ಶತಮಾನ ಪೂರೈಸಿದ ಸಂಭ್ರಮದಲ್ಲಿ ಮೈಸೂರು ಸಿಲ್ಕ್
ಮೈಸೂರು, ಅಕ್ಟೋಬರ್, 19 : ಮೈಸೂರು ಸಿಲ್ಕ್ ಶತಮಾನ ಪೂರೈಸಿರುವ ಸವಿನೆನಪಿಗಾಗಿ ಅಂಚೆ ಇಲಾಖೆ ಮೈಸೂರು ಅರಮನೆ ಮತ್ತು ಮೈಸೂರು ಸಿಲ್ಕ್ ಚಿಹ್ನೆ ಹೊಂದಿರುವ ಅಂಚೆ ಚೀಟಿ ಹಾಗೂ ಕವರ್ಗಳನ್ನು ಅಕ್ಟೋಬರ್ 18ರ ಭಾನುವಾರದಂದು ಹೊರತಂದಿದೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾದ ಕೌಶಿಕ್ ಮುಖರ್ಜಿ ಅವರು ಬಿಡುಗಡೆಗೊಳಿಸಿದರು.
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ತನ್ನ ಶ್ರೇಷ್ಟ ಉತ್ಪನ್ನವಾದ ಮೈಸೂರು ಸಿಲ್ಕ್ ಸೀರೆ ಹಾಗೂ ಉತ್ಪನ್ನಗಳನ್ನು 2014-15ನೇ ಸಾಲಿನಲ್ಲಿ ದಾಖಲೆ ನಿರ್ಮಿಸಿದ್ದು, 146.42 ಕೋಟಿ ರೂ. ವಹಿವಾಟು ನಡೆಸಿ 27 ಕೋಟಿ ರೂ. ಲಾಭ ಗಳಿಸಿದೆ. ಈ ವರ್ಷ ಇದುವರೆಗೆ 75,000 ಮೈಸೂರು ಸಿಲ್ಕ್ ಸೀರೆಗಳನ್ನು ಮಾರಾಟ ಮಾಡಲಾಗಿದೆ ಎಂದು ಕೆ.ಎಸ್.ಐ.ಸಿ. ಅಧ್ಯಕ್ಷ ಡಿ. ಬಸವರಾಜ ತಿಳಿಸಿದ್ದಾರೆ.[ಗಂಗಾವತಿಯಲ್ಲೇ ಮೈಸೂರು ಸಿಲ್ಕ್ ರೇಷ್ಮೆ ಸೀರೆ ಕೊಳ್ಳಿ]
ನೈಜವಾದ ಮೈಸೂರು ಸಿಲ್ಕ್ ಸೀರೆಗಳು ಹಾಗೂ ಅದರ ಉತ್ಪನ್ನಗಳು ಮೈಸೂರು ಸಿಲ್ಕ್ ಅಧಿಕೃತ ಮಳಿಗೆಗಳನ್ನು ಬಿಟ್ಟು ಬೇರೆಲ್ಲೂ ಮಾರಾಟ ಮಾಡಲಾಗುವುದಿಲ್ಲ. ಕೆಲವು ಬಟ್ಟೆ ಅಂಗಡಿಗಳಲ್ಲಿ ಮೈಸೂರು ಸಿಲ್ಕ್ ಎಂದು ಕಳಪೆ ಗುಣಮಟ್ಟದ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದು, ಗ್ರಾಹಕರು ಎಚ್ಚರದಿಂದ ಇರಬೇಕೆಂದು ಡಿ. ಬಸವರಾಜ ವಿನಂತಿಸಿದರು.[]
'ಮೈಸೂರು ಸಿಲ್ಕ್ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಸಂಸ್ಥೆಯಾಗಿದ್ದು, ಕರ್ನಾಟಕ ಸರ್ಕಾರದ ಸಾರ್ವಜನಿಕ ಉದ್ಯಮಗಳ ಪೈಕಿ, ಶತಮಾನ ಪೂರೈಸಿ ಪ್ರಪ್ರಥಮ ಸಂಸ್ಥೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವಾಗಿದೆ. ಅಂಚೆ ಇಲಾಖೆ ಮೈಸೂರು ಅರಮನೆ ಮತ್ತು ಮೈಸೂರು ಸಿಲ್ಕ್ ಚಿಹ್ನೆ ಇರುವ ಅಂಚೆ ಚೀಟಿ ಹಾಗೂ ಕವರ್ಗಳನ್ನು ಬಿಡುಗಡೆ ಮಾಡಿರುವುದು ಹೆಮ್ಮೆ ಎನಿಸಿದೆ.[ಮೊಳಕಾಲ್ಮೂರು ಸೀರೆಗೂ ಹತ್ತಿದ ತೆಲಂಗಾಣ ಕಿಚ್ಚು]
ಅಕ್ಟೋಬರ್ 17ರ ಶನಿವಾರದಂದು ವಿಂಟೇಜ್ ಸೀರೆಗಳ ಸ್ಪರ್ಧೆಯನ್ನು ಕೆ.ಎಸ್.ಐ.ಸಿ. ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 126 ಸ್ಪರ್ಧಿಗಳ ಪೈಕಿ 3 ಜನರಿಗೆ ತಲಾ 15,000 ರೂ, 25 ಜನರಿಗೆ ತಲಾ 1,500 ರೂ. ಬಹುಮಾನ ನೀಡಲಾಯಿತು' ಎಂದು ಡಿ. ಬಸವರಾಜ ತಿಳಿಸಿದರು.