ಬಂದ್ ಗೆ ಸೆಡ್ಡು ಹೊಡೆಯಲಿದೆಯಾ ಬಿಜೆಪಿ ಪರಿವರ್ತನಾ ಯಾತ್ರೆ?
Recommended Video
ಮೈಸೂರು, ಜನವರಿ 25: ಇದೇ ಮೊದಲ ಬಾರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಗರಕ್ಕೆ ಆಗಮಿಸುತ್ತಿದ್ದಾರೆ. ಅವರ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇತ್ತ ಬಂದ್ ಬಿಸಿಯೂ ಸಹ ಮೈಸೂರಿಗರಿಗೆ ತಟ್ಟಿದೆ.
ಚಿತ್ರಗಳು : ಮೈಸೂರಿನಲ್ಲಿ ಅಮಿತ್ ಶಾ ಮೋಡಿ
ಶಾ ಆಗಮನದಿಂದ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಜತೆ ಜತೆಗೆ ಪರಿವರ್ತನಾ ಯಾತ್ರೆ ಎಲ್ಲಿ ವಿಫಲವಾಗುತ್ತದೋ ಎಂಬ ಆತಂಕ ಬಿಜೆಪಿಗರನ್ನು ಕಾಡುತ್ತಿದೆ.
ಕರ್ನಾಟಕ ಬಂದ್: ಅಮಿತ್ ಶಾ ಮುಂದೆ ಮುಜುಗರಕ್ಕೀಡಾಗುವ ಭಯದಲ್ಲಿ ಬಿಜೆಪಿ
ದೆಹಲಿಯಿಂದ ನೇರವಾಗಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಅಮಿತ್ ಷಾ ಆಗಮಿಸಲಿದ್ದಾರೆ. ಅಲ್ಲಿಂದ ನಾಡ ಅಧಿದೇವತೆ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದು ನಂತರ ಬಿಜೆಪಿ ಪರಿವರ್ತನೆ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಮಸ್ವಾಮಿ ವೃತ್ತದಿಂದ ರ್ಯಾಲಿ
ನಗರದ ರಾಮಸ್ವಾಮಿ ವೃತ್ತದಿಂದ ಆರಂಭವಾಗಲಿರುವ ಬೃಹತ್ ರ್ಯಾಲಿಯಲ್ಲಿ ಶಾ ಭಾಗವಹಿಸಲಿದ್ದು ನಂತರ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ಭದ್ರಕೋಟೆಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನಲ್ಲಿ ಅಮಿತ್ ಶಾ ಪರಿವರ್ತನೆ ಅಸ್ತ್ರ ಪ್ರಯೋಗ ಮಾಡಲಿದ್ದಾರೆ ಎಂಬ ನಂಬಿಕೆ ಬಿಜೆಪಿಯವರದಾಗಿದೆ.
2ನೇ ಬಾರಿಯೂ ಫ್ಲಾಪ್ ಶೋ?
ಸಂಭ್ರಮದ ನಡುವೆ ಬಿಜೆಪಿ ನಾಯಕರ ಮುಖದಲ್ಲಿ ಆತಂಕವೂ ಎದ್ದು ಕಾಣಿಸುತ್ತಿದೆ. ಕಳೆದ ವರ್ಷದ ನವೆಂಬರ್ 2ರಂದು ಬೆಂಗಳೂರಿನಲ್ಲಿ ಆರಂಭಗೊಂಡ ಬಿಜೆಪಿಯ ಪರಿವರ್ತನಾ ಯಾತ್ರೆಗೆ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರೇ ಚಾಲನೆ ನೀಡಿದ್ದರು. ಆದರೆ, ಆ ಸಮಾವೇಶದಲ್ಲಿ ನಿರೀಕ್ಷಿತ ಪ್ರಮಾಣದಷ್ಟು ಕಾರ್ಯಕರ್ತರು ಭಾಗವಹಿಸದೇ ಇದ್ದುದು ಶಾ ಬೇಸರಕ್ಕೆ ಮತ್ತು ಅಸಮಾಧಾನಕ್ಕೆ ಕಾರಣವಾಗಿತ್ತು.
ಇದೀಗ ಬಿಜೆಪಿ ಪರಿವರ್ತನಾ ಯಾತ್ರೆ ವರ್ಸಸ್ ಕರ್ನಾಟಕ ಬಂದ್ ಆಗಿ ಮಾರ್ಪಾಡಾಗಿದ್ದು ಮತ್ತೆ ಫ್ಲಾಪ್ ಶೋ ಆಗುವ ಭಯದಲ್ಲಿ ಬಿಜೆಪಿ ಪಾಳಯದವರಿದ್ದಾರೆ.
ಬಿಜೆಪಿ ಬೃಹತ್ ಸಮಾವೇಶಕ್ಕೆ ಸಕಲ ಸಿದ್ಧತೆ ನಡೆಸಿದೆ. 1 ಲಕ್ಷ ಚದರ ಅಡಿ ವಿಸ್ತಾರವಾದ ಶಾಮಿಯಾನ ಹಾಕಲಾಗಿದ್ದು 50 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಆದರೆ ಸಮಾವೇಶಕ್ಕೆ ಕರ್ನಾಟಕ ಬಂದ್ ಬಿಸಿ ತಟ್ಟುವ ಸಾಧ್ಯತೆ ಇದ್ದು, ಬಂದ್ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಪ್ರತಿಭಟನಾಕಾರರು ತಡೆಯುವ ಆತಂಕ ಬಿಜೆಪಿಗರಲ್ಲಿ ಮನೆ ಮಾಡಿದೆ.
ಜನ ಸೇರುವುದು ಅನುಮಾನ
ಕಾರಣ ಬಂದ್; ಬಿಜೆಪಿ ನಾಯಕರೇ ಆಫ್ ದಿ ರೆಕಾರ್ಡ್ ಹೇಳುವ ಪ್ರಕಾರ 50 ಸಾವಿರ ಜನ ಸೇರಲಿದ್ದಾರೆ ಎಂಬುದು ಸುಳ್ಳು. ಮಾಹಿತಿಯನ್ವಯ 6 ರಿಂದ 7 ಸಾವಿರ ಜನ ಸೇರಿದರೆ ಅದೇ ಹೆಚ್ಚು. ಈಗಾಗಲೇ ಮೈಸೂರಿಗೆ ರ್ಯಾಲಿಯಲ್ಲಿ ಭಾಗವಹಿಸಲೆಂದೇ ಹೊರಗಿನಿಂದ ಅಂದಾಜು 2 ಸಾವಿರ ಆಗಮಿಸಿದ್ದಾರಂತೆ. ಇನ್ನು ಸುಮಾರು 4 ಸಾವಿರ ಜನರ ಸುತ್ತ -ಮುತ್ತಲ ಪ್ರದೇಶದಿಂದ ಆಗಮಿಸಹುದು ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ. ಎಲ್ಲಾ ಸೇರಿದರೆ ಒಟ್ಟು 6-7 ಸಾವಿರ ಜನ!
ಜನ ಸೇರಿಸಲು ತಾಕೀತು
ಅಮಿತ್ ಶಾ ಆಗಮನಕ್ಕೆ ಇನ್ನೇನು ಕೆಲವೇ ಗಂಟೆಗಳ ಸಮಯವಿದೆ. ಇದರ ಮಧ್ಯೆ ಪರಿವರ್ತನಾ ಯಾತ್ರೆ ಬಗ್ಗೆ ಮಾಹಿತಿ ಪಡೆಯಲು ರಾಜ್ಯದ ಮೂವರು ಪ್ರಮುಖ ನಾಯಕರಿಗೆ ಕರೆ ಮಾಡಿ ಶಾ ಮಾತನಾಡಿದ್ದಾರೆ. ಕರೆಯಲ್ಲಿ ಬಂದ್ ಬಿಸಿ ಬಗ್ಗೆ ಶಾ ವಿಚಾರಿಸಿದ್ದು, ಏನಾದರೂ ಆಗಲಿ ಕಾರ್ಯಕ್ರಮದಲ್ಲಿ ಹೆಚ್ಚು ಜನ ತುಂಬಿರಬೇಕು. ಬಂದ್ ಬಿಸಿ ಕಾರ್ಯಕ್ರಮಕ್ಕೆ ತಟ್ಟದಂತೆ ನೋಡಿಕೊಳ್ಳಿ ಎಂದು ಖಡಕ್ಕಾಗಿಯೇ ಆದೇಶಿಸಿದ್ದಾರೆ ಎನ್ನಲಾಗಿದೆ.
ಈ ಮೂಲಕ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯಗೆ ನಮ್ಮ ತಾಕತ್ತು ತಿಳಿಯಪಡಿಸಬೇಕು ಎಂದಿದ್ದಾರಂತೆ. ಶಾ ಸೂಚನೆ ಮೇರೆಗೆ ಮೈಸೂರಿನಲ್ಲಿ ಬೀಡು ಬಿಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಯುವ ಮೋರ್ಚಾ ಜವಾಬ್ದಾರಿ ಹೊತ್ತಿರುವ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಸಂಘ ಪರಿವಾರದ ಓರ್ವ ನಾಯಕರು ಜನ ಸೇರಿಸುವ ಚಿಂತೆಯಲ್ಲಿದ್ದಾರೆ.