ವಿಶೇಷ ವರದಿ: ಮಠಗಳ ಭೇಟಿ ಹಿಂದೆ 'ಸೈನಿಕ'ನ ತಂತ್ರ ಅಡಗಿದೆಯಾ?
ಮೈಸೂರು, ಜೂನ್ 2: ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಬಿಜೆಪಿ ಪಕ್ಷದೊಳಗೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದ್ದು, ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕೆಂಬ ಒತ್ತಾಯಗಳು ಕೂಡ ಕೇಳಿ ಬರುತ್ತಿವೆ.
ಇನ್ನು ಈಗಾಗಲೇ ಕೆಲವು ಶಾಸಕರು, ಸಚಿವರು ಯಡಿಯೂರಪ್ಪ ಪರ ನಿಂತು ಯೋಗೇಶ್ವರ್ ಅವರ ಮೇಲೆ ತಮ್ಮ ಆಕ್ರೋಶಗಳನ್ನು ಹೊರಹಾಕುತ್ತಿದ್ದಾರೆ. ಇದೆಲ್ಲದರ ನಡುವೆ ಯೋಗೇಶ್ವರ್ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಆಗ್ರಹಿಸುತ್ತಲೇ ಬಂದಿರುವ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಈ ಸಂಬಂಧ ಸಹಿ ಸಂಗ್ರಹದಲ್ಲಿ ತೊಡಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬಿಜೆಪಿ ಒಳಗೆ ಎಲ್ಲವೂ ಸರಿಯಿಲ್ಲ
ಸದ್ಯ ಕೋವಿಡ್ ನಿರ್ವಹಣೆ ವಿಚಾರದಲ್ಲಿ ಸರ್ಕಾರ ಒತ್ತಡದಲ್ಲಿದ್ದರೆ. ಅದರ ನಡುವೆ ಸಚಿವ ಯೋಗೇಶ್ವರ್ ಆಡಳಿತದಲ್ಲಿ ಮುಖ್ಯಮಂತ್ರಿ ಪುತ್ರ ಬಿ.ವೈ ವಿಜಯೇಂದ್ರ ಅವರ ಹಸ್ತಕ್ಷೇಪ ಸೇರಿದಂತೆ ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳು ಮುಜುಗರವನ್ನುಂಟು ಮಾಡಿದೆ. ಇದೊಂದು ರೀತಿಯಲ್ಲಿ ವಿರೋಧ ಪಕ್ಷಗಳಿಗೆ ಬಿಜೆಪಿ ಒಳಗೆ ಎಲ್ಲವೂ ಸರಿಯಿಲ್ಲ ಎಂಬ ಸಂದೇಶವನ್ನು ರವಾನಿಸಿದಂತಾಗಿದೆ.
ಇದೆಲ್ಲದರ ನಡುವೆ ಇವತ್ತು ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದರೊಂದಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು "ಸೈನಿಕ' ಸಿ.ಪಿ ಯೋಗೇಶ್ವರ್ ಅವರ ಬಹುಮುಖ್ಯ ಪಾತ್ರವಿರುವುದನ್ನು ಅಲ್ಲಗಳೆಯುವಂತಿಲ್ಲ. ಒಂದು ವೇಳೆ ಈ ಭಿನ್ನಾಭಿಪ್ರಾಯಕ್ಕೊಂದು ಇತಿಶ್ರೀ ಹಾಡದೆ ಮುಂದುವರೆದರೆ ಅದರ ಲಾಭ ಕಾಂಗ್ರೆಸ್ಗೆ ಆಗಲಿದೆ ಎಂಬುದನ್ನು ಕೂಡ ತಳ್ಳಿಹಾಕುವಂತಿಲ್ಲ.
ಅಚ್ಚರಿ ಮೂಡಿಸಿದ ಯೋಗೇಶ್ವರ್ ಮಠಗಳ ಭೇಟಿ
ಒಂದು ಕಡೆ ಬಿಜೆಪಿ ಶಾಸಕರು ಮುಗಿಬೀಳುತ್ತಿದ್ದರೆ, ಮತ್ತೊಂದೆಡೆ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರು ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ್ದಾರೆ. ಇದರ ನಡುವೆ ಯೋಗೇಶ್ವರ್ ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಭೇಟಿ ಮಾಡುತ್ತಿದ್ದಾರೆ. ಕೊರೊನಾದಂತಹ ಜಟಿಲ ಸಮಸ್ಯೆ ರಾಜ್ಯವನ್ನು ಕಾಡುತ್ತಿರುವ ಬೆನ್ನಲ್ಲೇ ಸರ್ಕಾರದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ತೇಪೆ ಹಚ್ಚದೆ ಹೋದರೆ ಪರಿಣಾಮ ಬೀರುವುದಂತು ಸತ್ಯ.
ಬಿಜೆಪಿ ಚಿನ್ಹೆ ಎಷ್ಟು ಮುಖ್ಯನೋ, ಬಿಎಸ್ವೈ ನಾಯಕತ್ವನೂ ಮುಖ್ಯ
ಈ ನಡುವೆ ತುಮಕೂರಿನಲ್ಲಿ ಶಾಸಕ ಜಿ.ಬಿ ಜ್ಯೋತಿ ಗಣೇಶ್ ಮಾತನಾಡಿ, ಬಿಜೆಪಿ ಚಿನ್ಹೆ ಎಷ್ಟು ಮುಖ್ಯನೋ, ಬಿ.ಎಸ್ ಯಡಿಯೂರಪ್ಪರವರ ನಾಯಕತ್ವ ಅಷ್ಟೇ ಮುಖ್ಯ. ಕೋವಿಡ್ ಕಾಯಿಲೆ ಹರಡಿರುವ ಇಂತಹ ಸಂದರ್ಭದಲ್ಲಿ ಜನರ ಪರವಾಗಿ ನಿಂತು ಅವರ ಕಷ್ಟ, ಸಮಸ್ಯೆ ಹಾಗೂ ನೋವುಗಳಿಗೆ ಸ್ಪಂದಿಸುವುದು ಮುಖ್ಯ. ಇದನ್ನು ಬಿಟ್ಟು ಅನವಶ್ಯಕ ಹೇಳಿಕೆ ನೀಡುವುದು ಸಚಿವ ಸಿ.ಪಿ ಯೋಗೇಶ್ವರ್ ಅವರಿಗೆ ಗೌರವ ತರುವಂತಹ ವಿಷಯ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೈನಿಕನನ್ನು ಕೈಬಿಡುವುದು ಅಷ್ಟು ಸುಲಭವಲ್ಲ
ಯೋಗೇಶ್ವರ್ ಅವರು ಒಬ್ಬ ಸಚಿವರಾಗಿ ಬೇರೆಯವರಿಗೆ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬಾರದು. ಯಡಿಯೂರಪ್ಪ ಅವರು ರೈಲ್ವೆ ಬೋಗಿಗಳಿಗೆ ಮುಖ್ಯ ಇಂಜಿನ್ ಇದ್ದಂತೆ, ಸಚಿವ ಯೋಗೇಶ್ವರ್ ಅವರು ಬಿಎಸ್ವೈ ನಾಯಕತ್ವದ ಬಗ್ಗೆ ಮಾತನಾಡುವ ಬದಲು ಕ್ಯಾಬಿನೆಟ್ನಿಂದ ಆಚೆ ಹೋಗಲಿ ಎಂದು ಹೇಳಿದ್ದಾರೆ. ಸದ್ಯ ಯೋಗೇಶ್ವರ್ ತಮ್ಮ ವಿರುದ್ಧ ಆರೋಪಗಳಿಗೆ ಉತ್ತರ ಕೊಡದೆ ಮಠಗಳಿಗೆ ಭೇಟಿ ನೀಡುತ್ತಿರುವುದನ್ನು ನೋಡಿದರೆ ಅವರದ್ದೇ ಆದ ತಂತ್ರಗಾರಿಕೆಯಲ್ಲಿ ತೊಡಗಿದ್ದಾರಾ ಎಂಬ ಸಂಶಯ ಕಾಡುತ್ತಿದೆ.
ಇಷ್ಟಕ್ಕೂ ಯೋಗೇಶ್ವರ್ ಅವರನ್ನು ಸಂಪುಟದಿಂದ ಕೈಬಿಡುವುದಾಗಲೀ, ಪಕ್ಷದಿಂದ ಉಚ್ಛಾಟಿಸುವುದಾಗಲೀ ಶಾಸಕರು ಒತ್ತಾಯ ಮಾಡಿದಷ್ಟು ಸುಲಭವಲ್ಲ ಎಂಬುದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಗೊತ್ತಿದೆ. ಹೀಗಾಗಿಯೇ ಅವರು ಮೌನವಾಗಿಯೇ ಎಲ್ಲವನ್ನೂ ನಿಭಾಯಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮುಂದೇನಾಗುತ್ತೆ ಕಾದು ನೋಡುವುದಷ್ಟೆ ನಮಗೆ ಬಾಕಿ ಉಳಿದಿರುವುದು.