ಮೈಸೂರು: ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಮಾದರಿ ಕದ್ದಿದ್ದಂತೆ!
ಮೈಸೂರು, ನವೆಂಬರ್ 22: ಮಲ್ಲಿಗೆ ನಗರಿಯಲ್ಲಿ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಉಳಿದಿರುವುದು ಕೇವಲ 48 ಗಂಟೆಗಳ ಅವಧಿಯಷ್ಟೇ. ಭ್ರಷ್ಟಾಚಾರದ ಹೆಸರಿನಲ್ಲಿಯೇ ಕೇಳಿಬರುತ್ತಿರುವ ಸಮ್ಮೇಳನಕ್ಕೆ ಮತ್ತೊಂದು ಕಪ್ಪುಚುಕ್ಕೆ ಎದುರಾಗುತ್ತಿದೆ.
ಅಕ್ಷರ ಜಾತ್ರೆಯ ಸ್ವಾಗತಕ್ಕೆ ದಿನಗಣನೆ ಆರಂಭ
ಸಮ್ಮೇಳನದ ಪ್ರಚಾರಕ್ಕೆ ಬಳಸಿದ್ದ ಕನ್ನಡ ರಥವೂ ನಕಲಿಯಾಗಿದೆ ಎಂಬ ಗೊಂದಲಗಳ ಬೆನ್ನಲ್ಲೇ ಸಮ್ಮೇಳನಕ್ಕಾಗಿ ನಿರ್ಮಾಣವಾಗುತ್ತಿರುವ ಪ್ರಧಾನ ವೇದಿಕೆಯೇ ನಕಲಿ ಅನ್ನೋ ಆಶ್ಚರ್ಯಕರ ಸಂಗತಿ ಬಯಲಾಗಿದೆ.
ಸಾಹಿತ್ಯ ಸಮ್ಮೇಳನಕ್ಕೆ ಬೃಹತ್ ಗಾತ್ರದ ಅಕ್ಷರ ರಚಿಸಿ ಸ್ವಾಗತ
ಏನಿದು ವೇದಿಕೆ ವಿವಾದ ..?
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಮ್ಮೇಳನಕ್ಕಾಗಿ ಬೃಹತ್ ವೇದಿಕೆ ಸಜ್ಜಾಗುತ್ತಿದೆ. ಇದೇ ಮೈದಾನದಲ್ಲಿ 2015ರ ಮಾರ್ಚ್ 1ರಂದು ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು. ಆಗ ಕಲಾವಿದ ಶಶಿಧರ್ ಹಡಪ ಮೈಸೂರು ಅರಮನೆಯ ದರ್ಬಾರ್ ಹಾಲ್ ಪರಿಕಲ್ಪನೆಯ ವೇದಿಕೆಯನ್ನು ನಿರ್ಮಿಸಿಕೊಟ್ಟಿದ್ದರು.
ಭ್ರಷ್ಟಾಚಾರ ನಡೆಯುತ್ತಿದೆಯೇ?
ಆಗ ವೇದಿಕೆಗಾಗಿ ಸುಮಾರು 15 ಲಕ್ಷ ರೂಪಾಯಿ ಖರ್ಚಾಗಿತ್ತು. ಈಗ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಅದೇ ಪರಿಕಲ್ಪನೆಯಡಿ ವೇದಿಕೆ ನಿರ್ಮಿಸುತ್ತಿದ್ದು, ಇದಕ್ಕಾಗಿ ಸುಮಾರು 20 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಒಬ್ಬರೇ ಕಲಾವಿದರಿಗೆ ಒಂದೇ ಪರಿಕಲ್ಪನೆಗೆ ಇಷ್ಟೊಂದು ಹಣ ನೀಡುತ್ತಿರುವುದು ಭ್ರಷ್ಟಾಚಾರವಲ್ಲದೆ ಮತ್ತೇನು ಎಂದು ಸಾಹಿತಿ ಬನ್ನೂರು ಕೆ. ರಾಜು ಪ್ರಶ್ನಿಸಿದ್ದಾರೆ.
ಹಳೆಯ ಪರಿಕರ
ಪ್ರಧಾನ ವೇದಿಕೆಯ ನಿರ್ಮಾಣಕ್ಕೆ ತಂದಿರುವ ಎಲ್ಲಾ ಪರಿಕರಗಳು 2015ರಲ್ಲಿ ಬಳಕೆಯಾದದ್ದೇ ಆಗಿವೆ. ಹಳೇ ವೇದಿಕೆಗೆ ಹೊಸ ಬಿಲ್ ಕೊಟ್ಟು ತರಿಸಿ ಸಾಹಿತ್ಯ ಪರಿಷತ್ ಅಕ್ರಮವೆಸಗಿದೆ. ಈಗಾಗಲೇ ಸಮ್ಮೇಳನದ ಪ್ರಚಾರಕ್ಕೆ ಹೊರಟ ಕನ್ನಡ ರಥವನ್ನೂ ಇದೇ ರೀತಿ ನಕಲು ಮಾಡಿದ್ದ ಸಾಹಿತ್ಯ ಪರಿಷತ್ ಈಗ ಮತ್ತೆ ವೇದಿಕೆಯನ್ನು ನಕಲು ಮಾಡಿ ಲಕ್ಷಾಂತರ ರೂಪಾಯಿ ದುಂದು ವೆಚ್ಚ ಮಾಡಿ ಭ್ರಷ್ಟಾಚಾರ ಮಾಡಲು ಹೊರಟಿರುವುದು ಸಾಹಿತಿಗಳ ವಲಯದ ಆಕ್ರೋಶಕ್ಕೆ ಕಾರಣವಾಗಿದೆ.
ಸಮ್ಮೇಳನಕ್ಕೆ ಟೆಂಡರ್ ಕರೆಯದೇ ಮೋಸ
ಸಾಹಿತ್ಯ ಸಮ್ಮೇಳನದಲ್ಲಿ ಬಳಸುವ ಎಲ್.ಇ.ಡಿ. ಪರದೆ, ಪೋಟೋ, ವಿಡಿಯೋ ಮಾಡುವ ಗುತ್ತಿಗೆಯನ್ನು ಯಾವುದೇ ಟೆಂಡರ್ ಕರೆಯದೆ ವಿತರಣೆ ಮಾಡಲಾಗಿದೆ ಎಂದು ಛಾಯಾಗ್ರಾಹಕ ಮೋಹನ್ ಆರೋಪಿಸಿದ್ದಾರೆ. ವಿಡಿಯೋ ಚಿತ್ರೀಕರಣ ಸೇರಿದಂತೆ ಇತರೆ ಕೆಲಸಗಳನ್ನು ಗುತ್ತಿಗೆ ಕರೆಯದರೆ ನಿಯಮ ಮೀರಿ ತಮಗೆ ಬೇಕಾದವರಿಗೆ ನೀಡುತ್ತಿದ್ದಾರೆ. ಈ ವಿಷಯವಾಗಿ ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಚೆನ್ನಪ್ಪನವರು ಪ್ರತಿಕ್ರಿಯಿಸಿದ್ದು ಸಮ್ಮೇಳನದ ಎಲ್ಲಾ ಕಾರ್ಯಕ್ರಮಗಳ ಚಿತ್ರೀಕರಣಕ್ಕೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ವಿತರಣೆ ಮಾಡಲಾಗಿದೆ ಎಂದಿದ್ದಾರೆ.
ಆರಂಭದಿಂದಲೂ ವಿವಾದದ ಸರಪಳಿ
ಒಟ್ಟಾರೆ ಸಾಂಸ್ಕೃತಿಕ ನಗರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಸಿದ್ಧತೆಗಳು ಆರಂಭವಾದ ದಿನದಿಂದಲೂ ವಿವಾದದ ಸರಪಳಿಯೇ ಬೆಳೆಯುತ್ತಿದೆ. ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಬೇಕಿರುವ ಸರ್ಕಾರ ಕಣ್ಮುಚ್ಚಿ ಕುಳಿತಿರುವುದೇ ಸಾಹಿತ್ಯ ಪರಿಷತ್ತಿನ ಇಂತಹ ಆಟಾಟೋಪಕ್ಕೆ ಕಾರಣವಾಗಿದೆ.