ಅಕ್ಷಯ ತೃತೀಯ:ಮೈಸೂರಿನಲ್ಲಿ ಚಿನ್ನಾಭರಣ ಖರೀದಿ ಭರಾಟೆ ಬಲು ಜೋರು
ಮೈಸೂರು, ಮೇ 7: ಅಕ್ಷಯ ತದಿಗೆಯ ದಿನ ಮನೆಗೆ ತರುವ ಸಂಪತ್ತು ಅಕ್ಷಯವಾಗಲಿದೆ ಎಂಬ ನಂಬಿಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಅಕ್ಷಯ ತೃತೀಯ ದಿನ ಹಳದಿ ಲೋಹ ಖರೀದಿಸಲು ಬಹಳಷ್ಟು ಮಂದಿ ತುದಿಗಾಲಲ್ಲಿ ನಿಂತಿದ್ದಾರೆ. ಮಳಿಗೆಗಳಲ್ಲಿ ವೈವಿಧ್ಯಮಯ ಆಭರಣಗಳನ್ನು ಪ್ರದರ್ಶಿಸಿ, ಗ್ರಾಹಕರ ಆಕರ್ಷಣೆಗೆ ಮುಂದಾಗಿದ್ದಾರೆ. ಈ ದಿನ ಮಾಮೂಲಿಗಿಂತ ಹೆಚ್ಚಿನ ವಹಿವಾಟು ನಡೆಯುತ್ತದೆ.
ಮದುವೆ, ನಾಮಕರಣ, ನಿಶ್ಚಿತಾರ್ಥ ಮೊದಲಾದ ಶುಭಸಮಾರಂಭಗಳ ಹೆಸರಿನಲ್ಲೂ ಬಹಳಷ್ಟು ಮಂದಿ ಖರೀದಿಸುತ್ತಾರೆ. ಅಕ್ಷಯ ತೃತೀಯ ದಿನ ಪ್ರಯುಕ್ತ ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ಒಂದೆರಡು ಗ್ರಾಂ ಚಿನ್ನ ಖರೀದಿಸುವ ರೂಢಿಯೂ ಇದೆ.
ಅಕ್ಷಯ ತೃತೀಯದ ಬಗ್ಗೆ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯರಿಂದ ವಿವರಣೆ
"ಅಕ್ಷಯ ತೃತೀಯದ ದಿನ ಚಿನ್ನ ಖರೀದಿಸಿದರೆ ಒಳ್ಳೆಯದಾಗುತ್ತದೆ, ಹಲವಾರು ವರ್ಷಗಳಿಂದ ಖರೀದಿಸಿದ್ದೇನೆ. ಈ ವರ್ಷ ಇದೇ ತಿಂಗಳಿನಲ್ಲಿ ಪುತ್ರಿಯ ಮದುವೆ ಇದೆ. ಪುತ್ರಿ, ಅಳಿಯ, ಮನೆಯವರಿಗೆ ಅಕ್ಷಯ ತೃತೀಯದಂದು ಆಭರಣ ಖರೀದಿಸಲು ಈಗಾಗಲೇ ಮುಂಗಡ ಬುಕ್ಕಿಂಗ್ ಮಾಡಿದ್ದೇವೆ. ಈ ದಿನ ಖರೀದಿಸುವುದು ಒಳ್ಳೆಯದು"ಎಂದು ಗೃಹಿಣಿ ಸುಧಾ ತಿಳಿಸಿದ್ದಾರೆ.
ಇತ್ತ ಅಕ್ಷಯ ತೃತೀಯ ಪ್ರಯುಕ್ತ ಆಭರಣ ಮಳಿಗೆಯವರು ರಿಯಾಯಿತಿ, ಕೊಡುಗೆಗಳನ್ನು ಘೋಷಿಸಿದ್ದು, ಒಡವೆ ಖರೀದಿಗೆ ಬಹಳಷ್ಟು ಗ್ರಾಹಕರು ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ಗ್ರಾಹಕರನ್ನು ಆಕರ್ಷಿಸಲು ಬಹಳಷ್ಟು ಅಂಗಡಿಗಳ ಮಳಿಗೆಗಳನ್ನು ಅಲಂಕರಿಸಿ ಸಜ್ಜುಗೊಳಿಸಿದ್ದಾರೆ. ರಿಯಾಯಿತಿ, ಕೊಡುಗೆಗಳ ಫಲಕಗಳನ್ನು ಹಾಕಿದ್ದಾರೆ. ನಗರದ ಬಹುತೇಕ ಆಭರಣ ಮಳಿಗೆಗಳು ಗ್ರಾಹಕರಿಂದ ಇಂದು ಬೆಳಗ್ಗಿನಿಂದಲೇ ಗಿಜಿಗುಡುತ್ತಿದೆ.
ಆಕರ್ಷಕ ಆಭರಣಗಳ ಪ್ರದರ್ಶನ
ಚಿನ್ನದ ನಾಣ್ಯ ಖರೀದಿಸಿದರೆ ಮಜೂರಿ ಇಲ್ಲ, ಚಿನ್ನ ಖರೀದಿಗೆ ಬೆಳ್ಳಿ ನಾಣ್ಯ ಉಚಿತ ಕೊಡುಗೆ ಹೀಗೆ ಮೊದಲಾದ ಉಡುಗೊರೆಗಳನ್ನು ಪರಿಚಯಿಸಿದ್ದಾರೆ. ಯಾವ ಅಂಗಡಿಯಲ್ಲಿ ಯಾವ ಕೊಡುಗೆ ಪರಿಚಯಿಸಿದ್ದಾರೆ ಎಂಬುದರ ಮೇಲೆ ಗ್ರಾಹಕರ ಕಣ್ಣುಗಳು ನೆಟ್ಟಿವೆ. ಇದರೊಟ್ಟಿಗೆ ಆಭರಣಗಳನ್ನು ಒಪ್ಪ ಒರಣವಾಗಿ ಇಡುವುದು, ಗ್ರಾಹಕರನ್ನು ತಕ್ಷಣ ಆಕರ್ಷಿಸುವ ಆಭರಣಗಳನ್ನು ಪ್ರದರ್ಶನಕ್ಕೆ ಇಡುವುದು, ಹೆಚ್ಚಿನ ಸಿಬ್ಬಂದಿ ನಿಯೋಜನೆ, ಸಿ.ಸಿ ಟಿವಿ ಕ್ಯಾಮೆರಾ ಸೇರಿದಂತೆ ಹೆಚ್ಚಿನ ಭದ್ರತಾ ಸಿಬ್ಬಂದಿ ವ್ಯವಸ್ಥೆ ಮಾಡುತ್ತಿರುವುದು ಸಾಮಾನ್ಯವಾಗಿ ಆಭರಣದ ಅಂಗಡಿಗಳಲ್ಲಿ ಕಂಡುಬರುತ್ತಿರುವ ದೃಶ್ಯವಾಗಿದೆ.
ಈ ದಿನದಂದು ಹೆಚ್ಚು ಖರೀದಿ
ಇಡೀ ವರ್ಷದಲ್ಲಿ ಯುಗಾದಿ, ದೀಪಾವಳಿ, ವರಮಹಾಲಕ್ಷ್ಮಿ ಆಚರಣೆ ಸೇರಿದಂತೆ ಯಾವುದೇ ಹಬ್ಬಗಳಲ್ಲಿ ಆಗದ ಚಿನ್ನದ ಖರೀದಿ ಈ ಅಕ್ಷಯ ತೃತೀಯ ದಿನದಂದು ಆಗುತ್ತದೆ. ಹೀಗಾಗಿ, ಈ ಒಂದು ದಿನಕ್ಕಾಗಿ ಆಭರಣ ವ್ಯಾಪಾರ ಮಳಿಗೆಗಳ ಮಾಲೀಕರು ಕಾದಿರುತ್ತಾರೆ. ಈ ಅವಕಾಶವನ್ನು ಯಾರು ಕಳೆದುಕೊಳ್ಳುವುದಿಲ್ಲ. ಇಡೀ ವರ್ಷದ ವ್ಯಾಪಾರ ಒಂದೇ ದಿನ ಆದ ಉದಾಹರಣೆಗಳಿವೆ ಎಂದು ಆಭರಣ ಮಳಿಗೆಯ ಮಾಲೀಕರೊಬ್ಬರು ತಿಳಿಸಿದರು.
ಅಕ್ಷಯ ತೃತೀಯದಂದು ಚಿನ್ನ ಕೊಂಡರೆ ದರಿದ್ರ ಬರುತ್ತದೆ:ಮಾಜಿ ಶಾಸಕ ಸೋಮಶೇಖರ್
ಜೋಸ್ ಅಲುಕ್ಕಾಸ್ ಅಂದ್ರೆ ಪ್ರೀತಿ
ಕೇರಳ ಶೈಲಿಯ ಆಭರಣಗಳು, ಹೊಸ ವಿನ್ಯಾಸಗಳಿಗೆ ಹೆಸರಾದ ಜೋಸ್ ಅಲುಕ್ಕಾಸ್ನಲ್ಲಿ ಹೊಸ ತಲೆಮಾರಿನವರು ಖರೀದಿಗೆ ಇಷ್ಟಪಡುತ್ತಾರೆ. ಇಲ್ಲಿಯೂ ಚಿನ್ನದ ಆಭರಣಗಳ ಬುಕಿಂಗ್ಗೆ ವಿಶೇಷ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಪ್ರತಿ 30 ಸಾವಿರ ಮೌಲ್ಯದ ಆಭರಣ ಖರೀದಿಗೆ ಚಿನ್ನದ ನಾಣ್ಯವೊಂದನ್ನು ಉಡುಗೊರೆಯಾಗಿ ಕೊಡುವುದಾಗಿ ಪ್ರಕಟಿಸಿದ್ದಾರೆ.50 ಸಾವಿರ ಮೌಲ್ಯದ ವಜ್ರದ ಆಭರಣ ಖರೀದಿಗೆ ಕೂಡ ಚಿನ್ನದ ನಾಣ್ಯದ ಉಡುಗೊರೆ ಖಚಿತ. ಅಷ್ಟೇ ಅಲ್ಲ, ವಜ್ರಗಳ ಆಭರಣದ ಮೇಲೆ ಶೇ.20 ರಿಯಾಯಿತಿಯನ್ನೂ ಪ್ರಕಟಿಸಲಾಗಿದೆ. ಹೊಸ ನಮೂನೆಯ ವಿನ್ಯಾಸಗಳು, ಪ್ರಮಾಣೀಕರಿಸಿದ ವಜ್ರಗಳ ಆಭರಣಗಳು, ಮದುವೆ ಆಭರಣಗಳ ಬೃಹತ್ ಸಂಗ್ರಹವನ್ನೇ ಜೋಸ್ ಅಲುಕ್ಕಾಸ್ ಪ್ರದರ್ಶನಕ್ಕೆ ಇಟ್ಟಿದೆ.
ಅಪಾರ್ಟ್ಮೆಂಟ್ ಬುಕಿಂಗ್
ಆಭರಣ ಖರೀದಿಯಂತೆಯೇ ಆಸ್ತಿಪಾಸ್ತಿ ಖರೀದಿಯೂ ಸೌಭಾಗ್ಯವೇ ಅಲ್ಲವೇ, ಹಾಗಾಗಿ ಲ್ಯಾಂಡ್ ಟ್ರೇಡರ್ಸ್ ಬಿಲ್ಡರ್ಸ್ ಇದೇ ಅವಕಾಶವನ್ನು ಬಳಸಿಕೊಂಡು ಅಪಾರ್ಟ್ಮೆಂಟ್ಗಳ ಬುಕಿಂಗ್ಗೆ ವಿಶೇಷ ರಿಯಾಯಿತಿ ನೀಡುವುದಾಗಿ ಪ್ರಕಟಿಸಿದೆ. ನಗರವಿರಲಿ, ಹಳ್ಳಿ ಇರಲಿ ವಾಹನಗಳು ಎಲ್ಲರಿಗೂ ಅಗತ್ಯವಾಗಿವೆ. ಹಾಗಾಗಿ ಅಕ್ಷಯ ತದಿಗೆಯ ದಿನ ಹೊಸ ವಾಹನ ಖರೀದಿಗೆ ಬುಕಿಂಗ್ ಮಾಡಿ ಹಲವಾರು ಮಂದಿ ಈಗಾಗಲೇ ವಾಹನದ ಜೊತೆಗೆ ಸೆಲ್ಫಿ ತೆಗೆದುಕೊಂಡು ಫೇಸ್ಬುಕ್ನಲ್ಲಿ , ಇನ್ಸ್ಟಾಗ್ರಾಂನಲ್ಲಿ ಅಪ್ಡೇಟ್ ಮಾಡಿದ್ದಾರೆ. ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಾಮಾನ್ಯವಾಗಿ ದಿನಕ್ಕೆ 80ರಿಂದ 100 ದ್ವಿಚಕ್ರ ವಾಹನಗಳ ನೋಂದಣಿ ಸಾಮಾನ್ಯ. ಆದರೆ ಅಕ್ಷಯ ತೃತೀಯ ದಿನ ಸುಮಾರು 250ಕ್ಕೂ ಹೆಚ್ಚು ವಾಹನಗಳು ನೋಂದಣಿಯಾಗುತ್ತಿವೆ. ಅದೇ ರೀತಿ ಸರಾಸರಿ ದಿನಕ್ಕೆ 15ರಿಂದ 20 ಕಾರುಗಳು ನೋಂದಣಿಯಾದರೆ ಈ ದಿನ 100ಕ್ಕೂ ಹೆಚ್ಚು ಕಾರುಗಳನ್ನು ಕಾರುಪ್ರಿಯರು ಬುಕ್ ಮಾಡಿದ್ದಾರೆ.
ಅಕ್ಷಯ ತದಿಗೆ : ರಿಲಯನ್ಸ್ ಜ್ಯುವೆಲ್ಸ್ ನಿಂದ ಹಂಪಿ ವಿಶೇಷ ವಿನ್ಯಾಸ
ಬ್ಯಾಂಕುಗಳಲ್ಲಿ ಜನಜಂಗುಳಿ
ಅಕ್ಷಯ ತೃತೀಯ ದಿನವಾದ ಇಂದು ರಜೆ ದಿನವಾಗಿದ್ದು, ಬ್ಯಾಂಕುಗಳು ರಜೆ ಎಂಬ ವಿಚಾರ ತಿಳಿದ ಗ್ರಾಹಕರು ನಿನ್ನೆ ಸೋಮವಾರ ವಿವಿಧ ಬ್ಯಾಂಕುಗಳಿಗೆ ದೌಡಾಯಿಸಿ ಹಣ ಪಡೆದರು. ಸಾಲುಗಟ್ಟಿ ನಿಂತು ಹಣ ಪಡೆದರು. ಕೆಲವರು ಆಭರಣ ಖರೀದಿಗಾಗಿಯೇ ಸಾಲ ಪಡೆಯಲು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಎಸ್ಬಿಐನ ಎಟಿಎಂಗಳಲ್ಲಿ ಹಣ ಲಭಿಸಿತು. ಮಿಕ್ಕಂತೆ ಬೇರೆ ಬ್ಯಾಂಕುಗಳ ಎಟಿಎಂಗಳಲ್ಲಿ ಮಧ್ಯಾಹ್ನ 12ರ ಹೊತ್ತಿಗೆ ಬಹುತೇಕ ಹಣ ಖಾಲಿಯಾಗಿತ್ತು. ತಮ್ಮ ಬ್ಯಾಂಕಿನ ಎಟಿಎಂ ಹುಡುಕಿಕೊಂಡು ಹಣ ಪಡೆಯಲು ಹೋದವರು ಸುಸ್ತಾದರು.