ಸಾಂಸ್ಕೃತಿಕ ನಗರಿಯಲ್ಲಿ ಉದ್ಘಾಟನೆಗೊಂಡ ದೇಶದ ಮೊದಲ ಶ್ರೀಗಂಧದ ಮ್ಯೂಸಿಯಂ
ಮೈಸೂರು, ಜನವರಿ 25: ಘಮ್.. ಎನ್ನುವ ಕಂಪು ಬೀರುವ ಶ್ರೀಗಂಧವು ಎಲ್ಲರಿಗೂ ಅಚ್ಚುಮೆಚ್ಚು. ಮೂಗಿನತ್ತ ಹಿಡಿದರೆ ಮತ್ತೆ ಮತ್ತೆ ಆಘ್ರಾಣಿಸಬೇಕೆನ್ನಿಸುವ ಈ ಮರವು ಜಗತ್ತಿನಲ್ಲೇ ಅತ್ಯಂತ ಪ್ರಸಿದ್ಧಿ ಮತ್ತು ಬೆಲೆ ಬಾಳುವ ಮರ ಕೂಡ ಆಗಿದೆ. ಇದೀಗ ಸಾಂಸ್ಕೃತಿಕ ನಗರಿಯಲ್ಲಿ ಸೋಮವಾರ ಶ್ರೀಗಂಧದ ಮ್ಯೂಸಿಯಂ ಅನ್ನು ಉದ್ಘಾಟಿಸಲಾಗಿದ್ದು, ಇದು ಇನ್ನೊಂದು ಪ್ರವಾಸೀ ಆಕರ್ಷಣೆ ಆಗಲಿದೆ.
ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಈ ಮರವು 3-4 ದಶಕಗಳ ಹಿಂದೆ ನಮ್ಮ ಅರಣ್ಯಗಳಲ್ಲಿ ಹೇರಳವಾಗಿತ್ತು. ಆದರೆ ಇದರ ದುಬಾರಿ ಬೆಲೆಗೆ ಕಳ್ಳರು ಲಗ್ಗೆಯಿಟ್ಟು ಶ್ರೀಗಂಧದ ಕುಲವನ್ನೆ ನಾಶ ಮಾಡತೊಡಗಿದ್ದಾರೆ. ಇದೀಗ ಈ ಮರವನ್ನು ಮ್ಯೂಸಿಯಂ ನಲ್ಲಿ ಇಟ್ಟು ಮುಂದಿನ ಪೀಳಿಗೆಯ ಜನರಿಗೆ ತೋರಿಸಬೇಕಾದ ಪರಿಸ್ಥಿತಿ ಬಂದೊದಗಿದೆ.
ಮೈಸೂರು ರಸ್ತೆಗಿಳಿದ 'ಅಂಬಾರಿ' ಡಬ್ಬಲ್ ಡೆಕ್ಕರ್ ಬಸ್
ಶ್ರೀಗಂಧದ ಬೇಡಿಕೆ ಮತ್ತು ಕೊರತೆ ಹೆಚ್ಚಾದಂತೆ ಬೇಡಿಕೆ ಪೂರೈಸಲು ಅರಣ್ಯ ಇಲಾಖೆಯು ರೈತರಿಗೆ ಉತ್ತಮ ತಳಿಯ ಗಿಡಗಳನ್ನು ನೀಡಿ ಬೆಳೆಸುತ್ತಿದೆ. ಆದರೆ ಎಷ್ಟೇ ಮುತುವರ್ಜಿ ಪೋಷಣೆಯೊಂದಿಗೆ ಬೆಳೆಸಿದರೂ ಮರವನ್ನು ಮಾರಾಟ ಮಾಡುವಂತಾಗಲು 20 ರಿಂದ 25 ವರ್ಷ ಸಮಯ ಬೇಕೇ ಬೇಕಾಗುತ್ತದೆ.
ಸರ್ಕಾರದ ಪ್ರೋತ್ಸಾಹದೊಂದಿಗೆ ರೈತರೂ ಬೆಳೆಸುತ್ತಿದ್ದಾರೆ
ಈ ಮರದ ಬೆಳವಣಿಗೆ ನಿಧಾನವಾಗಿದ್ದು, ಜಾಸ್ತಿ ವರ್ಷ ಆಗುತ್ತಿದ್ದಂತೆ ಹೆಚ್ಚು ಸುಗಂಧ ಮತ್ತು ದರ ಲಭಿಸುತ್ತದೆ. ಈ ಬೆಲೆ ಬಾಳುವ ಮರವನ್ನು ಇದೀಗ ಸರ್ಕಾರದ ಪ್ರೋತ್ಸಾಹದೊಂದಿಗೆ ರೈತರೂ ಬೆಳೆಸಲಾಗುತ್ತಿದ್ದು, ಉತ್ತಮ ಆದಾಯ ಗಳಿಸುತ್ತಿದ್ದಾರೆ. ಆದರೆ ನಗರವಾಸಿಗಳಿಗೆ ಈ ಅಪರೂಪದ ಮರದ ಪರಿಚಯವೇ ಇರುವುದಿಲ್ಲ. ಈ ಕೊರತೆಯನ್ನು ನೀಗಿಸಲು ಅರಣ್ಯ ಇಲಾಖೆಯು ಶ್ರೀಗಂಧದ ಮ್ಯೂಸಿಯಂ ನ್ನು ಸ್ಥಾಪಿಸಿದೆ. ಇದರಿಂದ ಪ್ರವಾಸಿಗರು ಶ್ರೀಗಂಧದ ಪರಿಚಯವನ್ನು ಮಾಡಿಕೊಳ್ಳಬಹುದಲ್ಲದೆ ಅದರ ಸುವಾಸನೆಯನ್ನು ಸವಿಯಬಹುದಾಗಿದೆ. ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮೈಸೂರಿನಲ್ಲಿ ದೇಶದಲ್ಲೇ ಮೊದಲನೆಯದಾದ ಶ್ರೀಗಂಧದ ಮ್ಯೂಸಿಯಂ ಅನ್ನು ಉದ್ಘಾಟಿಸಿದರು.
ಸುರಕ್ಷತೆ ನೋಡಿಕೊಂಡು ಸೂಕ್ತ ಸ್ಥಳದಲ್ಲಿ ತೆರೆಯುವ ನಿರ್ಧಾರ
ಮೈಸೂರಿನ ಅಶೋಕಪುರಂನಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀಗಂಧದ ವಸ್ತು ಸಂಗ್ರಹಾಲಯವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವರು, ""ಶ್ರೀಗಂಧದ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿರುವುದು ಸಂತಸದ ವಿಷಯ. ಕಳೆದ ಬಾರಿ ಭೇಟಿ ವೇಳೆ ಮೈಸೂರು ಅರಮನೆಯಲ್ಲಿ ವಸ್ತುಸಂಗ್ರಹಾಲಯವನ್ನು ತೆರೆಯುವ ಉದ್ದೇಶ ಹೊಂದಿದ್ದಾಗಿ ತಿಳಿಸಿದ್ದೆ. ಆದರೆ, ಅಲ್ಲಿ ಸದ್ಯ ಕಟ್ಟಡದ ಕೊರತೆ ಇದ್ದಿದ್ದರಿಂದ ಅರಮನೆ ಮೈದಾನದ ಸಮಿತಿಯವರು ಕಟ್ಟಡವನ್ನು ಕಟ್ಟಿಕೊಡುವ'' ಬಗ್ಗೆ ಹೇಳಿದ್ದಾರೆ. ಇದೇ ವೇಳೆ ಮೈಸೂರು ಮೃಗಾಲಯದಲ್ಲೂ ಸ್ಥಳಾವಕಾಶ ಇರುವ ಬಗ್ಗೆ ಮಾಹಿತಿ ಬಂದಿದ್ದರಿಂದ ಅಲ್ಲೂ ಸಹ ಮಾತುಕತೆ ನಡೆಸಲಾಗುತ್ತಿದೆ. ಬೆಲೆಬಾಳುವ ವಸ್ತುಗಳು ಇರುವುದರಿಂದ ಸುರಕ್ಷತೆಯನ್ನು ನೋಡಿಕೊಂಡು ಸೂಕ್ತ ಸ್ಥಳದಲ್ಲಿ ತೆರೆಯುವ ನಿರ್ಧಾರವನ್ನು ಅರಣ್ಯ ಇಲಾಖೆ ಮಾಡಲಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ತೂಕದ ಮೂಲಕ ಮಾರಾಟ ಮಾರಲ್ಪಡುವ ಏಕೈಕ ಮರ
ಈಗಾಗಲೇ ನಗರದ ಸರ್ಕಾರಿ ಕಚೇರಿಗಳ ಆವರಣದಲ್ಲಿರುವ ಶ್ರೀಗಂಧವನ್ನು ಕಳ್ಳರು ರಾತ್ರೋರಾತ್ರಿ ಕದ್ದೊಯ್ಯುತಿದ್ದು, ಇಲ್ಲಿನ ಮ್ಯೂಸಿಯಂ ಗೂ ಕನ್ನ ಹಾಕುವ ಅಪಾಯವಿದೆ. ಹೀಗಾಗಿ ಈ ಮ್ಯೂಸಿಯಂ ಅನ್ನು ಈಗಿರುವ ಪ್ರವಾಸಿ ತಾಣಗಳ ಸಮೀಪದಲ್ಲೇ ತೆರೆಯುವುದು ಸರ್ಕಾರದ ನಿರ್ಧಾರವಾಗಿದ್ದು, ಸದ್ಯದಲ್ಲೆ ಸ್ಥಳಾಂತರಗೊಳ್ಳಲಿದೆ. ಇಂದಿನ ಮಾರುಕಟ್ಟೆಯಲ್ಲಿ ಶ್ರೀಗಂಧದ ಕೊರಡಿಗೆ ಕೆಜಿಯೊಂದಕ್ಕೆ 3 ರಿಂದ 6 ಸಾವಿರ ರುಪಾಯಿಗಳವರೆಗೆ ದರ ಇದೆ. ಎಲ್ಲ ಮರಗಳನ್ನು ಅವುಗಳ ಸೈಜ್ ಅಳತೆ ಮಾಡುವ ಮೂಲಕ ದರ ನಿಗದಿ ಮಾಡಿದರೆ ಶ್ರೀಗಂಧವನ್ನು ಮಾತ್ರ ತೂಕ ಹಾಕಿ ದರ ನಿಗದಿ ಮಾಡಲಾಗುತ್ತಿದೆ. ಜಗತ್ತಿನಲ್ಲಿ ತೂಕದ ಮೂಲಕ ಮಾರಾಟ ಮಾರಲ್ಪಡುವ ಏಕೈಕ ಮರ ಇದೊಂದೇ ಆಗಿದೆ ಎಂದು ಸಚಿವ ಸೋಮಶೇಖರ್ ಹೇಳಿದರು.
ಶ್ರೀಗಂಧಕ್ಕೆ ಸರ್ಕಾರದಿಂದ ಪ್ರೋತ್ಸಾಹ ಕೊಡಲಾಗುತ್ತಿದೆ. ಅಲ್ಲದೆ, ಖಾಸಗಿಯಾಗಿ ಬೆಳೆಸಲು ಸಹ ಉತ್ತೇಜನ ನೀಡಲಾಗುತ್ತಿದೆ. ಇದಕ್ಕೆ ಉತ್ತಮ ದರ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕು ಎಂದು ಹೇಳಿದ ಸಚಿವರು, ಶ್ರೀಗಂಧದ ವಸ್ತುಸಂಗ್ರಹಾಲಯವನ್ನು ಯಾರು ಬೇಕಿದ್ದರೂ ವೀಕ್ಷಣೆ ಮಾಡಬಹುದಾಗಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದು ಸಚಿವರು ತಿಳಿಸಿದರು.
ಎಷ್ಟು ಆದಾಯ ಲಭಿಸಲಿದೆ? ಶ್ರೀಗಂಧದ ಕೃಷಿ ಹೇಗೆ?
ಉದ್ಘಾಟನೆ ಬಳಿಕ ವಸ್ತು ಸಂಗ್ರಹಾಲಯದಲ್ಲಿರುವ ಶ್ರೀಗಂಧದ ವಿವಿಧ ತಳಿಗಳು, ಬೇರುಗಳು, ಕಾಂಡಗಳು, ಪ್ರಭೇದಗಳು, ಅವುಗಳ ಉಪಯೋಗಗಳು, ವರ್ಗೀಕರಣದ ವಿವರಗಳು ಸೆರಿದಂತೆ ಶ್ರೀಗಂಧದ ಮರದಿಂದ ಏನೆಲ್ಲ ಔಷಧೀಯ ಗುಣಗಳಿವೆ? ಹಾಗೂ ಅದರಿಂದ ಎಷ್ಟು ಲಾಭ ಮಾಡಬಹುದು? ಎಂಬ ಬಗ್ಗೆ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ಶ್ರೀಗಂಧದಿಂದ ತಯಾರಿಸಿದ ವಿವಿಧ ಉತ್ಪನ್ನಗಳನ್ನೂ ಪ್ರದರ್ಶನಕ್ಕಿಡಲಾಗಿದ್ದನ್ನೂ ಸಚಿವರು ವೀಕ್ಷಿಸಿದರು. ಈ ಮ್ಯೂಸಿಯಂ ನಲ್ಲಿ ಸಾರ್ವಜನಿಕರು ಸಹ ಶ್ರೀಗಂಧ ಖರೀದಿಸುವ ಅವಕಾಶ ಇದೆ. ಇಲ್ಲಿ ಪ್ರತಿ ಕೆ.ಜಿ.ಗೆ 8 ಸಾವಿರ ರೂಪಾಯಿ ಬೆಲೆ ನಿಗದಿ ಮಾಡಲಾಗಿದ್ದು ದಾಖಲೆಗಳೊಂದಿಗೆ 3 ಕೆಜಿವರೆಗೆ ಗಂಧ ಖರೀದಿಸಲು ಅವಕಾಶವಿದೆ ಎಂದು ಡಿಸಿಎಫ್ ಕೆ.ಸಿ.ಪ್ರಶಾಂತಕುಮಾರ್ ತಿಳಿಸಿದರು. ಮ್ಯೂಸಿಯಂನಲ್ಲಿ ಪ್ರೊಜೆಕ್ಟರ್ ಮೂಲಕ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಸಚಿವರು, ಶ್ರೀಗಂಧದ ಬೆಳೆಯಿಂದ ರೈತರು ಹೇಗೆಲ್ಲ ಲಾಭಗಳಿಸಬಹುದು? ಒಂದು ಮರದಿಂದ ಎಷ್ಟು ಆದಾಯ ಲಭಿಸಲಿದೆ? ಶ್ರೀಗಂಧದ ಕೃಷಿ ಹೇಗೆ? ಎಂಬ ಅಂಶಗಳ ವಿವರಣೆಯನ್ನು ನೋಡಿ, ರೈತರಿಗೆ ನಿಜಕ್ಕೂ ಇದು ಉಪಯುಕ್ತವಾಗಿದ್ದು, ಶ್ರೀಗಂಧದ ಮೂಲಕ ಲಾಭ ಪಡೆಯಬೇಕು ಎಂದು ಅಭಿಪ್ರಾಯಪಟ್ಟರು.