ಮೈಸೂರು: ಜೆಎಸ್ಎಸ್ ಆಸ್ಪತ್ರೆಯಿಂದ ಇಮ್ಯುನಿಟಿ ಬೂಸ್ಟರ್ ಕಿಟ್ ಬಿಡುಗಡೆ
ಮೈಸೂರು, ಆಗಸ್ಟ್ 10: ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯು ರೋಗ ನಿರೋಧಕ ಶಕ್ತಿಯನ್ನು ಬಲಿಷ್ಠಗೊಳಿಸುವ ಗುಣಮಟ್ಟದ ಕಿಟ್ (ಇಮ್ಯುನಿಟಿ ಬೂಸ್ಟರ್ ಕಿಟ್) ನ್ನು ಹೊರತಂದಿದ್ದು, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಸೋಮವಾರ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು.
ಕಿಟ್ ಬಿಡುಗಡೆ ಬಳಿಕ ಮಾತನಾಡಿದ ಶ್ರೀಗಳು, ಭಾರತೀಯ ವೈದ್ಯ ಪದ್ಧತಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಪರಂಪರೆ ಬಹಳ ಹಿಂದಿನಿಂದಲೂ ಬಂದಿದೆ. ತಮ್ಮ ಜೀವನ ವಿಧಾನ ಪದ್ಧತಿಗಳನ್ನು ಪಾಲಿಸುವಂಥದ್ದು, ಗಿಡಮೂಲಿಕೆಗಳಿಂದ ತಯಾರಿಸಿದ ಔಷಧವನ್ನು ಬಳಸಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಂಡರೆ ರೋಗದಿಂದ ಗುಣಮುಖರಾಗಲು ಸಾಧ್ಯ ಎಂದರು.
ರೋಗಾಣುಗಳಿಂದ ದೂರವಿರಬಹುದು
ರೋಗ ನಿರೋಧಕ ಶಕ್ತಿ ಹೆಚ್ಚಿಸಿಳ್ಳಲು ಆಯುರ್ವೇದ ಔಷಧಿಗಳನ್ನು ಉಪಯೋಗಿಸುವುದರಿಂದ ದೈಹಿಕ ಶಕ್ತಿ, ಸಾಮರ್ಥ್ಯ ಹೆಚ್ಚಿಸಿಕೊಂಡು ರೋಗಾಣುಗಳಿಂದ ದೂರವಿರಬಹುದು ಎಂದು ತಿಳಿಸಿದರು. ಅತಿ ವೇಗವಾಗಿ ಹರಡುತ್ತಿರುವ ಕೋವಿಡ್-19 ಕ್ಲಿಷ್ಟಕರ ಸಂದರ್ಭದಲ್ಲಿ ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಖ್ಯಾತ ವೈದ್ಯ ಡಾ.ಹೆಗ್ಡೆ ಸೂಚಿಸಿದ ಸಿಂಪಲ್ ಮನೆ ಔಷಧಿ: ಕೊರೊನಾ ಮಾಯ!
ರೋಗ ನಿರೋಧಕ ಶಕ್ತಿ ಎಲ್ಲರಲ್ಲೂ ಸಾಧಾರಣವಾಗಿಯೇ ಇರುತ್ತದೆ
ರೋಗ ನಿರೋಧಕ ಶಕ್ತಿ ಎಲ್ಲರಲ್ಲೂ ಸಾಧಾರಣವಾಗಿಯೇ ಇರುತ್ತದೆ. ಕೆಲವರಲ್ಲಿ ಕಾಲಕ್ರಮೇಣ ಪ್ರಯತ್ನದಿಂದ ವೃದ್ಧಿಸುತ್ತದೆ. ಜಾಗೃತರಾಗಿ ರೋಗ ನಿರೋಧಕ ಶಕ್ತಿಯ ಮಟ್ಟವನ್ನು ಬಲಿಷ್ಠಗೊಳಿಸಿಕೊಳ್ಳುವುದು ಬಹಳ ಮುಖ್ಯವೆಂದು ಶ್ರೀಗಳು ಹೇಳಿದರು.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ
ಕೊರೊನಾ ವೈರಸ್ ರೋಗದ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯು ಸಾರ್ವಜನಿಕರ ಉಪಯೋಗಕ್ಕಾಗಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಗುಣಮಟ್ಟದ ಕಿಟ್ ಗಳನ್ನು ಒದಗಿಸುತ್ತಿದೆ, ಸಾರ್ವಜನಿಕರು ಇದನ್ನು ಬಳಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಇಮ್ಯುನಿಟಿ ಬೂಸ್ಟರ್ ಕಿಟ್ ಬೆಲೆ 999 ರುಪಾಯಿ
ಜೆಎಸ್ಎಸ್ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಸಿ.ಜಿ ಬೆಟಸೂರ್ ಮಠ್ ಮಾತನಾಡಿ, ಈ ಕಿಟ್ ಬೆಲೆ 999 ರುಪಾಯಿಗಳಾಗಿದ್ದು, ಲಲಿತಾದ್ರಿಪುರ ರಸ್ತೆಯಲ್ಲಿರುವ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆ, ಎಂ.ಜಿ ರಸ್ತೆಯಲ್ಲಿರುವ ಜೆಎಸ್ಎಸ್ ಆಸ್ಪತ್ರೆ, ಜೆಎಸ್ಎಸ್ ಹಳೆ ಆಸ್ಪತ್ರೆ ಆವರಣದಲ್ಲಿರುವ ಜೆಎಸ್ಎಸ್ ಜನೌಷಧಿ ಕೇಂದ್ರಗಳಲ್ಲಿ ಪಡೆಯಬಹುದು ಎಂದು ಮಾಹಿತಿ ನೀಡಿದರು.