ಸಚಿವ ಸ್ಥಾನ ಸಿಕ್ಕರೆ ನಿರ್ವಹಿಸುತ್ತೇನೆ ಎಂದ ಅಡಗೂರು ವಿಶ್ವನಾಥ್
ಮೈಸೂರು, ಜೂನ್ 12: ನನಗೆ ಸಚಿವ ಸ್ಥಾನ ನೀಡಿದರೆ ಜವಾಬ್ದಾರಿಯುತವಾಗಿ ನಿರ್ವಹಿಸುತ್ತೇನೆ. ಆದರೆ ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು ಎಂದು ಶಾಸಕ ಅಡಗೂರು ವಿಶ್ವನಾಥ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ನೀಡುವ ಅಧಿಕಾರ ಸಿಎಂ ಕುಮಾರಸ್ವಾಮಿ ಅವರ ಕೈಯಲ್ಲಿದೆ. ಅಕಸ್ಮಾತ್ ನನಗೆ ಸಚಿವ ಸ್ಥಾನ ನೀಡಿದರೆ ಜವಾಬ್ದಾರಿಯುತವಾಗಿ ನಿರ್ವಹಿಸುತ್ತೇನೆ ಎಂದರು.
'ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ವಿಶ್ವನಾಥ್ ಅವರಿಗಿಲ್ಲ'
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನು ಪುನಃ ಪಡೆಯುವ ಪ್ರಶ್ನೆಯೇ ಇಲ್ಲ. ಪಕ್ಷದಲ್ಲಿ ಸಮರ್ಥ ಯುವಕರಿದ್ದಾರೆ. ಯುವಕರಿಗೆ ಅವಕಾಶ ನೀಡಿ ಎಂದು ವರಿಷ್ಠರಿಗೆ ಹೇಳಿದ್ದೇನೆ. ನನ್ನ ಕ್ಷೇತ್ರದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದೇನೆ. ನನ್ನ ಊರಿನ ಸರ್ವತೋಮುಖ ಅಭಿವೃದ್ಧಿಯೇ ಮುಂದಿನ ಗುರಿ ಎಂದರು.
ಜಾತ್ಯತೀತ ಜನತಾ ದಳದ ಪಕ್ಷದಿಂದ ಸಚಿವ ಸಂಪುಟದಲ್ಲಿ ಎರಡು ಸಚಿವ ಸ್ಥಾನಗಳು ಖಾಲಿ ಇದೆ. ಒಂದು ಸ್ಥಾನವನ್ನು ಮುಸ್ಲಿಮರಿಗೆ ಮತ್ತೊಂದು ಸ್ಥಾನವನ್ನು ದಲಿತರಿಗೆ ನೀಡಬೇಕಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರು ದಳಕ್ಕೆ ನಿರೀಕ್ಷಿತ ಬೆಂಬಲ ನೀಡದೆ ಇದ್ದಿರಬಹುದು. ಆದರೆ ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅವರು ಬೆಂಬಲ ನೀಡಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗೆದ್ದಿರುವ ಜಾ.ದಳ ಅಭ್ಯರ್ಥಿಗಳ ಪೈಕಿ ಶೇ.40ರಷ್ಟು ಮುಸ್ಲಿಮರಿದ್ದು, ಅದರ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರೇ ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.