ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ಡಿ. ರೂಪಾ ಕಿಡಿ
ಮೈಸೂರು, ಜೂನ್ 23: ತಮ್ಮ ಕಾರ್ಯವೈಖರಿ ಮೂಲಕ ಮೈಸೂರು ಜನಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಇದೀಗ ಮಹಿಳಾ ಐಪಿಎಸ್ ಅಧಿಕಾರಿ ಡಿ. ರೂಪಾ ಕಿಡಿಕಾರಿದ್ದಾರೆ.
ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಲ್ಲಿ ಈಜುಕೊಳ ನಿರ್ಮಿಸಿದ್ದ ರೋಹಿಣಿ ಸಿಂಧೂರಿ, ಮೈಸೂರು ಭಾಗದ ಜನಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಐಎಎಸ್ ಅಧಿಕಾರಿಯ ಈ ನಡೆ ಸರ್ಕಾರದ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ನಡುವೆ ಈಜುಕೊಳ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ವರದಿ ನೀಡಿದ್ದ ಪ್ರಾದೇಶಿಕ ಆಯುಕ್ತರು, ಪ್ರಮುಖ ನ್ಯೂನತೆಗಳು ಹಾಗೂ ಕಾನೂನು ನಿಯಮಗಳ ಉಲ್ಲಂಘನೆ ಆಗಿರುವುದಾಗಿ ತಿಳಿಸಿದ್ದರು.
ಈ ಎಲ್ಲಾ ಬೆಳವಣಿಗೆಯ ಬಗ್ಗೆ ಟ್ವೀಟ್ ಮಾಡಿರುವ ಐಪಿಎಸ್ ಅಧಿಕಾರಿ ಡಿ.ರೂಪಾ, "ಕೊರೊನಾ ಹಾಗೂ ಆರ್ಥಿಕ ವ್ಯವಸ್ಥೆಯಿಂದ ಜನರು ಸಂತ್ರಸ್ತರಾಗಿರುವ ಸಂದರ್ಭದಲ್ಲಿ ಜನರ ಹಣ ಅಂದರೆ ಸಾರ್ವಜನಿಕ ಹಣವನ್ನು ಬಂಗಲೆಯಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಲು ಮುಂದಾಗಿದ್ದು, ಮೊಟ್ಟ ಮೊದಲನೆಯದಾಗಿ ರೋಹಿಣಿ ಐಎಎಸ್ ಅವರ ನೈತಿಕ ಪತನ ಎದ್ದು ತೋರಿಸುತ್ತದೆ. ಕಟ್ಟಲು ಪರವಾನಗಿ ತೆಗೆದುಕೊಂಡಿಲ್ಲ ಎನ್ನುವುದು ನಂತರದ ವಿಚಾರ ಎಂದಿರುವ ಅವರು ಕಟ್ಟುವುದನ್ನು ಮುಂದೂಡಬಹುದಿತ್ತು,'' ಎಂದು ಮಹಿಳಾ ಐಎಎಸ್ ಅಧಿಕಾರಿ ವಿರುದ್ಧ ಮಹಿಳಾ ಐಪಿಎಸ್ ಅಧಿಕಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.