ತನ್ವೀರ್ ಸೇಠ್ ಕೊಲೆ ಯತ್ನಕ್ಕೆ ತಿಂಗಳು; ಎಲ್ಲಿಗೆ ಬಂದಿದೆ ಪ್ರಕರಣ?
ಮೈಸೂರು, ಡಿಸೆಂಬರ್ 17: ಶಾಸಕ ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣ ಇತ್ಯರ್ಥಗೊಳ್ಳಲು ಇನ್ನೂ ಒಂದು ತಿಂಗಳ ಕಾಲಾವಕಾಶ ಅವಶ್ಯಕವಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.
ಶಾಸಕ ತನ್ವೀರ್ ಸೇಠ್ ಮೇಲೆ ಕತ್ತಿಯಿಂದ ಹಲ್ಲೆ, ತೀವ್ರ ಗಾಯ
ನಗರದಲ್ಲಿ ಇಂದು ಜನಸ್ನೇಹಿ ಕಾರ್ಯಾಗಾರ ಉದ್ಘಾಟನೆ ಸಂದರ್ಭದಲ್ಲಿ, ಶಾಸಕ ತನ್ವೀರ್ ಸೇಠ್ ಪ್ರಕರಣ ನಡೆದು ಒಂದು ತಿಂಗಳಾದರೂ, ಆರೋಪಿ ಸ್ಥಳದಲ್ಲೇ ಸಿಕ್ಕರೂ ಈ ಪ್ರಕರಣ ಅಂತ್ಯ ಕಂಡಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, "ಪ್ರಕರಣ ಮುಗಿಸಲು ಇನ್ನೂ ಒಂದು ತಿಂಗಳು ಬೇಕಾಗುತ್ತದೆ. ನಾವು ಯಾವುದೇ ಅಥವಾ ಯಾರದ್ದೇ ಒತ್ತಡಕ್ಕೆ ಮಣಿದಿಲ್ಲ. ಇಲ್ಲಿಯವರೆಗೆ ಪ್ರಕರಣದಲ್ಲಿ 7 ಮಂದಿ ಆರೋಪಿಗಳನ್ನು ಬಂಧಿಸಿದ್ದೇವೆ. ಪ್ರಕರಣದ ಹಿಂದೆ ಸಂಘಟನೆಯೊಂದರ ಕೈವಾಡ ಇದೆ ಎನ್ನುವ ಬಗ್ಗೆಯೂ ಈಗಲೇ ಹೇಳಲಾಗುವುದಿಲ್ಲ. ಪ್ರಕರಣ ತನಿಖೆ ಹಂತದಲ್ಲಿ ಇರುವುದರಿಂದ ಈ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ" ಎಂದರು.
"ನಾವು ಕಾಲಕಾಲಕ್ಕೆ ಕೋರ್ಟ್ಗೆ ವರದಿ ಸಲ್ಲಿಸುತ್ತಿದ್ದೇವೆ. ಚಾರ್ಜ್ಶೀಟ್ ಸಲ್ಲಿಸಲು 90 ದಿನಗಳ ಅವಕಾಶ ಇದೆ. ಅಷ್ಟರಲ್ಲಿ ಸಮಗ್ರ ತನಿಖೆ ಮಾಡಿ ವರದಿ ಸಲ್ಲಿಸುತ್ತೇವೆ" ಎಂದು ತಿಳಿಸಿದರು.