ಕೂಸಿಗೆ ಮುನ್ನವೇ ಕುಲಾವಿ: ಸಿದ್ದರಾಮಯ್ಯ-ದೇವೇಗೌಡ್ರ ಮಹತ್ವಾಕಾಂಕ್ಷೆಯ ರಾಜಕೀಯ ನಡೆ
ಈ ರಾಜಕೀಯ ಅನ್ನೋದು ನಿಂತ ನೀರಲ್ಲ ಅನ್ನೋ ಮಾತನ್ನು ಅದೆಷ್ಟು ನಮ್ಮ ರಾಜಕಾರಣಿಗಳು ಸತ್ಯ ಮಾಡಲು ಹೊರಟಿದ್ದಾರೆ ಎಂದರೆ, ಯಾರು, ಯಾವಾಗ ರಿವರ್ಸ್ ಹೊಡೆಯುತ್ತಾರೋ ಎಂದು ಹೇಳಲು ಸಾಧ್ಯವಾಗದ ಉದಾಹರಣೆಗಳು ನಡೆಯುತ್ತಲೇ ಇರುತ್ತದೆ.
ಕಳೆದ ವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಮತ್ತು ಸಂಸದರೂ ಆಗಿರುವ, ಸುರೇಶ್ ಅವರ ಮನೆಯ ಮೇಲೆ ಸಿಬಿಐ ದಾಳಿ ನಡೆದ ನಂತರ, ಹಲವು ಪೀಠಾಧಿಪತಿಗಳು ಡಿಕೆಶಿಯವರನ್ನು ಭೇಟಿಯಾಗಿ, ಧೈರ್ಯ ತುಂಬಿ ಬಂದಿದ್ದರು.
ಕುತೂಹಲ ಮೂಡಿಸಿದ ದೇವೇಗೌಡ-ಡಿ.ಕೆ. ಶಿವಕುಮಾರ್ ಭೇಟಿ!
ರಾಜಕಾರಣಿಗಳೂ ಡಿಕೆಶಿಯನ್ನು ಭೇಟಿಯಾಗಿದ್ದರು. ಅದರಂತೇ, ಸದ್ಯ ಜೆಡಿಎಸ್ ಶಾಸಕರಾಗಿರುವ ಜಿ.ಟಿ.ದೇವೇಗೌಡ್ರೂ ಭೇಟಿಯಾಗಿ ಬಂದಿದ್ದರು. ರಾಜಕೀಯ ವಲಯದಲ್ಲಿ ಇದು ಹಲವು, ಚರ್ಚೆ, ಅನುಮಾನ ಮತ್ತು ರಾಜಕೀಯ ಲೆಕ್ಕಾಚಾರಕ್ಕೂ ಕಾರಣವಾಗಿತ್ತು.
"ಸ್ವಂತ ತನ್ನ ಸಹೋದರನನ್ನೇ ಬಿಟ್ಟಿಲ್ಲ, ಇನ್ನು ನನ್ನನ್ನು ಬಿಟ್ಟಾರಾ'ಎಂದು ಜಿಟಿಡಿ, ಕಳೆದ ವರ್ಷ ತಮ್ಮದೇ ಪಕ್ಷದ ಎಚ್.ಡಿ.ಕುಮಾರಸ್ವಾಮಿಯವರ ವಿರುದ್ದ ಗುಡುಗಿದ್ದರು. ಜೆಡಿಎಸ್ಸಿನಲ್ಲಿ ನಾಮಕೇವಾಸ್ತೆ ಮಾತ್ರ ಜಿಟಿಡಿ ಇದ್ದಾರೆ ಎನ್ನುವುದು ಗೊತ್ತಿರುವ ವಿಚಾರ. ಆದರೆ, ಈಗ ಹೊಸದೊಂದು ರಾಜಕೀಯ ಲೆಕ್ಕಾಚಾರ ನಡೆಯುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಜೆಡಿಎಸ್ ಮುಖಂಡ ಜಿಟಿ ದೇವೇಗೌಡರಿಗೆ ಡಿಸಿಎಂ ಸ್ಥಾನದ ಆಫರ್!
ಸಿದ್ದರಾಮಯ್ಯ ಜೆಡಿಎಸ್ಸಿನ ಜಿ.ಟಿ.ದೇವೇಗೌಡ್ರ ವಿರುದ್ದ ಹೀನಾಯ ಸೋಲು
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿನ ಫಲಿತಾಂಶದ ಪೈಕಿ, ಇಡೀ ರಾಜ್ಯ ಕುತೂಹಲದಿಂದ ಎದುರು ನೋಡುತ್ತಿದ್ದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯನವರು ಸ್ಪರ್ಧಿಸಿದ್ದ ಚಾಮುಂಡೇಶ್ವರಿ ಮತ್ತು ಬಾದಾಮಿ. ಅದರಲ್ಲಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಜೆಡಿಎಸ್ಸಿನ ಜಿ.ಟಿ.ದೇವೇಗೌಡ್ರ ವಿರುದ್ದ ಹೀನಾಯವಾಗಿ ಮತ್ತು ಬಾದಾಮಿಯಲ್ಲಿ ಬಿಜೆಪಿಯ ಶ್ರೀರಾಮುಲು ವಿರುದ್ದ ಕನಿಷ್ಠ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ತಮ್ಮದೇ ಜಿಲ್ಲೆಯಲ್ಲಿ ಸಿದ್ದರಾಮಯ್ಯನವರಿಗಾದ ಸೋಲು, ಅವರಿಗೆ ಮುಖಭಂಗಕ್ಕೀಡಾಗುವಂತೆ ಮಾಡಿತ್ತು.
ಸಿದ್ದರಾಮಯ್ಯನವರನ್ನು ಮಣಿಸಲೇ ಬೇಕು ಎನ್ನುವ ದೇವೇಗೌಡ್ರ ಕನಸು
ತಮ್ಮ ಕಟ್ಟಾ ರಾಜಕೀಯ ವಿರೋಧಿ ಸಿದ್ದರಾಮಯ್ಯನವರನ್ನು ಮಣಿಸಲೇ ಬೇಕು ಎನ್ನುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರ ಕನಸೇನೋ ಈಡೇರಿತ್ತು. ಆದರೆ, ಜಿಟಿಡಿ ಮತ್ತು ಜೆಡಿಎಸ್ ನಡುವಿನ ಸಂಬಂಧ ಹಳಸುತ್ತಲೇ ಸಾಗಿತ್ತು. ಒಂದು ಹಂತಕ್ಕೆ ಜಿಟಿಡಿ, ಬಿಜೆಪಿ ಸೇರುತ್ತಾರೆ ಎನ್ನುವ ಮಾತೂ ಕೇಳಿ ಬರುತ್ತಿತ್ತು. "ನನಗೆ ಬಿಜೆಪಿಯಿಂದ ಡಿಸಿಎಂ ಆಫರ್ ಇತ್ತು" ಎನ್ನುವುದನ್ನು ಖುದ್ದು ಜಿಟಿಡಿ ಹೇಳಿದ್ದರು. ಅದೆಲ್ಲಾ ಈಗ ಮುಗಿದ ಅಧ್ಯಾಯ. ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ, ಯಾರೂ ಮಿತ್ರರಲ್ಲ ಎನ್ನುವ ಮಾತು, ಸದ್ಯ ಜಿಟಿಡಿ ಮತ್ತು ಸಿದ್ದರಾಮಯ್ಯನವರ ನಡುವಿನ ಹೊಸ ರಾಜಕೀಯ ಹೆಜ್ಜೆಯ ಬಗ್ಗೆ ಕೇಳಿ ಬರುತ್ತಿದೆ.
ಡಿಕೆಶಿ ಮತ್ತು ಜಿಟಿಡಿ ನಡುವಿನ ಮುಲಾಕಾತ್ ನಂತರ ಕೇಳಿ ಬರುತ್ತಿರುವ ಮಾತು
ಇದು, ಡಿಕೆಶಿ ಮತ್ತು ಜಿಟಿಡಿ ನಡುವಿನ ಮುಲಾಕಾತ್ ನಂತರ ಕೇಳಿ ಬರುತ್ತಿರುವ ಮಾತು. ಅದೇನಂದರೆ, ಇನ್ನು ಮುಂದೆ ಜಿ.ಟಿ.ದೇವೇಗೌಡ್ರು ನೇರವಾಗಿ ರಾಜ್ಯದ ಯಾವುದೇ ಅಸೆಂಬ್ಲಿ ಕ್ಷೇತ್ರದ ಚುನಾವಣಾ ಕಣದಲ್ಲಿ ಇರುವುದಿಲ್ಲ. ಇವರ ಬದಲಾಗಿ ಅವರ ಪುತ್ರ ರಾಜಕೀಯದಲ್ಲಿ ತಮ್ಮ ಭವಿಷ್ಯವನ್ನು ಕಾಣಲು ಮುಂದಾಗುತ್ತಾರೆ ಎನ್ನುವ ಸುದ್ದಿ. ಅದೇನು?
ಸಿದ್ದರಾಮಯ್ಯ-ದೇವೇಗೌಡರ ಮಹತ್ವಾಕಾಂಕ್ಷೆಯ ರಾಜಕೀಯ ನಡೆ
ಅದಿಷ್ಟೇ.. ಮೈಸೂರು ಜಿಲ್ಲಾ ವ್ಯಾಪ್ತಿಯ ಚಾಮುಂಡೇಶ್ವರಿ ಮತ್ತು ವರುಣಾದಲ್ಲಿ ಜಿ.ಟಿ.ದೇವೇಗೌಡರ ಕುಟುಂಬ ಕಣದಲ್ಲಿ ಇರುವುದಿಲ್ಲ. ಇದರಿಂದ, ಸಿದ್ದರಾಮಯ್ಯನವರಿಗೆ ಯಾವುದೇ ಬಲವಾದ ಸ್ಪರ್ಧಿಗಳು ಇರುವುದಿಲ್ಲ. ಇದಕ್ಕೆ, ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಮಾಡಬೇಕಾಗಿರುವುದೇನಂದರೆ ಹುಣಸೂರಿನಲ್ಲಿ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್ ಗೌಡಗೆ ಕಾಂಗ್ರೆಸ್ ಟಿಕೆಟ್ ನೀಡುವುದು. ಇದು, ಸದ್ಯದ ಮಟ್ಟಿಗೆ ಇಬ್ಬರಿಗೂ ಓಕೆಯಾಗಿದೆ. ಬಿಜೆಪಿ ಸರಕಾರ ಸರಿಯಾಗಿ ನಡೆದರೆ, ಚುನಾವಣೆಗೆ ಇನ್ನೂ ಮೂರು ವರ್ಷವಿದೆ. ಆದರೂ, ಕೂಸಿಗೂ ಮುನ್ನವೇ ಕುಲಾವಿ ಎನ್ನುವ ಮಾತಿನಂತೆ, ಸಿದ್ದರಾಮಯ್ಯ-ಜಿಟಿಡಿ ನಡುವಿನ ಮಹತ್ವಾಕಾಂಕ್ಷೆಯ ರಾಜಕೀಯ ನಡೆ ಹೀಗಿದೆ ಎಂದು ಹೇಳಲಾಗುತ್ತಿದೆ.