ಹಾಲಪ್ಪ ಕಾಂಗ್ರೆಸ್ ಗೆ ಬಂದರೆ ಸ್ವಾಗತ ಎಂದ ಸಿದ್ದರಾಮಯ್ಯ
Recommended Video
ಮೈಸೂರು, ಏಪ್ರಿಲ್ 1 : ಹಾಲಪ್ಪ ನಮ್ಮ ಪಕ್ಷಕ್ಕೆ ಬಂದರೆ ಒಳ್ಳೆಯದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದರು. ಚಾಮುಂಡೇಶ್ವರಿ ಕ್ಷೇತ್ರದ ಪ್ರಚಾರದ ವೇಳೆ ಮಾತನಾಡಿದ ಅವರು, ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಕಾಂಗ್ರೆಸ್ ಗೆ ಮರಳುವ ಬಗ್ಗೆ ಯತ್ನ ಆರಂಭಿಸಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಜೊತೆ ಮಾತುಕತೆ ನಡೆಸುತ್ತೇನೆ ಎಂದರು.
ಹಾಲಪ್ಪ ಸೇರಿದಂತೆ ಬಿಜೆಪಿಯ ಅನೇಕ ಮುಖಂಡರು ಕಾಂಗ್ರೆಸ್ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ. ನಾನು ಆ ಕುರಿತು ಹೈಕಮಾಂಡ್ ಜೊತೆ ಮಾತನಾಡುತ್ತೇನೆ. ಹಾಲಪ್ಪ ಅವರ ಮೇಲಿದ್ದ ಕ್ರಿಮಿನಲ್ ಕೇಸ್ ಖುಲಾಸೆ ಆಗಿದೆ. ಅವರೀಗ ಆರೋಪ ಮುಕ್ತರಾಗಿದ್ದಾರೆ. ಅವರು ಹಿಂದುಳಿದ ವರ್ಗದ ನಾಯಕ. ಸಿದ್ಧಾಂತ ಹೊಂದಾಣಿಕೆ ಆಗುತ್ತದೆ. ಪಕ್ಷ ಸೇರ್ಪಡೆಯಾಗಲು ಅಡ್ಡಿ ಇಲ್ಲ. ಒಂದೇ ಸಿದ್ಧಾಂತ ನಂಬಿ ಬರುವವರಿಗೆ ಪಕ್ಷಕ್ಕೆ ಸ್ವಾಗತವಿದೆ ಎಂದರು.
ಶಿವಮೊಗ್ಗ ರಾಜಕೀಯ ಚಿತ್ರಣ ಬದಲು : ಹಾಲಪ್ಪ ಕಾಂಗ್ರೆಸ್ಗೆ?
ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ಜಯ ಗಳಿಸುವ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕ್ಷೇತ್ರದ ವಿವಿಧ ಹಳ್ಳಿಗಳಿಗೆ ತೆರಳಿ ಭಾನುವಾರ ಭರ್ಜರಿ ಪ್ರಚಾರ ನಡೆಸಿದ ಸಿದ್ದರಾಮಯ್ಯ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದೇನೆ ಎಂದು ಹೇಳಿದರು.
ಕುಮಾರಸ್ವಾಮಿ ಮಾಡಿದ್ದನ್ನು ನನಗೆ ಅನ್ವಯಿಸಿದ್ದಾರೆ
ಮುಖ್ಯಮಂತ್ರಿ ಸಿದ್ದರಾಮಯ್ಯ ರೆಸಾರ್ಟ್ ನಲ್ಲಿ ಕುಳಿತು ಬಂಡಲ್ ಗಟ್ಟಲೆ ಹಣ ಹಂಚಿಕೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿರುವುದಕ್ಕೆ ಸಿದ್ದು ಗರಂ ಆದರು. ರೆಸಾರ್ಟ್ ನಲ್ಲಿ ಕುಳಿತು ಹಣ ಹಂಚಿಕೆ ಮಾಡಿಲ್ಲ. ಕುಮಾರಸ್ವಾಮಿ ಅವರು ಮಾಡುವುದನ್ನು ನನಗೆ ಅನ್ವಯಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
750 ಕೆ.ಜಿ. ತೂಕದ ಸೇಬುಗಳ ಹಾರ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಸಿದ್ದರಾಮಯ್ಯ ಅವರಿಗೆ ಹೂಟಗಳ್ಳಿಯಲ್ಲಿ ಅಭಿಮಾನಿಗಳ ಸಂಘದ ಅಧ್ಯಕ್ಷ ದೇಶಿ ಗೌಡ ಅವರು 750 ಕೆ.ಜಿ. ತೂಕದ ಸೇಬುಗಳ ಹಾರ ಹಾಕಿ ಸ್ವಾಗತಿಸಿದರು. ಕಾರ್ಯಕ್ರಮದ ನಂತರ ಸೇಬು ಹಣ್ಣಿನ ಹಾರವು ಅಲ್ಲಿ ನೆರೆದಿದ್ದ ಜನರಿಗೆ ಆಹಾರವಾಯಿತು.
ಸೇಬನ್ನು ಜನರು ಹೆಲ್ಮೆಟ್, ಸೀರೆ ಹಾಗೂ ಟೋಪಿಗೆ ತುಂಬಿಕೊಂಡರು
ತೆರೆದ ವಾಹನದಲ್ಲಿ ಸಿದ್ದರಾಮಯ್ಯ ಮತಯಾಚನೆ ಮಾಡುವಾಗ ಅವರಿಗೆ ಸೇಬಿನ ಹಾರ ಹಾಕಲು ಮುಂದಾದರು. ಅಲ್ಲಿ ನೆರೆದಿದ್ದ ಜನ ನಡು ರಸ್ತೆಯಲ್ಲೇ ಕ್ರೇನ್ ಮೇಲೆ ಮುಗಿ ಬಿದ್ದು ಸೇಬುಗಳನ್ನು ಹಾರದಿಂದ ಕಿತ್ತುಕೊಳ್ಳಲು ಆರಂಭಿಸಿದರು. ಕ್ರೇನ್ ಮೇಲಿದ್ದ ಸೇಬನ್ನು ಜನರು ಹೆಲ್ಮೆಟ್, ಸೀರೆ ಹಾಗೂ ಟೋಪಿಗೆ ತುಂಬಿಕೊಂಡರು
ಕಾಂಗ್ರೆಸ್ ಮುಖಂಡರನ್ನು ಜೆಡಿಎಸ್ ಗೆ ಸೆಳೆದ ಜಿಟಿ ದೇವೇಗೌಡ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರಚಾರಕ್ಕೆ ಸಿದ್ಧತೆ ನಡೆಸಿದ್ದರೆ, ರಾತ್ರೋರಾತ್ರಿ ಜಿ.ಟಿ.ದೇವೇಗೌಡರು ಕೈ ಮುಖಂಡರನ್ನು ಹೈಜಾಕ್ ಮಾಡಿದ್ದಾರೆ. ಮನೆಯಲ್ಲೇ ಕುಳಿತು ಶಾಸಕ ಜಿಟಿಡಿ ಗ್ರೌಂಡ್ ವರ್ಕ್ ಮಾಡಿದ್ದು, ಹಲವು ಪ್ರಭಾವಿ ಕೈ ಮುಖಂಡರನ್ನು ಜೆಡಿಎಸ್ ಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೆ.ಆರ್. ಮಿಲ್, ಸಿಂಧುವಳ್ಳಿಯ ಕಾಂಗ್ರೆಸ್ ಮುಖಂಡರು ಮೈಸೂರಿನ ದೇವೇಗೌಡ ನಿವಾಸದಲ್ಲಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.