ಎಚ್.ಡಿ.ಕೋಟೆ ಗ್ರಾಮಸ್ಥರಿಗೆ ತಲೆನೋವಾದ ಹುಲಿ –ಚಿರತೆ ಉಪಟಳ
ಮೈಸೂರು, ಮೇ 11: ಬೆಳ್ಳಂಬೆಳಗ್ಗೆ ಚಿರತೆಯೊಂದು ಎಚ್ ಡಿ ಕೋಟೆ ತಾಲೂಕಿನ ಗಡಿ ಭಾಗದಲ್ಲಿರುವ ಕ್ಯಾತನಹಳ್ಳಿ ಗ್ರಾಮದೊಳಗೆ ನುಗ್ಗಿ ರಾಜಾರೋಷವಾಗಿ ಬೀದಿಗಳಲ್ಲಿ ಅಡ್ಡಾಡಿದ್ದಲ್ಲದೇ ಮನೆಯೊಳಕ್ಕೆ ನುಗ್ಗಿ ಇಬ್ಬರ ಮೇಲೆ ದಾಳಿ ನಡೆಸಿ ಇಡೀ ಗ್ರಾಮಸ್ಥರೇ ಬೆಚ್ಚಿ ಬೀಳುವಂತೆ ಮಾಡಿದ ಘಟನೆ ಶುಕ್ರವಾರ (ಮೇ.10) ನಡೆದಿದೆ.
ಇದಾದ ಬಳಿಕ ಉರುಳಿಗೆ ಸಿಕ್ಕಿ ಕತ್ತು, ಕಾಲು ಹೊಟ್ಟೆಯ ಭಾಗದಲ್ಲಿ ಗಂಭೀರ ಗಾಯವಾಗಿ ನಿತ್ರಾಣಗೊಂಡಿದ್ದ ಚಿರತೆಯನ್ನು ಸೆರೆ ಹಿಡಿದು ಮೈಸೂರಿನ ಮೃಗಾಲಯಕ್ಕೆ ಸಾಗಿಸುತ್ತಿದ್ದ ವೇಳೆ ದಾರಿ ಮಧ್ಯದಲ್ಲೇ ಸಾವಿಗೀಡಾಗಿದೆ.
ಎಚ್.ಡಿ.ಕೋಟೆ ತಾಲೂಕಿನಲ್ಲಿ ಹುಲಿ ದಾಳಿಗೆ ಮೂರನೇ ಬಲಿ : ಕಂಡಲ್ಲಿ ಗುಂಡಿಕ್ಕಲು ಆದೇಶ
ಗ್ರಾಮದಲ್ಲಿರುವ ಸಾರ್ವಜನಿಕ ಆಸ್ಪತ್ರೆ ಬಳಿ ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಚಿರತೆ ಕೆಲ ರೈತರಿಗೆ ಕಾಣಿಸಿಕೊಂಡಿದೆ. ನಂತರ ರಸ್ತೆಯಲ್ಲಿ ರಾಜಾರೋಷವಾಗಿ ಅಡ್ಡಾಡಿ ನಟರಾಜ್ ಎಂಬುವರ ಮನೆಯೊಳಗೆ ನುಗ್ಗಿದೆ. ಮನೆಯೊಳಗಿದ್ದ ನಟರಾಜ್ ಅವರ ಪತ್ನಿ ಚಿರತೆಯನ್ನು ಕಂಡು ಗಾಬರಿಯಾಗಿ ಮನೆಯಿಂದ ಹೊರಬಂದು ಮುಂದಿನ ಬಾಗಿಲನ್ನು ಮುಚ್ಚಿದ್ದಾರೆ.
ಕುಟುಂಬದವರ ಕಿರುಚಾಟ ಕೇಳಿ ಸ್ಥಳಕ್ಕೆ ಬಂದ ಆನಂದಮೂರ್ತಿ ಮತ್ತು ದಾಸಶೆಟ್ಟಿ ಅವರ ಮನೆಯ ಒಳಗೆ ಪ್ರವೇಶಿಸಿ ಚಿರತೆ ನೋಡಲು ಮುಂದಾದರು. ಈ ವೇಳೆ ಮೋಟುಗೋಡೆಯ ಕೆಳಗೆ ಅವಿತಿದ್ದ ಈ ಚಿರತೆ ಇಬ್ಬರ ಮೇಲೂ ದಾಳಿ ನಡೆಸಿದೆ. ಕೂಡಲೇ ಅವರನ್ನು ಕರೆದುಕೊಂಡು ಹೋದ ಗ್ರಾಮಸ್ಥರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಹುಲಿ ಬೇಟೆ ಆಡಿದ್ದೇವೆ ಅಂದರೆ ಅದರ ಕಳೇಬರ ಎಲ್ಲಿ?: ಸರಕಾರಕ್ಕೆ ಅನ್ಸಾರಿ ಪ್ರಶ್ನೆ
ಗ್ರಾಮದಲ್ಲಿ ಈ ವಿಚಾರ ಹರಡುತ್ತಿದ್ದಂತೆ ನೂರಾರು ಜನ ಮನೆಯ ಸುತ್ತಲೂ ಜಮಾಯಿಸಿ ಚಿರತೆಯನ್ನು ಸೆರೆ ಹಿಡಿಯಲು ಮತ್ತು ಸಾಯಿಸಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಗ್ರಾಮದ ಮುಖಂಡ ಕ್ಯಾತನಹಳ್ಳಿ ನಾಗರಾಜು ಮತ್ತಿತರರು ಅರಣ್ಯಾಧಿಕಾರಿ ಮಧು ಅವರಿಗೆ ಮಾಹಿತಿ ನೀಡಿದ್ದಾರೆ.
ಗ್ರಾಮಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಸ್ನಾನದ ಮನೆಯಲ್ಲಿದ್ದ ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡುತ್ತಿದ್ದಂತೆ, ಜ್ಞಾನ ತಪ್ಪಿ ಬಿದ್ದಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಚಿಕಿತ್ಸೆ ನೀಡಿ ಚಿರತೆಯನ್ನು ಮೈಸೂರಿನ ಮೃಗಾಲಯಕ್ಕೆ ಸಾಗಿಸುತ್ತಿದ್ದ ವೇಳೆ ಸಾಲುಂಡಿ ಬಳಿ ಸಾವಿಗೀಡಾಗಿದೆ. ಉರುಳಿಗೆ ಸಿಲುಕಿ ಕತ್ತು ಹೊಟ್ಟೆ ಕಾಲಿಗೆ ಗಂಭೀರ ಗಾಯವಾಗಿದ್ದರಿಂದ ಹಾಗೂ ಮೂರು ವಾರಗಳಿಂದ ಆಹಾರ ಸೇವಿಸದೆ ಸಂಪೂರ್ಣ ನಿತ್ರಾಣಗೊಂಡಿತ್ತು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಹುಲಿಯ ಹೆಜ್ಜೆಯ ಗುರುತುಗಳು ಪತ್ತೆ
ತಾಲೂಕಿನ ಮೊತ್ತ ಗ್ರಾಮದ ಬಳಿ ಹುಲಿಯ ಹೆಜ್ಜೆಯ ಗುರುತುಗಳು ಪತ್ತೆಯಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಅರಣ್ಯ ಅಧಿಕಾರಿಗಳು ಸಹ ಅದು ಹುಲಿ ಹೆಜ್ಜೆ ಗುರುತು ಎಂದು ಖಚಿತ ಪಡಿಸಿಕೊಂಡಿದ್ದಾರೆ.
ಉರುಳು ಹಾಕಿದ್ದು ಕಾಡುಹಂದಿಗೆ, ಆದರೆ ಸಿಕ್ಕಿಬಿದ್ದದ್ದು ಚಿರತೆ
ನಂತರ ಹೆಜ್ಜೆಯ ಗುರುತುಗಳನ್ನು ಹಿಂಬಾಲಿಸಿ ಹೋಗಿದ್ದಾರೆ. 15 ದಿನಗಳ ಹಿಂದೆ ರವಿ ಎಂಬುವವರ ತೋಟದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ರೈತರು ಆತಂಕಗೊಂಡಿದ್ದಾರೆ. ಪ್ರಾದೇಶಿಕ ವಲಯದ ಅಧಿಕಾರಿ ಮಧು, ಹುಲಿ ಸೆರೆ ಹಿಡಿಯಲು ಈಗಾಗಲೇ ಬೋನನ್ನು ಇರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದ್ದಾರೆ.