ಕ್ಲೀನ್ ಸಿಟಿ ಅಭಿಯಾನಕ್ಕೆ ಜಾವಗಲ್ ಶ್ರೀನಾಥ್ ರಾಯಭಾರಿ
ಮೈಸೂರು ಮಹಾನಗರ ಪಾಲಿಕೆಯು ಮೈಸೂರು ನಗರದ ಸ್ವಚ್ಛ ಭಾರತ ಅಭಿಯಾನದ ರಾಯಭಾರಿಯಾಗಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರನ್ನು ನೇಮಿಸುತ್ತಿದೆ.
ಮೈಸೂರು, ಮೇ 30 : ಈ ಬಾರಿ ಕೈ ತಪ್ಪಿದ ಕ್ಲೀನ್ ಸಿಟಿ ಪಟ್ಟವನ್ನು ಮತ್ತೊಮ್ಮೆ ಮುಡಿಗೇರಿಸಿಗೊಳ್ಳಲು ಮೈಸೂರು ಮಹಾನಗರಪಾಲಿಕೆ ಈಗಲೇ ಸಜ್ಜಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಇಂದು ಮೈಸೂರು ನಗರ ಸ್ವಚ್ಛ ಭಾರತ ಅಭಿಯಾನದ ರಾಯಭಾರಿಯಾಗಲು ಖ್ಯಾತ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಮೈಸೂರು ಮಹಾನಗರ ಪಾಲಿಕೆ ಮೂಲಗಳಿಂದ ತಿಳಿದುಬಂದಿದೆ.
ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಿ. ಜಗದೀಶ್ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರ ನಿವಾಸಕ್ಕೆ ಭೇಟಿ ನೀಡಿ ಮೈಸೂರು ನಗರದ ಸ್ವಚ್ಛ ಭಾರತ ಅಭಿಯಾನದ ರಾಯಭಾರಿಯಾಗುವಂತೆ ಮನವಿ ಮಾಡಿದರು. ಪಾಲಿಕೆ ಆಯುಕ್ತರ ಮನವಿಗೆ ಜಾವಗಲ್ ಶ್ರೀನಾಥ್ ಒಪ್ಪಿಗೆ ಸೂಚಿಸಿದ್ದಾರೆ
ಈಗಾಗಲೇ ಮೈಸೂರು ರಾಜವಂಶಸ್ಥ ಯದುವೀರ್ ಅವರು ಮೈಸೂರು ಸ್ವಚ್ಛ ಅಭಿಯಾನದ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ವಚ್ಛನಗರಗಳಲ್ಲಿ ಹಿಂದೆ ಮೈಸೂರು ನಗರ ಮೊದಲ ಸ್ಥಾನ ಪಡೆದಿದ್ದ ವೇಳೆ ಕಾರ್ಯಕ್ರಮವನ್ನು ಮತ್ತಷ್ಟು ಯಶಸ್ವಿಯಾಗಿ ಜಾರಿಗೆ ತರಲು ಮೈಸೂರು ಮಹಾನಗರ ಪಾಲಿಕೆ ನಿರ್ಧರಿಸಿ ಸ್ವಚ್ಛ ಅಭಿಯಾನ' ಆರಂಭಿಸಿತ್ತು. ಆ ಬಳಿಕ ಮೈಸೂರು ನಗರ ಸ್ವಚ್ಛ ಭಾರತ ಅಭಿಯಾನದ ರಾಯಭಾರಿಯಾಗಿ ಯದುವೀರ್ ಅವರು ನೇಮಕಗೊಂಡಿದ್ದರು.