ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಮನೆ ಮೇಲೆ ಐಟಿ ದಾಳಿ
ಮೈಸೂರು, ಏಪ್ರಿಲ್ 24: ಮುಖ್ಯಮಂತ್ರಿ ಸಿದ್ದರಾಮಯ್ಯ ಪರಮಾಪ್ತ ಎಚ್.ಸಿ. ಮಹದೇವಪ್ಪ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಲೋಕೋಪಯೋಗಿ ಸಚಿವ, ಪ್ರಭಾವ ಕಾಂಗ್ರೆಸ್ ನಾಯಕ ಮಹದೇವಪ್ಪ ಅವರ ಮೈಸೂರಿನ ವಿಜಯನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಗಿದೆ.
ದಾಳಿ ವೇಳೆ ಮಹದೇವಪ್ಪ ಮನೆಯಲ್ಲೇ ಇದ್ದರು ಎಂದು ತಿಳಿದು ಬಂದಿದೆ. ಅವರು ಇಂದು ತಿ ನರಸೀಪುರಕ್ಕೆ ಪ್ರಚಾರಕ್ಕೆ ತೆರಳಬೇಕಾಗಿತ್ತು. ಆದರೆ ದಾಳಿ ಹಿನ್ನೆಲೆಯಲ್ಲೇ ಮನೆಯಲ್ಲೇ ಉಳಿದುಕೊಂಡಿದ್ದಾರೆ.
ಮನೆ ಮೇಲೆ ಎಷ್ಟು ಜನ ದಾಳಿ ಮಾಡಿದ್ದಾರೆ, ಎಲ್ಲೆಲ್ಲಾ ದಾಳಿ ನಡೆಸಲಾಗಿದೆ ಎಂಬ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಸದ್ಯಕ್ಕೆ ಅಧಿಕಾರಿಗಳು ಕುಟುಂಬದವರನ್ನು ವಿಚಾರಣೆ ನಡೆಸುತ್ತಿದ್ದು, ಮನೆಯಲ್ಲಿ ಅಪರಿಶೀಲನೆ ಪರಿಶೀಲನೆ ಮುಂದುವರಿಸಿದ್ದಾರೆ. ಜೊತೆಗೆ ದಾಖಲೆ ಪತ್ರಗಳನ್ನೂ ಪರಿಶೀಲನೆ ನಡೆಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಆನೆಕಲ್ ಕಾಂಗ್ರೆಸ್ ನಾಯಕ ಶಿವಣ್ಣ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಇದೀಗ ಮತ್ತೋರ್ವ ಕಾಂಗ್ರೆಸ್ ನಾಯಕರ ಮನೆ ಮೇಲೆ ಚುನಾವಣೆಗೂ ಕೆಲವೇ ದಿನ ಮೊದಲು ಐಟಿ ದಾಳಿ ನಡೆದಿದೆ.