ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆ: ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ
ಮೈಸೂರು, ಜೂನ್ 5 : ರಾಜ್ಯಕ್ಕೆ ಮುಂಗಾರು ಪ್ರವೇಶಿಸಿ ಮೂರ್ನಾಲ್ಕು ದಿನ ಕಳೆದಿದೆ. ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆ ದಾಖಲಾಗಿದೆ. ಮೇ 29ಕ್ಕೆ ಮುಂಗಾರು ರಾಜ್ಯವನ್ನು ಪ್ರವೇಶಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ವಾಡಿಕೆಗಿಂತ ಸರಾಸರಿ 25 ಮಿಮೀ ನಷ್ಟು ಮಳೆಯಾಗಬೇಕು.
ಕರ್ನಾಟಕ , ತಮಿಳುನಾಡಿಗೆ ನೈರುತ್ಯ ಮುಂಗಾರು ಲಗ್ಗೆ: ಬೆಂಗಳೂರಲ್ಲಿ ಮಳೆ ಸಂಭವ
ಈ ವರ್ಷ ಸರಾಸರಿ 42 ಮಿ.ಮೀ ಮಳೆಯಾಗಿದೆ. ಇದು ವಾಡಿಕೆಗಿಂತ ಶೇ.69 ಅಧಿಕವಾಗಿದೆ. ಆರಂಭದಲ್ಲೇ ಮುಂಗಾರು ಚುರುಕಾಗಿದ್ದು, ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಬ್ಬರ ದಿನೇ ದಿನೇ ಹೆಚ್ಚಾಗುತ್ತಿದೆ. ಜೂ.6ರಿಂದ ರಾಜ್ಯದೆಲ್ಲಡೆ ಮುಂಗಾರು ಮತ್ತಷ್ಟು ಚುರುಕಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ.
ಕೊಡಗಿನಲ್ಲಿ ಉತ್ತಮ ಮಳೆ
ನಾಲ್ಕೈದು ವರ್ಷಗಳಿಂದ ಕೊಡಗಿನಲ್ಲಿ ವಾಡಿಕೆ ಮಳೆಯಾಗದ ಕಾರಣದಿಂದಾಗಿ ಕೃಷ್ಣರಾಜ ಸಾಗರ ಜಲಾಶಯ (ಕೆಆರ್ಎಸ್) ಭರ್ತಿಯಾಗಿರಲಿಲ್ಲ. ಇದರಿಂದ ರೈತರು ಬೆಳೆಗೆ ನೀರು ಸಿಗದೆ ಕಂಗಾಲಾಗಿದ್ದರು. ಜತೆಗೆ ಮಂಡ್ಯದಲ್ಲಿ ರೈತರ ಪರಿಸ್ಥಿತಿ ಗಂಭೀರ ಸ್ಥಿತಿಗೆ ತಲುಪಿ, ಆತ್ಮಹತ್ಯೆ ದಾರಿ ಹಿಡಿದಿದ್ದರು.
ಮೇ ತಿಂಗಳಲ್ಲಿ ನೀರಿನ ಹರಿವಿನ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮವಾಗಿದ್ದು, ಜನವರಿಯಿಂದ ಇಲ್ಲಿಯವರೆಗೆ ಕೊಡಗಿನಲ್ಲಿ ಉತ್ತಮ ಮಳೆಯಾಗಿದೆ. ಸುಮಾರು 119 ಮಿ.ಮೀ ಹೆಚ್ಚಿನ ಮಳೆಯಾಗಿದೆ. ಜನವರಿಯಿಂದ ಮಾರ್ಚ್ ತನಕ ಮಳೆ ಬೀಳದಿದ್ದರೂ ನಂತರ ಸುರಿದ ಮಳೆ ಕೊಡಗಿನ ಜನರಲ್ಲಿ ಆಶಾ ಭಾವನೆ ಮೂಡಿಸಿದೆ.
ಜನವರಿಯಿಂದ ಇಲ್ಲಿವರೆಗೆ 433.95 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 314.54 ಮಿ.ಮೀ ಮಳೆಯಾಗಿದ್ದನ್ನು ಸ್ಮರಿಸಬಹುದಾಗಿದೆ. ಕಳೆದ ವರ್ಷ ಮೇ-ಜೂನ್ ನಲ್ಲಿ ಮಳೆ ಬಿದ್ದಿತ್ತಾದರೂ ಆ ನಂತರ ಮಳೆ ಸುರಿದಿರಲಿಲ್ಲ. ಇದರಿಂದ ಅಂತರ್ಜಲ ಹೆಚ್ಚಳವಾಗಿರಲಿಲ್ಲ. ಆದರೆ ಹಿಂಗಾರು ಮಳೆ ಡಿಸೆಂಬರ್ ತನಕವೂ ಬಂದಿದ್ದರಿಂದ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಕಂಡುಬರಲಿಲ್ಲ.
ಮುಂಗಾರು ಮಳೆ: ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಚೇತರಿಕೆ
ಕೆಆರ್ ಎಸ್ ನಲ್ಲಿ ನೀರಿನ ಮಟ್ಟ ಏರಿಕೆ
ಈಗಾಗಲೇ ಮಳೆ ಸುರಿದ ಪರಿಣಾಮ ಕಾವೇರಿ ನದಿಯಲ್ಲಿ ನೀರಿನ ಮಟ್ಟ ನಿಧಾನವಾಗಿ ಏರಿಕೆಯಾದಂತೆ ಕಂಡು ಬಂದಿದೆ. ಇಲ್ಲಿನ ಇತರೆ ತೊರೆ, ನದಿ ಗಳಲ್ಲೂ ನೀರು ಕಾಣಿಸುತ್ತಿದೆ. ಇತ್ತ ಕೆಆರ್ ಎಸ್ ಜಲಾಶಯದಲ್ಲಿಯೂ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ.
ಡೆಡ್ ಸ್ಟೋರೇಜ್ ದಾಟಿದ್ದ ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. 124.80 ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಮೇ 20ರ ವೇಳೆಗೆ 69.14 ಅಡಿಗೆ ಕುಸಿದಿತ್ತು. ಆದರೆ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆ ಸುರಿದಿದ್ದರಿಂದಾಗಿ ಸೋಮವಾರ 76.20 ಅಡಿ ತಲುಪಿದೆ.
ಸುಮಾರು 7 ಅಡಿಯಷ್ಟು ಏರಿಕೆ ಕಂಡಿದೆ. ಕಳೆದ ವರ್ಷ ಇದೇ ದಿನ 68.06 ಅಡಿ ಇತ್ತು. ಇದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಮಳೆ ಬಂದಿದ್ದೇ ಆದರೆ ಈ ಬಾರಿ ಬಹುಬೇಗ ಕೆಆರ್ ಎಸ್ ಜಲಾಶಯ ಭರ್ತಿಯಾಗುವುದಂತೂ ಖಚಿತ. 2013ರ ನಂತರ ಇದೇ ಮೊದಲ ಬಾರಿಗೆ ಜಲಾಶಯ ಗರಿಷ್ಠ ಮಟ್ಟ ತಲುಪಲಿದೆ.
ರಾಜ್ಯದ ಜಲಾಶಯಗಳ ನೀರು ಕುಡಿಯಲು ಮಾತ್ರ ಸಾಕಾಗುತ್ತೆ!
ಹೇಮಾವತಿ ಕೂಡ ಭರ್ತಿ
ಹಾಸನ ಜಿಲ್ಲೆಯ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೂ ಒಳ ಹರಿವು ಹೆಚ್ಚಾಗಿದ್ದು, 2,266 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಜಲಾಶಯದ ಮಟ್ಟ 2869.30 ಅಡಿಗಳಿಗೆ ಏರಿದೆ. ಕಳೆದ ವರ್ಷ ಇದೇ ದಿನ 2852.75 ಅಡಿಗಳಿಷ್ಟಿತ್ತು. ಸುಮಾರು 17 ಅಡಿಗಳಷ್ಟು ನೀರು ಈ ಬಾರಿ ಹೆಚ್ಚಾಗಿರುವುದು ಹೇಮಾವತಿ ಕೂಡ ಭರ್ತಿಯಾಗುವ ಸೂಚನೆ ನೀಡಿದೆ.
ಕಬಿನಿಯಲ್ಲೂ ನೀರಿನ ಮಟ್ಟ ಏರಿಕೆ
ಎಚ್.ಡಿ.ಕೋಟೆ ತಾಲೂಕು ಕಬಿನಿ ಜಲಾಶಯದಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ. ವೈನಾಡಿನಲ್ಲಿ ಮಳೆಯಾಗುತ್ತಿದ್ದು, ನೀರಿನ ಹರಿವಿನಲ್ಲಿ ಹೆಚ್ಚಳವಾಗಿದೆ. ಸೋಮವಾರ ಕಬಿನಿ ಜಲಾಶಯದಲ್ಲಿ 2258.66 ಅಡಿ ನೀರು ಇತ್ತು. ಕಳೆದ ವರ್ಷ ಇದೇ ದಿನ 2248.15 ಅಡಿ ನೀರು ಇತ್ತು. ಇದೂ ಕೂಡ ಈ ಬಾರಿ ಬೇಗನೆ ಭರ್ತಿಯಾಗುವ ಲಕ್ಷಣಗಳು ತೋರಿದೆ.
ಒಟ್ಟಾರೆ ರೈತನ ಮೊಗದಲ್ಲಿ ಮುಂಗಾರು ಹರುಷದ ಹೊನಲನ್ನು ಹರಿಸಿದೆ ಎಂಬಲ್ಲಿ ಸಂಶಯವಿಲ್ಲ.