ಮೈಸೂರಿನಲ್ಲಿ ಬೆಳ್ಳಂಬೆಳಗ್ಗೆ ಸರಗಳ್ಳರ ಹಾವಳಿ:ಒಂದೇ ದಿನ 5 ಕಡೆ ಕಳ್ಳತನ
ಮೈಸೂರು, ಮೇ 2: ಸಾಂಸ್ಕೃತಿಕ ನಗರಿಯಲ್ಲಿ ದಿನೇ - ದಿನೇ ಕಳ್ಳರ ಹಾವಳಿ ಹೆಚ್ಚಾಗಿದೆ. ಇಂದು ಮುಂಜಾನೆ ನಗರದ ಐದು ಕಡೆ ಸರಗಳ್ಳರು ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ. ಕೆಲವೇ ನಿಮಿಷಗಳ ಅಂತರದಲ್ಲಿ ತಮ್ಮ ಕೈಚಳಕ ತೋರಿಸಿರುವ ಸರಗಳ್ಳರು ವಿದ್ಯಾರಣ್ಯಪುರಂನಲ್ಲಿ ಎರಡು ಕಡೆ, ಎನ್ ಆರ್ ಮೊಹಲ್ಲಾ, ಇಟ್ಟಿಗೆ ಗೂಡು, ಗೋಕುಲಂನಲ್ಲಿ ತಲಾ ಒಂದು ಕಡೆ ಸರ ಅಪಹರಣವನ್ನು ಎಗ್ಗಿಲ್ಲದಂತೆ ನಡೆಸಿದ್ದಾರೆ.
ಕೆಂಪು ಪಲ್ಸರ್ ಬೈಕ್ ಮತ್ತು ಕರಿಷ್ಮಾ ಗಾಡಿಯಲ್ಲಿ ಬಂದು ಸರವನ್ನು ಕಿತ್ತು ಪರಾರಿಯಾಗಿದ್ದಾರೆ. ಮುಂಜಾನೆ ತಂಪಾಗಿರುವ ವಾತಾವರಣದಲ್ಲಿ ವಾಕ್ ಮಾಡುವ ಮಂದಿಯೇ ಅವರ ಟಾರ್ಗೆಟ್.
ಬೈಕ್ ಸವಾರರೇ ಎಚ್ಚರ:ಚಾಮರಾಜನಗರದಲ್ಲಿ ಶುರುವಾಗಿದೆ ಕಳ್ಳರ ಹಾವಳಿ
ದಾರಿಹೋಕರನ್ನು ಗಮನಿಸಿ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಅಪಹರಿಸುತ್ತಿದ್ದಾರೆ. ಒಂದೇ ದಿನ ಐದು ಕಡೆ ಸರಗಳ್ಳತನ ವಿಷಯ ಕೇಳಿ ಸಾಮಾನ್ಯ ಜನರು ಕಂಗಾಲಾಗಿದ್ದಾರೆ. ಗೋಕುಲಂನಲ್ಲಿ ಮಹಿಳೆಯರ ಕತ್ತಿಗೆ ಕೈ ಹಾಕಿದ ತಕ್ಷಣ ಅವರು ಕುಳಿತುಬಿಟ್ಟಿದ್ದಾರೆ. ಆದ್ದರಿಂದ ಕಳ್ಳರು ಸರ ಅಪಹರಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಮೈಸೂರಿನ ಎನ್ಐಇ ಕಾಲೇಜಿನ ಬ್ರಿಗೇಡ್ ಅಪಾರ್ಟ್ ಮೆಂಟ್ ಸಮೀಪ ಬೆಳಗ್ಗೆ 6ರ ಸುಮಾರಿಗೆ ವಾಕಿಂಗ್ ಮಾಡುವ ವೇಳೆ ಅಲ್ಲಿಯ ಸ್ಥಳೀಯ ನಿವಾಸಿಗಳಾದ ಜಯಲಕ್ಷ್ಮಮ್ಮ ಎಂಬುವರ ಕತ್ತಿನಲ್ಲಿದ್ದ 45 ಗ್ರಾಂ ಚಿನ್ನದ ಸರ, ಜಯಲಕ್ಷ್ಮಿ ಎಂಬುವವರ ಕತ್ತಿನಲ್ಲಿದ್ದ 12 ಗ್ರಾಂ ತೂಕದ ಚಿನ್ನದ ಸರ ಅಪಹರಿಸಿದ್ದು, ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೈಸೂರಲ್ಲಿ ಹೆಚ್ಚುತ್ತಿದೆ ಸರಗಳ್ಳರ ಕೈಚಳಕ
ಇದೇ ವೇಳೆ ಇಟ್ಟಿಗೆಗೂಡು ನಿವಾಸಿ ಸುಗುಣಾದೇವಿ ಎಂಬುವರು ಹಾಲು ತರಲು ಹೋದಾಗ ಕರಿಷ್ಮಾ ವಾಹನದಲ್ಲಿ ಬಂದ ಸರಗಳ್ಳರು ಅವರ ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದ ಸರವನ್ನು ಅಪಹರಿಸಿದ್ದಾರೆ. ಸ್ಥಳಕ್ಕೆ ನಜರಾಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೈಸೂರಿನಲ್ಲಿ ಚುನಾವಣೆ ಕಾವಿನ ಮಧ್ಯೆ ಹೆಚ್ಚುತ್ತಿದೆ ಸರಗಳ್ಳತನ
ಎನ್ ಆರ್ ಮೊಹಲ್ಲಾದಲ್ಲಿ ಲಲಿತಮ್ಮ ಎಂಬುವವರು ವಾಯುವಿಹಾರಕ್ಕೆ ತೆರಳಿದ್ದಾಗ ಅವರ ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದ ಸರವನ್ನು ಕರಿಷ್ಮಾ ಬೈಕ್ ನಲ್ಲಿ ಬಂದು ಅಪಹರಿಸಿದ್ದಾರೆ. ಸ್ಥಳಕ್ಕೆ ಎನ್ ಆರ್ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮೈಸೂರು ನಗರದ ಸುತ್ತಲೂ ಪೊಲೀಸರು ನಾಕಾಬಂದಿ ಕಳ್ಳರಿಗಾಗಿ ಶೋಧ ನಡೆಸಿದ್ದಾರೆ.