ಜೆಡಿಎಸ್ ನಲ್ಲೇ ಉಳಿಯಲು ಜಿ.ಟಿ.ದೇವೇಗೌಡ ಹಾಕಿದ 3 ಷರತ್ತುಗಳು?
ಇನ್ನೇನು ಹದಿನೇಳು-ಹದಿನೆಂಟು ತಿಂಗಳಲ್ಲಿ ನಡೆಯಬೇಕಾಗಿರುವ ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಜಾತ್ಯಾತೀತ ಜನತಾದಳ ಪೂರ್ವ ಸಿದ್ದತೆಗಳನ್ನು ಮಾಡಿಕೊಂಡು ಬರುತ್ತಿದೆ. ದೇವೇಗೌಡ್ರು ಮತ್ತು ಎಚ್.ಡಿ.ಕುಮಾರಸ್ವಾಮಿಯವರು ಸಾಲುಸಾಲು ಸಭೆಗಳನ್ನು ನಡೆಸುತ್ತಿದ್ದಾರೆ.
ಕಾರ್ಯಕರ್ತರ, ಬೂತ್ ಮಟ್ಟದ ನಾಯಕರ ಸಭೆಯನ್ನು ನಡೆಸುತ್ತಿರುವ ಕುಮಾರಸ್ವಾಮಿ, ಪಕ್ಷದಲ್ಲಿದ್ದು ಪಕ್ಷದ ಪರವಾಗಿ ಕೆಲಸ ಮಾಡದೇ ಇರುತ್ತಿರುವ ನಾಯಕರ ಬಗ್ಗೆ ಗರಂ ಆಗಿದ್ದಾರೆ. ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರಿ, ಇಲ್ಲದಿದ್ದರೆ ಉತ್ಸಾಹೀ ಯುವಕರನ್ನು ಮುನ್ನಲೆಗೆ ತರುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಕಾಂಗ್ರೆಸ್ಸಿಗೆ ಅಧಿಕಾರ ಬೇಕಾದರೆ ಹಳೇ ಗಂಡನ ಪಾದವೇ ಗತಿ!
ಪಕ್ಷದಲ್ಲಿದ್ದರೂ ಪಕ್ಷದ ವಿರುದ್ದವಾಗಿ ಕೆಲಸ ಮಾಡುತ್ತಿರುವವರನ್ನು ನಿರ್ದಾಕ್ಷಿಣ್ಯವಾಗಿ ಉಚ್ಚಾಟಿಸಲಾಗುವುದು ಎಂದು ಜೆಡಿಎಸ್ ವರಿಷ್ಠ ದೇವೇಗೌಡ್ರು ಎಚ್ಚರಿಕೆಯನ್ನು ನೀಡಿದ್ದಾರೆ. ಇದು ಪರೋಕ್ಷವಾಗಿ ಕೋಲಾರದ ಜೆಡಿಎಸ್ ಮುಖಂಡರಿಗೆ ನೀಡಿದ ಎಚ್ಚರಿಕೆಯಾಗಿತ್ತು.
ಅದೇ ರೀತಿ, ಮೈಸೂರು ಭಾಗದ ಪ್ರಭಾವಿ ನಾಯಕ ಮತ್ತು ಒಂದು ಕಾಲದಲ್ಲಿ ದೊಡ್ಡೇಗೌಡ್ರ ಪರಮಾಪ್ತರಾಗಿದ್ದ ಜಿ.ಟಿ.ದೇವೇಗೌಡ ಅವರು, ಕಾಂಗ್ರೆಸ್ ಸೇರುವುದಾಗಿ ಹೇಳಿದ್ದಾರೆ. ಆದರೆ, ಜೆಡಿಎಸ್ ಆಪ್ತಮೂಲಗಳ ಪ್ರಕಾರ, ಗೌಡ್ರಿಗೆ ಅವರು ಪಕ್ಷ ಬಿಟ್ಟು ಹೋಗುವುದು ಇಷ್ಟವಿಲ್ಲ. ಹಾಗಾಗಿ, ಅವರ ಜೊತೆ, ಗಣೇಶ ಹಬ್ಬದ ಮುನ್ನಾದಿನ ಇನ್ನೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆ ವೇಳೆ, ಜಿಟಿಡಿ ಮೂರು ಷರತ್ತನ್ನು ಇಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ದೇವೇಗೌಡರು ಗರಂ; ಜೆಡಿಎಸ್ ಶಾಸಕ ಪಕ್ಷದಿಂದ ಉಚ್ಛಾಟನೆ?
ದೇವೇಗೌಡ್ರು, ಜಿ.ಟಿ.ದೇವೇಗೌಡ್ರನ್ನು ಕರೆಸಿ ಇನ್ನೊಂದು ಸುತ್ತಿನ ಮಾತುಕತೆ
ಮಂಡ್ಯ ಜಿಲ್ಲೆಯೊಂದರ ಅಜ್ಞಾತ ಸ್ಥಳದಲ್ಲಿ ದೇವೇಗೌಡ್ರು, ಜಿ.ಟಿ.ದೇವೇಗೌಡ್ರನ್ನು ಕರೆಸಿ ಇನ್ನೊಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರೆ. ಇತ್ತೀಚೆಗೆ ದೇವೇಗೌಡ್ರ ಬಳಿ ಜಿಟಿಡಿ ವಿಚಾರವನ್ನು ಪ್ರಸ್ತಾವಿಸಿದಾಗ, ಅವರ ಬಗ್ಗೆ ಸಾಫ್ಟ್ ಕಾರ್ನರ್ ತೋರಿದ್ದರು. ಜಿಟಿಡಿ ಪಕ್ಷ ವಿರೋಧಿ ಕೆಲಸವನ್ನು ಮಾಡುತ್ತಿಲ್ಲ, ಹಾಗಾಗಿ, ಅವರನ್ನು ಪಕ್ಷದಿಂದ ಉಚ್ಚಾಟಿಸುವ ಕೆಲಸ ಮಾಡುವುದಿಲ್ಲ ಎಂದು ದೇವೇಗೌಡ್ರು ಹೇಳಿದ್ದರು. ಗೌಡ್ರ ಜೊತೆಗಿನ ಭೇಟಿಯ ವೇಳೆ ಜಿಟಿಡಿ ಮೂರು ಷರತ್ತನ್ನು ವಿಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ನನಗೆ ಮತ್ತು ಪುತ್ರ ಹರೀಶ್ ಗೌಡಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್
ಕಾಂಗ್ರೆಸ್ ಪಕ್ಷ ಸೇರಬೇಕಾದರೆ ನನಗೆ ಮತ್ತು ಪುತ್ರ ಹರೀಶ್ ಗೌಡಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು, ಅದನ್ನು ಖಚಿತ ಪಡಿಸಿದರೆ ಮಾತ್ರ ತಾನು ಕಾಂಗ್ರೆಸ್ ಸೇರುವುದಾಗಿ ಜಿ.ಟಿ.ದೇವೇಗೌಡ ಹೇಳಿದ್ದರು. ಈ ವಿಚಾರವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ತಿಳಿಸಿರುವುದಾಗಿ ಜಿಟಿಡಿ ಹೇಳಿದ್ದರು. ಈಗ, ಅದೇ ಬೇಡಿಕೆಯನ್ನು ದೇವೇಗೌಡ್ರ ಮುಂದೆಯೂ ಜಿಟಿಡಿ ಇಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಮೈಸೂರು ರಾಜಕೀಯದಲ್ಲಿ ಸಾ.ರಾ.ಮಹೇಶ್ ತಲೆ ಹಾಕಬಾರದು
ಮೂಲಗಳ ಪ್ರಕಾರ, ಜಿ.ಟಿ.ದೇವೇಗೌಡ್ರ ಮುಂದಿಟ್ಟಿರುವ ಇನ್ನೊಂದು ಷರತ್ತು ಏನೆಂದರೆ, ಮೈಸೂರು ರಾಜಕೀಯದಲ್ಲಿ ಸಾ.ರಾ.ಮಹೇಶ್ ಅವರು ತಲೆ ಹಾಕಬಾರದು. ತಮ್ಮ ವ್ಯಾಪ್ತಿಯನ್ನು ಮೀರಿ ಮಹೇಶ್ ನಡೆದುಕೊಳ್ಳಬಾರದು. ಅನಾವಶ್ಯಕವಾಗಿ ಮಹೇಶ್ ಅವರು ಮೈಸೂರು ಜೆಡಿಎಸ್ ನಲ್ಲಿ ಗೊಂದಲ ಹುಟ್ಟು ಹಾಕುತ್ತಿದ್ದಾರೆ. ಹಾಗಾಗಿ, ತಮ್ಮ ಕ್ಷೇತ್ರದ ವ್ಯಾಪ್ತಿಯನ್ನು ಬಿಟ್ಟು, ಒಟ್ಟಾರೆಯಾಗಿ ಜಿಲ್ಲೆಯ ರಾಜಕೀಯದಲ್ಲಿ ಮೂಗು ತೂರಿಸಬಾರದು ಎನ್ನುವ ಷರತ್ತನ್ನು ಜಿಟಿಡಿ ಹಾಕಿದ್ದಾರೆ ಎನ್ನುವ ಸುದ್ದಿಯಿದೆ.
ಎಚ್.ಡಿ.ಕುಮಾರಸ್ವಾಮಿಯವರು ಕೂಡಾ ಸಾ.ರಾ.ಮಹೇಶ್ ಅವರ ಮಾತನ್ನೇ ನಂಬುತ್ತಿದ್ದಾರೆ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಕೂಡಾ ಸಾ.ರಾ.ಮಹೇಶ್ ಅವರ ಮಾತನ್ನೇ ನಂಬುತ್ತಿದ್ದಾರೆ. ಇದಕ್ಕೆ, ಕಡಿವಾಣ ಹಾಕಬೇಕು, ಇನ್ನು, ಜಿಲ್ಲೆಯ ರಾಜಕೀಯದಲ್ಲಿ ಎಚ್ಡಿಕೆ ಎಷ್ಟು ಬೇಕೋ ಅಷ್ಟು ಮಾತ್ರ ಮಧ್ಯಪ್ರವೇಶಿಸಬೇಕು ಎನ್ನುವ ಮೂರನೇ ಷರತ್ತನ್ನು ಜಿ.ಟಿ.ದೇವೇಗೌಡ ಹಾಕಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇವರ ಷರತ್ತುಗಳಿಗೆ ದೇವೇಗೌಡ್ರ ತೀರ್ಮಾನ ಏನು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಾಗಿದೆ.
Recommended Video