ವಿಶ್ವಕ್ಕೆ ಭಾರತೀಯರು ಸಂಸ್ಕಾರ ಕಲಿಸಬಲ್ಲರು: ವಜೂಭಾಯ್ ವಾಲಾ
ಜನ ದುಡ್ಡಿನ ಹಿಂದೆ ಬಿದ್ದು ನೆಮ್ಮದಿಯ ಜೀವನದಿಂದ ದೂರಾಗುತ್ತಿದ್ದಾರೆ. ಆದರೆ ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಬದುಕು ಹಸನಾಗುತ್ತದೆ ಎಂದು ವಜೂಭಾಯ್ ವಾಲಾ ಹೇಳಿದರು
ಮೈಸೂರು , ಏಪ್ರಿಲ್ 3 : ಭಾರತೀಯರಿಗೆ ದೇಶಕಟ್ಟುವ ಶಕ್ತಿಯೊಂದಿಗೆ ವಿಶ್ವಕ್ಕೆ ಸಂಸ್ಕಾರ ಕಲಿಸುವ ಸಾಮರ್ಥ್ಯವೂ ಇದೆ ಎಂದು ರಾಜ್ಯಪಾಲ ವಜೂಭಾಯ್ ರೂಢಾಬಾಯ್ ವಾಲಾ ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ(ಇಸ್ಕಾನ್)ದ ವತಿಯಿಂದ ಏಪ್ರಿಲ್ 2 ಭಾನುವಾರದಂದು ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ 150 ಕೋಟಿ ರೂ. ವೆಚ್ಚದ ನವ ಬೃಂದಾವನ ಧಾಮದ ಶಿಲಾನ್ಯಾಸವನ್ನು ನೆರವೇರಿಸಿ, ಅವರು ಮಾತನಾಡಿದರು.['ಇಂದಿರಾ ಕ್ಯಾಂಟೀನ್'ಗೆ ಈರುಳ್ಳಿ-ಬೆಳ್ಳುಳ್ಳಿ ಸಂಕಟ]
ದೇಶದಲ್ಲಿ ಭೌತಿಕತೆ ಹಾಗೂ ಆಧ್ಯಾತ್ಮಿಕತೆಯ ಮಧ್ಯೆ ಸಂಘರ್ಷವೇರ್ಪಟ್ಟಿದೆ. ಎಲ್ಲರೂ ಭೋಗ ಜೀವನ ಶೈಲಿಗೆ ಮಾರು ಹೋಗಿದ್ದಾರೆ. ಇದರಿಂದ ಅವರ ಮಾನಸಿಕ, ದೈಹಿಕ ಶಾಂತಿ, ನೆಮ್ಮದಿ ಹಾಳಾಗುತ್ತಿದೆ. ದುಡ್ಡಿನ ಹಿಂದೆ ಬಿದ್ದು ನೆಮ್ಮದಿಯ ಜೀವನದಿಂದ ದೂರಾಗುತ್ತಿದ್ದಾರೆ. ಆದರೆ ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಬದುಕು ಹಸನಾಗುತ್ತದೆ ಎಂದರು.
ಇಸ್ಕಾನ್ ಸಂಸ್ಥೆ ವಿಶ್ವಕ್ಕೆ ಕೃಷ್ಣನ ಶಾಂತಿ ಸಂದೇಶಗಳನ್ನು ಸಾರುವ ಮೂಲಕ ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಇಲ್ಲಿನ ಇಸ್ಕಾನ್ ಸಂಸ್ಥೆಯ ಎಲ್ಲರೂ ಸಮಾಜದ ಅಭಿವೃದ್ಧಿಗೆ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದಾರೆ, ಅವರನ್ನು ಗೌರವಿಸುವ ಅಗತ್ಯತೆ ಇದೆ ಎಂದು ಇಸ್ಕಾನ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರು ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ, ಶಾಂತಿಯ ನಗರಿ, ಸಂಸ್ಕಾರಗಳ ನಗರಿ ಎಂದೆಲ್ಲಾ ಕರೆಸಿಕೊಂಡಿರುವ ಮೈಸೂರನ್ನು ಚಾಮುಂಡೇಶ್ವರಿ ಪೊರೆಯುತ್ತಿದ್ದು, ಬೃಂದಾವನ ಧಾಮದ ನಿರ್ಮಾಣದಿಂದ ಕೃಷ್ಣನ ಶ್ರೀರಕ್ಷೆಯೂ ಮೈಸೂರಿಗರಿಗೆ ಒಲಿಯಲಿದೆ ಎಂದು ಹೇಳಿದರು.