ದಸರಾ ಉದ್ಘಾಟನೆ; ಭಾಷಣದಲ್ಲೇ ರಾಜಕಾರಣಿಗಳ ಬೆವರಿಳಿಸಿದ ಎಸ್.ಎಲ್. ಭೈರಪ್ಪ
Recommended Video
ಮೈಸೂರು, ಸೆಪ್ಟೆಂಬರ್ 29: ತಾಯಿ ಶ್ರೀಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಇಂದು ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದರು. ದಸರಾ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾ ರಾಜಕಾರಣಿಗಳಿಗೆ ಬೆವರನ್ನೂ ಇಳಿಸಿದರು.
ವೀರಶೈವ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಮಂತ್ರಿಗಳು, ಸಚಿವರ ಸಮ್ಮುಖದಲ್ಲೇ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಬೆವರಿಳಿಸಿದರು. "ಚುನಾವಣೆಗೂ ಮುನ್ನ ಲಿಂಗಾಯತ, ವೀರಶೈವ ವಿಚಾರ ಮುಂಚೂಣಿಗೆ ಬಂತು. ಬಸವಣ್ಣ ಲಿಂಗ ಪೂಜೆ ಮಾಡಬೇಡಿ ಎನ್ನಲಿಲ್ಲ, ಅವರು ಕಾಯಕ ಮತ್ತು ಜಾತಿ ವಿನಾಶದೆಡೆಗೆ ಪ್ರತಿಪಾದಿಸಿದ್ದರು. ಆದರೆ ಬಸವಣ್ಣನವರ ಕಾಯಕ ನಿಷ್ಠೆಯನ್ನು ಹಾಳು ಮಾಡಿದವರೇ ರಾಜಕಾರಣಿಗಳು" ಎಂದು ಜಾಡಿಸಿದರು.
ಇಂದಿನಿಂದ ಮೈಸೂರು ದಸರಾ; ಯಾವ್ಯಾವ ಕಾರ್ಯಕ್ರಮಗಳಿಗೆ ಚಾಲನೆ?
"ಬಸವಣ್ಣ ಜಾತಿ ವಿನಾಶಕ್ಕೆ ಮುಂದಾಗಿ ಬ್ರಾಹ್ಮಣ ಹುಡುಗಿಯನ್ನು ದಲಿತ ಹುಡುಗನಿಗೆ ಕೊಟ್ಟು ಮದುವೆ ಮಾಡಿಸಿದ್ದರು. ಅದು ಆ ಕಾಲದಲ್ಲಿ ಅಷ್ಟಾಗಿ ನಡೆಯದೆ ವಿರೋಧ ಉಂಟಾಯಿತು. ಆದರೆ ಅದಕ್ಕೆ ಕಾಲ ಪಕ್ವವಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ನಡೆಯಬೇಕಿದೆ" ಎಂದು ಹೇಳಿದರು.
ಭೈರಪ್ಪ ಭಾಷಣಕ್ಕೆ ಅಡ್ಡಿಪಡಿಸಿದ ಸಂಸದ: ಸಾಹಿತಿ ಎಸ್.ಎಲ್.ಭೈರಪ್ಪ ತಮ್ಮ ಭಾಷಣ ಆರಂಭಿಸಿ ದೇವರು ಇದ್ದಾನೊ ಇಲ್ಲವೊ ಎಂಬ ಬಗ್ಗೆ ಮಾತನಾಡುತ್ತಿದ್ದರು. ಹಾಗೆ ಮಹಿಷಾಸುರನನ್ನು ಚಾಮುಂಡೇಶ್ವರಿ ದಹಿಸಿದ ಬಗ್ಗೆ ಹೇಳಿದರು. ಮುಂದುವರೆದು ನಾತನಾಡಿದ ಅವರು ಬಸವಣ್ಣನವರ ಕಾಯಕ ಮತ್ತು ನಿಷ್ಠೆ ವಿಚಾರದಲ್ಲಿ ಯಾವಾಗ ರಾಜಕಾರಣಿಗಳ ವಿರುದ್ಧ ತಿರುಗಿ ಬಿದ್ದರೋ ಆಗ ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ರಾಜಕಾರಣಿಗಳಿಗೂ ಇರುಸು ಮುರುಸುಂಟಾಯಿತು.
ವೇದಿಕೆ ಮೇಲೆ ಆಸೀನರಾಗಿದ್ದ ಸಂಸದ ಪ್ರತಾಪ್ ಸಿಂಹ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಬಳಿ ಹೋಗಿ ಚೀಟಿ ಕೊಟ್ಟು ಸಮಯ ಮುಗಿಯಿತು ಎಂದು ಎಚ್ಚರಿಸಿ ಅಡ್ಡಿಪಡಿಸಿದರು. ಇದರಿಂದೇನು ವಿಚಲಿತರಾಗದ ಭೈರಪ್ಪ, "ನನಗೆ ಸಮಯ ಆಗಿದೆ ಎಂದು ಹೇಳುತಿದ್ದಾರೆ. ಇನ್ನು ಐದು ನಿಮಿಷದಲ್ಲಿ ಭಾಷಣ ಮುಗಿಸುತ್ತೇನೆ" ಎಂದು ಹೇಳಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.