ಟಗರುಗಳಂತೆ ಗುದ್ದಾಡುತ್ತಿದ್ದವರು ವೇದಿಕೆಯಲ್ಲಿ ಕುಚುಕು ಗೆಳೆಯರಾದರು
Recommended Video
ಮೈಸೂರು, ಜನವರಿ 20: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಎಚ್.ವಿಶ್ವನಾಥ್ ಕೇವಲ ರಾಜಕೀಯ ವೈರಿಗಳಷ್ಟೆ, ವೈಯಕ್ತಿಕವಾಗಿ ಅವರು ಆತ್ಮೀಯ ಸ್ನೇಹಿತರು ಎಂಬುದು ಇದೀಗ ಸಾಬೀತಾಗಿದೆ.
ಸದಾ ಒಬ್ಬರನೊಬ್ಬರು ಟೀಕೆ ಮಾಡುವುದರಲ್ಲಿ, ಟಾಂಗ್ ನೀಡುವುದರಲ್ಲಿ ಕಾಲ ಕಳೆಯುತ್ತಾ ಜನರ ಮುಂದೆ ಟಗರುಗಳಂತೆ ಗುದ್ದಾಡುತ್ತಿದ್ದ ಮೂವರು ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಎಚ್.ವಿಶ್ವನಾಥ್ ರವರು ಒಂದೇ ವೇದಿಕೆಯಲ್ಲಿ ಕುಳಿತು ಕುಚುಕು ಗೆಳೆಯರಂತೆ ಮಾತನಾಡಿಕೊಳ್ಳುವ ಮೂಲಕ ಜನ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಂತೆ ಮಾಡಿದ್ದಾರೆ.
ಮೂವರನ್ನು ಒಂದು ಮಾಡಿದ ವೇದಿಕೆ
ಈ ಮೂವರು ನಾಯಕರನ್ನು ಒಂದು ಮಾಡಿದ್ದು ಕೆ.ಆರ್.ನಗರ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ನಿನ್ನೆ ನಡೆದ ಕ್ರಾಂತಿ ವೀರ ಸಂಗೊಳ್ಳಿರಾಯಣ್ಣ ಪ್ರತಿಮೆ ಉದ್ಘಾಟನಾ ಸಮಾರಂಭದ ವೇದಿಕೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವ ಕೆ. ಎಸ್. ಈಶ್ವರಪ್ಪ, ಮಾಜಿ ಸಚಿವ ಎಚ್. ವಿಶ್ವನಾಥ್ ಒಂದೇ ವೇದಿಕೆ ಹಂಚಿಕೊಂಡರು. ಅಕ್ಕ-ಪಕ್ಕದಲ್ಲೇ ಕುಳಿತು ಆತ್ಮೀಯವಾಗಿ ಮಾತುಕತೆ ನಡೆಸಿದರು. ಮೂವರು ನಾಯಕರು ಬೇರೆ ಬೇರೆ ಪಕ್ಷಗಳಲ್ಲಿ ಕಾರ್ಯ ನಿರ್ವಹಿಸಿದವರು. ಇದೀಗ ವಿಶ್ವನಾಥ್ ಮತ್ತು ಈಶ್ವರಪ್ಪ ಒಂದೇ ಪಕ್ಷದಲ್ಲಿದ್ದಾರೆ. ಆದರೆ ಈ ಇಬ್ಬರೂ ನಾಯಕರಿಗೆ ಸಿದ್ದರಾಮಯ್ಯರವರೇ ಪ್ರಮುಖ ರಾಜಕೀಯ ವೈರಿ.
ವೇದಿಕೆ ಹಂಚಿಕೊಂಡ ಕುರುಬ ಸಮುದಾಯದ ಪ್ರಭಾವಿ ನಾಯಕರು
ಅಚ್ಚರಿ ಮೂಡಿಸಿದ ಮೂವರ ಸಂಗಮ
ರಾಜಕೀಯವಾಗಿ ಈ ನಾಯಕರು ಬಹಿರಂಗವಾಗಿ ಬೈದಾಡಿಕೊಂಡಿದ್ದನ್ನು ನೋಡಿದ ಜನಕ್ಕೆ ಇವರು ಇಷ್ಟೊಂದು ಆತ್ಮೀಯವಾಗಿ ಇರಲು ಸಾಧ್ಯನಾ ಎಂಬ ಪ್ರಶ್ನೆ ಉದ್ಭವಿಸಿದ್ದಂತು ಸತ್ಯ. ಹಾಗಾದರೆ ಈ ಮೂವರು ನಿಜವಾಗಿಯೂ ಬದ್ಧ ವೈರಿಗಳಾ? ಎಂಬ ಸಂಶಯ ಪ್ರತಿಯೊಬ್ಬರನ್ನೂ ಕಾಡದಿರದು. ಇದಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ನೀಡಿದ ಉತ್ತರ ಹೀಗಿದೆ.
"ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು, ಮಾಜಿ ಸಂಸದ ಎಚ್.ವಿಶ್ವನಾಥ್ ಮತ್ತು ನಾನು ಒಂದೇ ವೇದಿಕೆಯಲ್ಲಿ ಇರುವುದನ್ನು ಮಾಧ್ಯಮಗಳಲ್ಲಿ ನೋಡಿದ ನಂತರ ಕೆಲವು ರಾಜಕೀಯ ಮುಖಂಡರುಗಳಿಗೆ ನಮ್ಮ ಬಗ್ಗೆ ಹೊಟ್ಟೆ ಕಿಚ್ಚು ಆರಂಭವಾಗಬಹುದು. ಆದರೆ ಇದರಿಂದ ರಾಜಕೀಯವಾಗಿ ಯಾವುದೇ ಲಾಭ ಪಡೆಯಲಾಗುವುದಿಲ್ಲ".
"ಸ್ನೇಹದ ವಿಷಯದಲ್ಲಿ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ"
"ಪಕ್ಷ ನಿಷ್ಠೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಸದನದ ಒಳಗೆ ಹಾಗೂ ಹೊರಗೆ ನಾನು ಸಿದ್ದರಾಮಯ್ಯನವರನ್ನು, ಅವರು ನನ್ನನ್ನು ಟೀಕಿಸುವುದು ಸಹಜ. ಹಾಗೆಂದ ಮಾತ್ರಕ್ಕೆ ನಾವು ವಿರೋಧಿಗಳಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಲ್ಲದೆ, ಎಚ್.ವಿಶ್ವನಾಥ್ ಸೇರಿದಂತೆ ನಾವು ಮೂವರು ರಾಜಕೀಯವಾಗಿ ವಿರೋಧಿಗಳಾಗಿದ್ದೆವು ಅಷ್ಟೆ. ಆದರೆ ಸ್ನೇಹದ ವಿಚಾರದಲ್ಲಿ ನಮ್ಮನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ" ಎಂದಿದ್ದಾರೆ.
ದೇಶ ಭಕ್ತ ಸಂಗೊಳ್ಳಿರಾಯಣ್ಣನ ಅನುಯಾಯಿಗಳಾದ ನಮ್ಮಲ್ಲಿ ಸಂಕುಚಿತ ಮನೋಭಾವನೆಯಿಲ್ಲ. ಸ್ವಚ್ಛ ಮನಸ್ಸಿನಿಂದ ರಾಜ್ಯದ ಅಭಿವೃದ್ಧಿಗೆ ದುಡಿಯುವುದರ ಜತೆಗೆ ರಾಯಣ್ಣ, ಕೆಂಪೇಗೌಡ, ಅಂಬೇಡ್ಕರ್, ಬಸವಣ್ಣ ಸೇರಿದಂತೆ ದೇಶದ ಮಹಾನ್ ಪುರುಷರ ಕಾರ್ಯಕ್ರಮಗಳಲ್ಲಿ ಇದೇ ರೀತಿ ಪಾಲ್ಗೊಳ್ಳುವುದಾಗಿ ಹೇಳುವ ಮೂಲಕ ಮತ್ತೊಂದಷ್ಟು ಕುತೂಹಲ ಕೆರಳಿಸಿದ್ದಾರೆ.
ಮಾನವೀಯ ಸಂಬಂಧದ ಬಗ್ಗೆ ಸಿದ್ದರಾಮಯ್ಯ ಮಾತು
ಸಿದ್ದರಾಮಯ್ಯ ಅವರು ಮಾತನಾಡಿ, "ರಾಜಕೀಯವಾಗಿ ಯಾರೂ ಶಾಶ್ವತ ಶತ್ರುಗಳಲ್ಲ. ರಾಜಕೀಯವಾಗಿ ವಿರೋಧ ಮಾತ್ರ ಇರಬೇಕು. ಯಾವ ನಾಯಕರೂ ವೈರತ್ವ ಮಾಡಬಾರದು. ವಿಶ್ವನಾಥ್, ಈಶ್ವರಪ್ಪ ಮತ್ತು ನನ್ನ ನಡುವೆ ಯಾವುದೇ ರೀತಿಯ ವೈಯಕ್ತಿಕ ವೈರತ್ವ ಇಲ್ಲ. ಮಾನವೀಯ ಸಂಬಂಧಗಳು ಬಹಳ ಮುಖ್ಯ. ಅದಕ್ಕೆ ಎಲ್ಲ ರಾಜಕೀಯ ಮುಖಂಡರು ಆದ್ಯತೆ ನೀಡಬೇಕು" ಎಂದು ಸಲಹೆ ನೀಡುವ ಮೂಲಕ, ನಾವುಗಳು ವೈಯಕ್ತಿಕ ವಿರೋಧಿಗಳಲ್ಲ ಎಂಬ ಸಂದೇಶವನ್ನು ಸಾರಿದರು.