ಜಿಟಿಡಿಗೆ ಕುಮಾರಸ್ವಾಮಿ ಭರ್ಜರಿ ತಿರುಗೇಟು: ಚಾಮುಂಡೇಶ್ವರಿ ಜೆಡಿಎಸ್ ಅಭ್ಯರ್ಥಿ ಇವರೇ?
ಮೈಸೂರು, ಅ 13: ಮೈಸೂರು ರಾಜಕೀಯದಲ್ಲಿ ಇದು ನಿರೀಕ್ಷಿತವಾಗಿತ್ತು, ಜೊತೆಗೆ, ಸದ್ಯ ಜೆಡಿಎಸ್ ನಲ್ಲಿರುವ, ಶಾಸಕ ಜಿ.ಟಿ.ದೇವೇಗೌಡ ಅವರು ಕಾಂಗ್ರೆಸ್ ಸೇರುವುದು ಗೌಪ್ಯವಾಗಿಯೇನೂ ಉಳಿದಿರಲಿಲ್ಲ. ಆದರೆ, ಜೆಡಿಎಸ್ ವರಿಷ್ಠ ದೇವೇಗೌಡ್ರು ನಡೆಸುತ್ತಿದ್ದ ಮಾತುಕತೆಯಿಂದಾಗಿ, ಎಲ್ಲೋ ಒಂದು ಕಡೆ ಜಿಟಿಡಿ, ಜೆಡಿಎಸ್ ನಲ್ಲೇ ಉಳಿಯಬಹುದು ಎನ್ನುವ ನಿರೀಕ್ಷೆಯಿತ್ತು.
ಆದರೆ, ಜಿಟಿಡಿ ಬಯಸಿದರೂ ಅವರನ್ನು ಜೆಡಿಎಸ್ ನಲ್ಲಿ ಉಳಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಮನಸ್ಸು ಇದ್ದಂತಿಲ್ಲ. ಯಾಕೆಂದರೆ, ಜೆಡಿಎಸ್ ಪಕ್ಷವನ್ನು ತೊರೆಯುವ ನಿರ್ಧಾರಕ್ಕೆ ಜಿಟಿಡಿ ಬಂದಿದ್ದು, ಎಚ್ಡಿಕೆ ಜೊತೆಗಿನ ಮನಸ್ತಾಪದಿಂದಾಗಿ.
ಬಿಎಸ್ವೈ-ಸಿದ್ದರಾಮಯ್ಯ ತಡರಾತ್ರಿ ಭೇಟಿ: ಎಚ್.ಡಿ. ಕುಮಾರಸ್ವಾಮಿ ಸಿಡಿಸಿದ ಹೊಸ ಬಾಂಬ್
ಮೈಸೂರು ಪ್ರವಾಸದಲ್ಲಿರುವ ಎಚ್.ಡಿ.ಕುಮಾರಸ್ವಾಮಿಯವರು, ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಆಡಿದ ಮಾತು, ಬಹುತೇಕ ಮುಂದಿನ ಚುನಾವಣೆಗೆ ಇವರೇ ಜೆಡಿಎಸ್ ಅಭ್ಯರ್ಥಿ ಎನ್ನುವಂತಿತ್ತು.
ವೇದಿಕೆಯಲ್ಲಿ ಪರೋಕ್ಷವಾಗಿ ಜಿ.ಟಿ.ದೇವೇಗೌಡ್ರಿಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ, "ಜೆಡಿಎಸ್ ಪಕ್ಷವನ್ನು ನಂಬಿ ನೀವು ಮತ ಹಾಕಿದಿರಿ, ಆದರೆ, ಇಲ್ಲಿ ಗೆದ್ದವರು ನಿರೀಕ್ಷಿತ ರೀತಿಯಲ್ಲಿ ಕೆಲಸವನ್ನು ಮಾಡಲಿಲ್ಲ"ಎಂದು ಹೇಳಿದರು.
ಸಿಂಧಗಿ ಉಪ ಚುನಾವಣೆ: ತಾತ-ಮೊಮ್ಮಗನ ಜೋಡಿ ಮಾಡುವುದೇ ಮೋಡಿ?
ಜೆಡಿಎಸ್ ತೊರೆದಿರುವ ನಾಯಕರ ಜೊತೆಗೆ ಖುದ್ದಾಗಿ ದೇವೇಗೌಡ್ರ ಮಾತುಕತೆ
ವಿವಿಧ ಕಾರಣಗಳಿಂದ ಜೆಡಿಎಸ್ ತೊರೆದಿರುವ ನಾಯಕರ ಜೊತೆಗೆ ಖುದ್ದಾಗಿ ದೇವೇಗೌಡ್ರು ಮಾತುಕತೆ ನಡೆಸುತ್ತಿದ್ದಾರೆ, ಅದರಂತೆಯೇ, ಜಿ.ಟಿ.ದೇವೇಗೌಡ ಅವರ ಬಳಿಯೂ ಪಕ್ಷದಲ್ಲೇ ಉಳಿಯುವಂತೆ ಚರ್ಚೆ ಮಾಡಿದ್ದರು. ಆದರೆ, ಜಿಟಿಡಿ ಪಕ್ಷ ತೊರೆಯುವ ವಿಚಾರದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದರು. ಒಂದು ಹಂತದಲ್ಲಿ ಚಾಮುಂಡೇಶ್ವರಿ ಮತ್ತು ಹುಣಸೂರಿನಿಂದ ಟಿಕೆಟ್ ಬಯಸಿದ್ದರು ಎಂದೂ ಸುದ್ದಿಯಾಗಿತ್ತು. ಆದರೆ, ಜಿಟಿಡಿಯವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಎಚ್ಡಿಕೆ ಉತ್ಸುಕತೆ ತೋರುತ್ತಿಲ್ಲ ಎನ್ನುವ ಮಾತಿದೆ.
ಚಾಮುಂಡೇಶ್ವರಿ ವ್ಯಾಪ್ತಿಯಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ
ಚಾಮುಂಡೇಶ್ವರಿ ವ್ಯಾಪ್ತಿಯಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, "ಶಿವಮೂರ್ತಿಯವರಿಗೆ ಹಲವಾರು ವಿಚಾರದಲ್ಲಿ ನೋವಿದೆ. ಈತ ಸ್ವಲ್ಪ ಮುಗ್ದ, ಅಂತಹ ದೊಡ್ಡ ವಿದ್ಯಾವಂತನೇನೂ ಅಲ್ಲ, ಮೊದಲು ಸಣ್ಣ ನೌಕರನಾಗಿ, ಮತ್ತಿನ್ನೇನೋ ಕಡೆ ಕೆಲಸ ಮಾಡಿ, ರಿಯಲ್ ಎಸ್ಟೇಟ್ ನಲ್ಲಿ ತೊಡಗಿಸಿಕೊಂಡು ನಿಮ್ಮೆಲ್ಲರ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ. ಕೆಲವೊಂದು ಸಮಸ್ಯೆಯೂ ಆಗಿದೆ" ಎಂದು ಕುಮಾರಸ್ವಾಮಿ ಹೇಳುವ ಮೂಲಕ ಕ್ಷೇತ್ರಕ್ಕೆ ಈಗಲೇ ಅಭ್ಯರ್ಥಿಯನ್ನು ಪರಿಚಯಿಸಿದರಾ ಎನ್ನುವ ಚರ್ಚೆ ಆರಂಭವಾಗಿದೆ.
ಶಿವಮೂರ್ತಿಯವರು ಏನೇನು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವುದರ ಬಗ್ಗೆ ಅರಿವಿದೆ
"ಶಿವಮೂರ್ತಿಯವರು ಏನೇನು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವುದರ ಬಗ್ಗೆ ನನಗೆ ಅರಿವಿದೆ. ಬಡವರ ಬಗ್ಗೆ ಕಮಿಟ್ಮೆಂಟ್ ಇಟ್ಟುಕೊಂಡಿರುವ ರೈತ ಕುಟುಂಬದ ವ್ಯಕ್ತಿ. ಶಿವಮೂರ್ತಿಯವರನ್ನು ನೀವು ಕಾಪಾಡಿ. ನಿಮ್ಮ ಜೊತೆಗೆ ನಾವಿದ್ದೇವೆ, ಶಿವಮೂರ್ತಿ ರಕ್ಷಣೆಗೂ ನಾವಿದ್ದೇವೆ. ಈ ವ್ಯಕ್ತಿಯನ್ನು ನಿಮಗೆ ಒಪ್ಪಿಸುತ್ತಿದ್ದೇನೆ" ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾಗಿ, ಭದ್ರಾವತಿಯ ನಂತರ ಚಾಮುಂಡೇಶ್ವರಿ ಕ್ಷೇತ್ರಕ್ಕೂ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಬಹುತೇಕ ಫೈನಲ್ ಮಾಡಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಹಾಲಿ ಶಾಸಕ ಎಚ್.ಪಿ.ಮಂಜುನಾಥ್ ಅವರ ಮುಂದಿನ ಹೆಜ್ಜೆ ಕುತೂಹಲಕ್ಕೆ ಕಾರಣವಾಗಿದೆ
ಜಿಟಿಡಿ ತಮ್ಮ ಪುತ್ರ ಹರೀಶ್ ಗೌಡ ಅವರಿಗೆ ಹುಣಸೂರು ಕ್ಷೇತ್ರದ ಟಿಕೆಟ್ ಬಯಸುತ್ತಿರುವುದರಿಂದ, ಹಾಲಿ ಶಾಸಕ ಎಚ್.ಪಿ.ಮಂಜುನಾಥ್ ಅವರ ಮುಂದಿನ ಹೆಜ್ಜೆ ಕುತೂಹಲಕ್ಕೆ ಕಾರಣವಾಗಿದೆ. ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಭಾವೀ ಆಗಿರುವುದು, ಹಾಗಾಗಿ, ಮಂಜುನಾಥ್ ಅವರು ದಳಪತಿಗಳನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರದಲ್ಲಿ ಇನ್ನೂ ಸ್ಪಷ್ಟನೆ ಇಲ್ಲದಿದ್ದರೂ, ಒಂದು ಸುತ್ತಿನ ಮಾತುಕತೆ ಜೆಡಿಎಸ್ ಮುಖಂಡರ ಜೊತೆ ಟಿಕೆಟ್ ವಿಚಾರದಲ್ಲಿ ನಡೆದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದು, ಜಿಟಿಡಿ ಬಯಸುತ್ತಿರುವ ಎರಡು ಕ್ಷೇತ್ರಗಳಿಗೆ ಭರ್ಜರಿ ಪೈಪೋಟಿ ನೀಡಲು ಎಚ್ಡಿಕೆ ಈಗಲೇ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎನ್ನುವ ಮಾತು ಚಾಲ್ತಿಯಲ್ಲಿದೆ. (ಚಿತ್ರದಲ್ಲಿ: ಶಾಸಕ ಎಚ್.ಪಿ.ಮಂಜುನಾಥ್)
Recommended Video