ಸನ್ನಡತೆಯ ಆಧಾರದ ಮೇಲೆ 81 ಕೈದಿಗಳಿಗೆ ಬಿಡುಗಡೆ ಭಾಗ್ಯ
ಮೈಸೂರು, ಆಗಸ್ಟ್, 15: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯದಲ್ಲಿ 81 ಮಂದಿ ಅಲ್ಪಾವಧಿ ಶಿಕ್ಷಾ ಬಂಧಿಗಳನ್ನು ಬಿಡುಗಡೆಗೊಳಿಸಲಾಗಿದೆ. ರಾಜ್ಯ ಸರ್ಕಾರದ ಆದೇಶದಂತೆ ಸನ್ನಡತೆಯ ಆಧಾರದ ಮೇಲೆ ಮೈಸೂರಿನಲ್ಲಿ 20 ಅರ್ಹ ಅಲ್ಪಾವಧಿ ಶಿಕ್ಷಾ ಬಂದಿಗಳನ್ನು ಮೊದಲ ಹಂತದಲ್ಲಿ ಬಿಡುಗಡೆಗೊಳಿಸಲಾಯಿತು.
ಮಾಫಿ ಸೇರಿ ಶೇಕಡಾ 66ರಷ್ಟು ಶಿಕ್ಷೆ ಪೂರೈಸಿದ ಅಲ್ಪಾವಧಿ ಶಿಕ್ಷಾ ಬಂಧಿಗಳಾಗಿದ್ದ 20 ಪುರುಷರನ್ನು ಬಿಡುಗಡೆಗೊಳಿಸಲಾಗಿದೆ. ಕುಮಾರ್ ಅಲಿಯಾಸ್ ಸೀನಾ, ಮಾದೆಯಾಂಡ ಸಿ.ರಾಜೇಶ್, ಶಾಂತರಾಜು, ಕುಮಾರ್, ಕೃಷ್ಣ, ಮಾದವನ್, ಜಯರಾಮ, ಮಹೇಶ್, ನಂಜುಂಡ, ಪಿ.ಜಿ.ಪುಟ್ಟ, ವಿ.ಜೆ.ಹರೀಶ್, ಚಂದ್ರೇಗೌಡ, ಮಂಜು, ಶಿವಣ್ಣ, ಜಗದೀಶ್, ಅಬ್ದುಲ್ ಫಾರೂಕ್, ಕೃಷ್ಣ, ಜೇನುಕುರುಬರ ಗಣೇಶ್, ಬೆಟ್ಟಪಟ್ಟಿ, ಆರ್.ಸದಾನಂದ ಎಂಬುವರನ್ನು ಬಿಡುಗಡೆಗೊಳಿಸಲಾಗಿದೆ. ಮೈಸೂರು ಜಿಲ್ಲೆಯ ಕಾನೂನು ಸೇವಾ ಪ್ರಾಧಿಕಾರ ಬಿಡುಗಡೆ ಪತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಮತ್ತೆ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ತೊಡಗದೇ ಉತ್ತಮ ಬದುಕು ರೂಪಿಸಿಕೊಳ್ಳಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಕೆ.ಸಿ.ದಿವ್ಯಶ್ರೀ ಉಪಸ್ಥಿತರಿದ್ದರು.
Just in: ಸ್ವಾತಂತ್ರ್ಯ ದಿನಾಚರಣೆ- ಆಗಸ್ಟ್ 15 ರಂದು 51 ಕೈದಿಗಳ ಬಿಡುಗಡೆಗೆ ಗೆಹ್ಲೋಟ್ ಅನುಮೋದನೆ
ರಾಜ್ಯದಲ್ಲಿ 81 ಕೈದಿಗಳ ಬಿಡುಗಡೆ: ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ರಾಜ್ಯದ 9 ಕೇಂದ್ರ ಕಾರಾಗೃಹಗಳಲ್ಲಿ ಅಲ್ಪಾವಧಿ ಶಿಕ್ಷಾ ಬಂಧಿಗಳಿಗಾಗಿರುವ ಮೂವರು ಮಹಿಳೆಯರು ಸೇರಿ 81 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರು 14, ಬೆಳಗಾವಿ 3, ಬಳ್ಳಾ ರಿ 8, ವಿಜಯಪುರ ಇಬ್ಬರು ಮಹಿಳೆಯರು ಸೇರಿ 10, ಧಾರವಾಡ 6, ಕಲಬುರಗಿ 10, ಮೈಸೂರು 20, ಶಿವಮೊಗ್ಗ 9, ಶಿವಮೊಗ್ಗ ಮಹಿಳಾ ಕಾರಾಗೃಹ ಒಬ್ಬ ಮಹಿಳೆ ಸೇರಿದಂತೆ ಒಟ್ಟು 81 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಜ್ಯಪಾಲರ ಸೂಚನೆಯ ವಿಶೇಷ ಆದ್ಯತೆ ಮೇರೆಗೆ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಅಲ್ಪಾವಧಿ ಶಿಕ್ಷೆಗೊಳಗಾಗಿರುವ ಸನ್ನಡತೆ ಹೊಂದಿರುವ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕಾರಾಗೃಹ ಇಲಾಖೆ ಅಧಿಕಾರಿಗಳು ತಿಳಿಸಿದರು.
ಒಂದೇ ಕುಟುಂಬದ ನಾಲ್ವರಿಗೆ ಬಿಡುಗಡೆ ಭಾಗ್ಯ: ವಿಶೇಷ ಅಂದರೆ ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದಿಂದ ಒಂದೇ ಕುಟುಂಬದ ನಾಲ್ವರು ಸೇರಿ 10 ಕೈದಿಗಳು ಬಿಡುಗಡೆಗೆ ಆಗಿದ್ದಾರೆ. 10 ಕೈದಿಗಳಲ್ಲಿ ಮೂವರು ಸಹೋದರರು ಮತ್ತು ಅವರ ತಂದೆ ಸೇರಿ ಒಂದೇ ಕುಟುಂಬದ ನಾಲ್ವರು ಬಿಡುಗಡೆ ಆಗಿರುವುದು ಗಮನಾರ್ಹವಾಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್ ನಿವಾಸಿಗಳಾದ ಬಸಪ್ಪ ಮಲಕಾರಿ ಜಟಗೊಂಡ, ಗೌಡಪ್ಪ ಜಟಗೊಂಡ, ಬೆಳೆನ್ನಿ ಜಟಗೊಂಡ ಹಾಗೂ ಇವರ ತಂದೆ ಮಲಕಾರಿ ಜಟಗೊಂಡ ಜೈಲಿನಿಂದ ಬಿಡುಗಡೆ ಆಗಿದ್ದಾರೆ.
ಗ್ರಾಮಸ್ಥರೊಬ್ಬರ ತೋಟದಲ್ಲಿ ಹೂವು ಕೀಳುತ್ತಿದ್ದಾರೆ ಎಂಬ ಕಾರಣ ಎರಡು ಕುಟುಂಬಗಳ ಮಧ್ಯೆ ಜಗಳವಾಗಿತ್ತು. ನಂತರ ತಂದೆ ಹಾಗೂ ಮೂವರು ಮಕ್ಕಳು ಸೇರಿ ಹೂವು ತೋಟದ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಸಂಬಂಧ ನಾಲ್ವರಿಗೂ ಎರಡು ವರ್ಷ ಶಿಕ್ಷೆ ಆಗಿತ್ತು. ಈಗ ಸನ್ನಡತೆ ಆಧಾರದ ಮೇಲೆ ಇವರನ್ನು ಬಿಡುಗಡೆ ಮಾಡಲಾಗಿದೆ ಎಂದು ಕಾರಾಗೃಹ ಇಲಾಖೆ ಅಧಿಕಾರಿಗಳು ಹೇಳಿದರು.