ಅಕ್ರಮ ಪಡಿತರ ಸಾಗಾಟ: ಲಾರಿ ಸಹಿತ ಓರ್ವನ ಬಂಧನ
ಮೈಸೂರು, ಮೇ 13: ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸೇರಿದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯ ಸಹಿತ ಓರ್ವನನ್ನು ಬಂಧಿಸುವಲ್ಲಿ ನಂಜನಗೂಡು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಂದು ಬೆಳಗಿನ ಜಾವ ಕೇರಳ ಮೂಲದ ಲಾರಿಯಲ್ಲಿ ಬಡವರಿಗೆ ಸೇರಬೇಕಾದ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ಖದೀಮರು, ನಂಜನಗೂಡಿನ ಹೆಜ್ಜಿಗೆ ಸೇತುವೆ ಬಳಿ ಅಕ್ಕಿ ಮೂಟೆ ಸಾಗಿಸುತ್ತಿದ್ದ ಲಾರಿಯನ್ನು ಸೀಜ್ ಮಾಡಲಾಗಿದೆ.
ಮೈಮುಲ್ ನೌಕರರ ನೇಮಕಾತಿಯಲ್ಲಿ ಭಾರೀ ಅವ್ಯವಹಾರ; ಸಾ.ರಾ. ಮಹೇಶ್ ಆರೋಪ
ನಂಜನಗೂಡು ಮಾರ್ಗವಾಗಿ ಕೇರಳಕ್ಕೆ ಸಾಗಣೆಯಾಗುತ್ತಿದ್ದ ಲಾರಿಯಲ್ಲಿ ಅಕ್ರಮ ಪಡಿತರ ಅಕ್ಕಿ ಇತ್ತು ಎಂದು ಹೇಳಲಾಗಿದೆ. ನಂಜನಗೂಡಿನ ಆಹಾರ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಸುಮಾರು 250 ಅಕ್ಕಿ ಮೂಟೆ ವಶಪಡಿಸಿಕೊಳ್ಳಲಾಗಿದೆ.
ಇದನ್ನು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ರೈಸ್ ಮಿಲ್ ನಿಂದ ಸಾಗಾಟ ಮಾಡಲಾಗುತ್ತಿದ್ದು, ಈ ಸಂಬಂಧ ಕೇರಳದ ನಿಜಾಮುದ್ದೀನ್ ಎಂಬಾತನನ್ನು ಬಂಧಿಸಲಾಗಿದೆ. ದಾಳಿಯ ವೇಳೆ ಲಾರಿಯಲ್ಲಿದ್ದ ಇನ್ನಿಬ್ಬರು ಪರಾರಿಯಾಗಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.