ಕಬಿನಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಳ, ಇದಕ್ಕಿಂತ ಖುಷಿ ಏನಿದೆ?
ಮೈಸೂರು, ಜೂನ್ 29 : ಕಾವೇರಿ, ಕಬಿನಿ ಜಲಾಶಯ ಭಾಗಗಳಲ್ಲಿ ನಿರಂತರವಾಗಿ ನೈಋತ್ಯ ಮುಂಗಾರು ಮಳೆ ಸುರಿಯುತ್ತಿರುವುದರಿಂದ ಕೃಷ್ಣರಾಜಸಾಗರ, ಕಬಿನಿ ಜಲಾಶಯದ ನೀರಿನ ಒಳ ಹರಿವು ಹೆಚ್ಚಾಗಿದೆ.
ಮಳೆ ಕೊರತೆ ನೀಗಿಸಲು ಆಗಸ್ಟ್ ನಲ್ಲಿ ಮೋಡ ಬಿತ್ತನೆ: ಕೃಷ್ಣ ಬೈರೇಗೌಡ
4 ಸಾವಿರ ಕ್ಯುಸೆಕ್ ನೀರು ಹೆಚ್ಚಾಗಿದ್ದು, ಇದೇ ರೀತಿ ಮಳೆ ಮುಂದುವರಿದರೆ ಕೆಆರ್ ಎಸ್ ಡ್ಯಾಮ್ ನ ನೀರಿನ ಮಟ್ಟ ಹೆಚ್ಚಾಗಲಿದೆ. ಗರಿಷ್ಟ ಮಟ್ಟ 124.85 ಅಡಿ ಇದ್ದು, ಇದೀಗ 68.85 ಅಡಿ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ವರ್ಷಗಳಿಂದ ಕೈಕೊಟ್ಟು ರಾಜ್ಯವನ್ನು ತೀವ್ರ ಬರಗಾಲ ಇತ್ತು. ಮುಂಗಾರು ಮಳೆ ಈ ಬಾರಿ ಆಶಾಕಿರಣ ಮೂಡಿಸಿದೆ. ರಾಜ್ಯದ ಬಹುತೇಕ ಕಡೆ ಮುಂಗಾರು ಚುರುಕುಗೊಂಡಿದ್ದು, ಕರಾವಳಿ, ಮಲೆನಾಡು ಮತ್ತಿತರ ಪ್ರದೇಶಗಳಲ್ಲಿ ಉತ್ತಮ ಮಳೆ ಬೀಳತೊಡಗಿದೆ.
ವೈನಾಡಲ್ಲಿ ಮಳೆ: ಬಂಡೀಪುರದ ಮೂಲೆಹೊಳೆಯಲ್ಲಿ ಜೀವಕಳೆ
ಪ್ರಮುಖ ಜಲಾಶಯಗಳ ಸುತ್ತಮುತ್ತಲೂ ಎರಡು ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯತೊಡಗಿದೆ. ಇದರ ಪರಿಣಾಮ ಜಲಾಶಯಕ್ಕೆ ಹೆಚ್ಚಿನ ನೀರು ಹರಿದುಬರುತ್ತಿದೆ.
ಇನ್ನು ಕೇರಳದ ವೈನಾಡು ಪ್ರದೇಶದಲ್ಲಿ ಸತತ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಬಳಿ ಇರುವ ಕಬಿನಿ ಜಲಾಶಯದ ನೀರಿನ ಒಳಹರಿವು ಹೆಚ್ಚಾಗಿದ್ದು, ಗರಿಷ್ಠ ಮಟ್ಟ 2,285 ಅಡಿ ಇದ್ದು, ಇಂದಿನ ಮಟ್ಟ 2,257 ಅಡಿಗಳಷ್ಟು ನೀರು ಬಂದಿದೆ.
ಮುಂದಿನ ದಿನಗಳಲ್ಲಿ ಇದೇ ರೀತಿ ಮಳೆ ಸುರಿದರೆ ಇನ್ನೂ ಹೆಚ್ಚು ನೀರು ಬರಲಿದೆ ಎಂದು ಕಬಿನಿ ಜಲಾಶಯದ ಎಂಜಿನಿಯರ್ ಗಳು ತಿಳಿಸಿದ್ದಾರೆ. ಕೊಡಗು, ಕೇರಳ ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ.
ಕೊಡಗಿನಲ್ಲಿ ಬಿರುಸಾದ ಮುಂಗಾರು: ಭಾಗಮಂಡಲದಲ್ಲಿ ಉಕ್ಕಿದ ಕಾವೇರಿ
ಹೀಗಾಗಿ ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಎಚ್.ಡಿ.ಕೋಟೆ ಭಾಗದ ರೈತರಲ್ಲಿ ಸಂತಸ ಮೂಡಿದೆ.
ಗುರುವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿಯ ಬಹುತೇಕ ಕಡೆ, ಒಳನಾಡಿನ ಹಲವೆಡೆ ಮಳೆಯಾಗುವ ಸಾಧ್ಯತೆಗಳಿವೆ. ಆದರೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಘಟ್ಟ ಪ್ರದೇಶಗಳ ಒಂದೆರಡು ಕಡೆ ಭಾರೀ ಮಳೆ ಸುರಿಯುವ ಸಂಭವವಿದೆ. ಮೈಸೂರು ಭಾಗದಲ್ಲೂ ಇನ್ನೂ ಐದು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.