ಡಿಸಿಎಂ ಅಶ್ವಥ್ ನಾರಾಯಣ ಸುಮ್ಮನಿದ್ದರೆ ಸರಕಾರಕ್ಕೆ ಒಳ್ಳೆಯದು
ಮೈಸೂರು, ಜೂನ್ 13: ವಿಧಾನ ಪರಿಷತ್ ಚುನಾವಣೆ ಎದುರಾಗುತ್ತಿದೆ. ಕಳೆದ ಉಪಚುನಾವಣೆಯಲ್ಲಿ ಸೋತ ಎಚ್.ವಿಶ್ವನಾಥ್ ಮತ್ತು ಎಂ.ಟಿ.ಬಿ ನಾಗರಾಜ್, ಸಿಎಂ ಯಡಿಯೂರಪ್ಪನವರಿಗೆ ಒತ್ತಡವನ್ನು ಹೇರುತ್ತಿದ್ದಾರೆ.
Recommended Video
ಈ ನಡುವೆ, ಬಿಜೆಪಿ ಮುಖಂಡ ಎಚ್.ವಿಶ್ವನಾಥ್, ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ವಿರುದ್ದ ಕಿಡಿಕಾರಿದ್ದಾರೆ. "ವಿಶ್ವನಾಥ್ ಮತ್ತು ಎಂಟಿಬಿಗೆ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡುವ ಯಾವುದೇ ಭರವಸೆಯನ್ನು ಬಿಜೆಪಿ ನೀಡಿರಲಿಲ್ಲ"ಎಂದು ಡಿಸಿಎಂ ಹೇಳಿದ್ದರು.
ರಾಜ್ಯಸಭೆಗೆ ನಾನು ಹೋಗಲ್ಲ, ನಮ್ಮ ಭರವಸೆ ಸಿಎಂ ಈಡೇರಿಸುತ್ತಾರೆ
"ನಮ್ಮ ಮತ್ತು ಸಿಎಂ ಯಡಿಯೂರಪ್ಪನವರ ನಡುವೆ ಏನೇನು ಮಾತುಕತೆ ನಡೆದಿತ್ತು ಎನ್ನುವುದು ಅಶ್ವಥ್ ನಾರಾಯಣ ಅವರಿಗೆ ಏನು ಗೊತ್ತು" ಎಂದು ಪ್ರಶ್ನಿಸಿರುವ ವಿಶ್ವನಾಥ್, "ಪರಿಷತ್ ಗೆ ಟಿಕೆಟ್ ನೀಡುವ ವಿಚಾರದಲ್ಲಿ ಅವರು ಏನೂ ಮಾತನಾಡದೇ ಸುಮ್ಮನಿದ್ದರೆ ಒಳ್ಳೆಯದು"ಎಂದು ಕಿಡಿಕಾರಿದ್ದಾರೆ.
"ಸೋತವರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎನ್ನುವುದು ಬಿಜೆಪಿಯ ನಿರ್ಧಾರ ಎನ್ನುವುದಾದರೆ, ಸೋತವರು ಸರಕಾರದಲ್ಲಿ ಉಪಮುಖ್ಯಮಂತ್ರಿಗಳಾಗಲಿಲ್ಲವೇ"ಎಂದು ವಿಶ್ವನಾಥ್, ಲಕ್ಷ್ಮಣ ಸವದಿಯ ಹೆಸರನ್ನು ಉಲ್ಲೇಖಿಸದೇ ಹೇಳಿದ್ದಾರೆ.
"ಹುಣಸೂರಿನಲ್ಲಿ ಒಮ್ಮೆ ಗೆದ್ದೆ ಮತ್ತೆ ಸೋತೆ. ಸೋಲುವುದು ಅಪರಾಧವೇ? ಖುದ್ದು ಸಿಎಂ ಯಡಿಯೂರಪ್ಪನವರೇ ಹಿಂದೊಮ್ಮೆ ಸೋತಿಲ್ಲವೇ? ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಗೌಡ್ರು, ಖರ್ಗೆ ಸೋತಿಲ್ಲವೇ"ಎಂದು ವಿಶ್ವನಾಥ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
"ನಮ್ಮನ್ನು ಸಚಿವರನ್ನಾಗಿ ಮಾಡುವ ಭರವಸೆ ಯಡಿಯೂರಪ್ಪನವರಿಂದ ಸಿಕ್ಕಿದೆ. ಇದಕ್ಕೆ ಶ್ರೀನಿವಾಸ ಪ್ರಸಾದ್ ಅವರೇ ಸಾಕ್ಷಿ"ಎಂದು ಎಚ್.ವಿಶ್ವನಾಥ್ ಹೇಳಿದ್ದಾರೆ.