ಮೈಸೂರು ಜಿಲ್ಲಾ ನೂತನ ಎಸ್ಪಿಯಾಗಿ ಆರ್.ಚೇತನ್ ಅಧಿಕಾರ ಸ್ವೀಕಾರ
ಮೈಸೂರು, ಜೂನ್ 10: ಮೈಸೂರಿನ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಐಪಿಎಸ್ ಅಧಿಕಾರಿ ಆರ್.ಚೇತನ್ ಗುರುವಾರ ಅಧಿಕಾರ ಸ್ವೀಕರಿಸಿದರು.
ಮೈಸೂರು ಜಿಲ್ಲಾ ಎಸ್ಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿರ್ಗಮಿತ ಜಿಲ್ಲಾ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಅವರಿಂದ ಅಧಿಕಾರ ಸ್ವೀಕಾರ ಮಾಡಿಕೊಂಡರು.
ನಂತರ ಮಾತನಾಡಿದ ಆರ್.ಚೇತನ್, ""ನಾನು ಕರ್ನಾಟಕದವನೇ ಆಗಿರುವುದರಿಂದ ನನಗೆ ಮೈಸೂರಿನ ಬಗ್ಗೆ ಗೊತ್ತಿದೆ. ಮೈಸೂರಿನ ಜನರು ಸೌಮ್ಯ ಸ್ವಭಾವದವರು. ಜನರ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳಿಗೆ ತ್ವರಿತವಾಗಿ, ಸಾಂವಿಧಾನಿಕವಾಗಿ ಸ್ಪಂದಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ'' ಎಂದು ತಿಳಿಸಿದರು.
"ಜನಸ್ನೇಹಿ ಪೊಲೀಸ್ ವ್ಯವಸ್ಥೆ ಹಾಗೂ ಜನರ ಸಮಸ್ಯೆಯನ್ನು ಮಾನವೀಯತೆ ದೃಷ್ಟಿಯಿಂದ ಸ್ಪಂದಿಸುವ ಪೊಲೀಸ್ ವ್ಯವಸ್ಥೆ ತರಲು ಇಚ್ಛೆ ಪಡುತ್ತೇನೆ. ಮೈಸೂರು ಜಿಲ್ಲೆಯ ಮಹಿಳೆಯರು, ದುರ್ಬಲ ವರ್ಗದವರ ನೋವುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತೇನೆ. ಈ ಮೂಲಕ ಜಿಲ್ಲೆಯ ಜನಪ್ರತಿನಿಧಿಗಳ, ಸಾರ್ವಜನಿಕರ ಸಹಕಾರ ಕೋರುತ್ತೇನೆ'' ಎಂದು ಹೇಳಿದರು.