ಮೈಸೂರಲ್ಲಿ ಅಕ್ರಮ ಪಡಿತರ ಅಕ್ಕಿ ವಶ: ನಾಲ್ವರ ಬಂಧನ
ಮೈಸೂರು, ಮಾರ್ಚ್ 20: ಮೈಸೂರು ನಗರದ ಸಿಸಿಬಿ ಪೊಲೀಸರು ಇಂದು ಬೆಳಿಗ್ಗೆ ಹಠಾತ್ ದಾಳಿ ನಡೆಸಿ, ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸೇರಿದ ಈ ಅಕ್ಕಿಯನ್ನು ಅಕ್ರಮವಾಗಿ ಗೋದಾಮಿನಲ್ಲಿ ಇಟ್ಟುಕೊಂಡಿದ್ದ ಶಕ್ಲೀನ್ ಷರೀಫ್ (26), ನಯಾಜ್ ಖಾನ್ (34), ಇಶಾನ್ ಬೇಗ್ (31) ಹಾಗೂ ಜಮೀರ್ ಪಾಷ (38) ಬಂಧಿತ ಆರೋಪಿಗಳು.
ಇವರು ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಸಂಗ್ರಹಿಸಿ ನಂತರ ಅದನ್ನು ಮಿಲ್ ಗಳಲ್ಲಿ ಪಾಲಿಷ್ ಮಾಡಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟುಕೊಂಡಿದ್ದರು.
ಪೊಲೀಸರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಗೋದಾಮು ಮೇಲೆ ದಾಳಿ ನಡೆಸಿ 49.16 ಕ್ವಿಂಟಾಲ್ ಅಕ್ಕಿ, 1 ಎಲೆಕ್ಟ್ರಾನಿಕ್ ಯಂತ್ರ, ಚೀಲ ಹೊಲೆಯುವ ಯಂತ್ರ, 4,000 ನಗದು ಹಾಗೂ ಅಕ್ಕಿ ಸಾಗಿಸುವುದಕ್ಕಾಗಿ ಬಳಸಿದ ಟಾಟಾ ಏಸ್ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.