ಮೈಸೂರು ದಸರಾ; 30 ನಿಮಿಷದಲ್ಲಿ ಮುಗಿಯಲಿದೆ ಜಂಬೂಸವಾರಿ ಮೆರವಣಿಗೆ
ಮೈಸೂರು, ಅಕ್ಟೋಬರ್ 21: ಕೊರೊನಾ ಸೋಂಕಿನ ಕಾರಣವಾಗಿ ಈ ಬಾರಿ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಅರಮನೆಗೆ ಆಚರಣೆಗಳನ್ನು ಸೀಮಿತಗೊಳಿಸಲಾಗಿದೆ. ಹಾಗೆಯೇ ಜಂಬೂಸವಾರಿ ಮೆರವಣಿಗೆಯನ್ನೂ ಕೇವಲ 500 ಮೀಟರ್ ಗೆ ಸೀಮಿತಗೊಳಿಸಿ ಮುಕ್ತಾಯಗೊಳಿಸಲಾಗುತ್ತದೆ.
ಈ ಬಾರಿ ಕೇವಲ 30 ನಿಮಿಷದಲ್ಲಿ ಜಂಬೂಸವಾರಿ ಮೆರವಣಿಗೆಯು ಮುಕ್ತಾಯಗೊಳ್ಳುತ್ತದೆ. ಪ್ರತಿ ಬಾರಿಯೂ ದಸರಾದಲ್ಲಿ ವಿಜೃಂಭಣೆಯಿಂದ ಜಂಬೂಸವಾರಿ ಮೆರವಣಿಗೆ ಹೊರಡುತ್ತಿತ್ತು. ಮೈಸೂರು ಅರಮನೆ ಆವರಣದಿಂದ ಆರಂಭವಾಗಿ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದವರೆಗೂ 5 ಕಿಲೋ ಮೀಟರ್ ವರೆಗೆ ಜಂಬೂಸವಾರಿ ಮೆರವಣಿಗೆ ವೈಭವದಿಂದ ನಡೆಯುತ್ತಿತ್ತು. ಆದರೆ ಈ ಬಾರಿ ಜಂಬೂಸವಾರಿಯೂ ಸರಳವಾಗಿದ್ದು, ಕೇವಲ 500 ಮೀಟರ್ಗೆ ಮುಗಿಯಲಿದೆ.
ಮೆರವಣಿಗೆಯಲ್ಲಿ ಕೊರೊನಾ ಜಾಗೃತಿ ಮೂಡಿಸುವ ಹಾಗೂ ಸರ್ಕಾರದ ಸಾಧನೆ ವಿವರಿಸುವ 2 ಸ್ತಬ್ಧ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಪಥ ಸಂಚಲನಕ್ಕೆ 4 ಪೋಲಿಸ್ ತುಕಡಿ, ಅಶ್ವಾರೋಹಿ ದಳದ ತುಕಡಿ ಇರಲಿವೆ. ಜಂಬೂಸವಾರಿಯಲ್ಲಿ 300 ಜನರ ವೀಕ್ಷಣೆಗೆ ಅವಕಾಶ ನೀಡಲಾಗಿದೆ.
ಅಕ್ಟೋಬರ್ 26 ರಂದು ಜಂಬೂ ಸವಾರಿ ನಡೆಯಲಿದ್ದು, ಮಧ್ಯಾಹ್ನ 2:59 ರಿಂದ 3:20 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಸಿಎಂ ಯಡಿಯೂರಪ್ಪ ನವರು ಅರಮನೆಯ ಉತ್ತರ ದ್ವಾರ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡುತ್ತಾರೆ. ನಂತರ ಮಧ್ಯಾಹ್ನ 3:40ರಿಂದ 4:15 ರೊಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಅಭಿಮನ್ಯುವಿನ ಬೆನ್ನ ಮೇಲೆ ಚಿನ್ನದ ಅಂಬಾರಿ ಇಟ್ಟು ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುತ್ತಾರೆ. 30 ನಿಮಿಷದಲ್ಲಿ ಜಂಬೂಸವಾರಿ ಅಂತ್ಯಗೊಳ್ಳಲಿದೆ.