾದರು.