ಮೈಸೂರಿನ ಸಂಪೂರ್ಣ ಅಭಿವೃದ್ಧಿಗೆ ನಾನು ಬದ್ಧ; ಸೋಮಶೇಖರ್
ಮೈಸೂರು, ನವೆಂಬರ್ 9: ಇಲ್ಲಿನ ಮೈಸೂರು ಮೆಡಿಕಲ್ ಕಾಲೇಜು ಪುರುಷರ ಹಾಸ್ಟೆಲ್ ಗೆ ಸೋಮವಾರ ಭೇಟಿ ನೀಡಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಿಥಿಲಗೊಂಡ ಕಟ್ಟಡ ಹಾಗೂ ಕೊಠಡಿಗಳನ್ನು ವೀಕ್ಷಿಸಿ ಹಾಸ್ಟೆಲ್ ಸ್ಥಿತಿಗತಿಯ ಕುರಿತು ಮಾಹಿತಿ ಕಲೆ ಹಾಕಿದರು.
ಶೀಘ್ರದಲ್ಲಿಯೇ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರನ್ನು ಭೇಟಿ ಮಾಡಿ ಸಮಸ್ಯೆಗಳ ಕುರಿತು ಚರ್ಚೆ ಮಾಡುತ್ತೇನೆ. ಜೊತೆಗೆ ದುರಸ್ತಿಗೆ ಬೇಕಾಗಿರುವ ಅನುದಾನವನ್ನು ಮಂಜೂರು ಮಾಡಿಸಲಾಗುವುದು ಎಂದು ತಿಳಿಸಿದರು.
ಅರಮನೆ ಆವರಣದಲ್ಲೇ ಶ್ರೀಗಂಧದ ಮ್ಯೂಸಿಯಂಗೆ ಚಿಂತನೆ: ಎಸ್.ಟಿ ಸೋಮಶೇಖರ್
ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿಲಯಗಳ ದುರಸ್ತಿಗೆ ಏಳೂವರೆ ಕೋಟಿ ರೂಪಾಯಿ ಅಗತ್ಯವಿರುವ ಬಗ್ಗೆ ಈ ಹಿಂದೆ ಅಂದಾಜು ಮಾಡಲಾಗಿತ್ತು. ಈಗ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಹಿಂದಿನ ಅಂದಾಜು ವೆಚ್ಚಕ್ಕಿಂತ ಶೇ.10ರಿಂದ ಶೇ.15ರಷ್ಟು ಹೆಚ್ಚು ವೆಚ್ಚವಾಗಬಹುದು. ಎಲ್ಲವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
"ನಾನು ಮೈಸೂರು ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಮಾಧ್ಯಮಗಳು, ಜನಪ್ರತಿನಿಧಿಗಳು ಇಲ್ಲವೇ ಸಾರ್ವಜನಿಕರಿಂದ ಗಮನಕ್ಕೆ ಬಂದರೆ ತಕ್ಷಣ ಸ್ಪಂದಿಸುವ ಜಾಯಮಾನ ನನ್ನದು. ಅಭಿವೃದ್ಧಿ ವಿಷಯದಲ್ಲಿ ನಾನು ತಕ್ಷಣವೇ ಸ್ಪಂದಿಸುತ್ತೇನೆ" ಎಂದು ತಿಳಿಸಿದರು. ಈ ಸಂದರ್ಭ ಶಾಸಕರಾದ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.