ಅಂಗವಿಕಲರ ಮಾಸಿಕ ಪಿಂಚಣಿಗೂ ಐಡೆಂಟಿಟಿ ಕಾರ್ಡ್ ಕಡ್ಡಾಯ
ಮೈಸೂರು, ಜುಲೈ 11: ಮಾಸಿಕ ಪಿಂಚಣಿ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಅಂಗವಿಕಲರು ಇನ್ನು ಮುಂದೆ ಕೇಂದ್ರ ಸರ್ಕಾರದಿಂದ ನೀಡಲಾಗುವ ಆಧಾರ್ ಮಾದರಿಯ ಯುಡಿಐಡಿ ವಿಶಿಷ್ಟ ಗುರುತಿನ ಚೀಟಿ (ಗಣಕೀಕೃತ ಗುರುತಿನ ಚೀಟಿ) ಹೊಂದುವುದು ಕಡ್ಡಾಯವಾಗಿದೆ.
ಜಿಲ್ಲೆಯ ಅಂಗವಿಕಲರು ಆದಷ್ಟು ಬೇಗ ಈ ಕಾರ್ಡ್ಗಳನ್ನು ಮಾಡಿಸಿಕೊಂಡು ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಅಂಗವಿಕಲರ ಕಲ್ಯಾಣ ಆಯುಕ್ತರಾಗಿ ವಿ.ಎಸ್ ಬಸವರಾಜ್ ನೇಮಕ
ಈ ಹಿಂದೆ ಅಂಗವಿಕಲರಿಗೆ ಇಲಾಖೆಯಿಂದ ಗುರುತಿನ ಚೀಟಿ ಕೊಡಲಾಗುತ್ತಿತ್ತು. ಈ ಕಾರ್ಡ್ಗಳಿಂದ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ ಕಷ್ಟವಾಗಿತ್ತು. ನೈಜ ಫಲಾನುಭವಿಗಳ ಬದಲಿಗೆ ಬೇರೊಬ್ಬರು ಲಾಭ ಪಡೆಯುತ್ತಿದ್ದರು. ಅಕ್ರಮಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ನಕಲು ಮಾಡಲಾಗದ ಗುರುತಿನ ಚೀಟಿಯನ್ನು ಬಳಕೆಗೆ ತಂದಿದೆ. 6 ವರ್ಷ ಮೇಲ್ಪಟ್ಟ ಎಲ್ಲ ಅಂಗವಿಕಲರಿಗೆ ಈ ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಲಾಗಿದೆ. ಕಳೆದ ಡಿಸೆಂಬರ್ನಿಂದಲೇ ಈ ನೂತನ ಗುರುತಿನ ಚೀಟಿ ವಿತರಣೆ ಪ್ರಕ್ರಿಯೆ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 30 ಸಾವಿರಕ್ಕೂ ಹೆಚ್ಚು ಅಂಗವಿಕಲರಿದ್ದಾರೆ. ಅವರಲ್ಲಿ ಇಲ್ಲಿಯವರೆಗೆ 5 ಸಾವಿರ ಜನರು ಆನ್ಲೈನ್ ಮೂಲಕ ನೋಂದಣಿಗೆ ಅರ್ಜಿ ಸಲ್ಲಿಸಿದ್ದಾರೆ.
ಈಗಾಗಲೇ ಅಂಗವಿಕಲ ಗುರುತಿನ ಚೀಟಿ ಹೊಂದಿದವರು ವೆಬ್ಸೈಟ್ ಮೂಲಕ ಆಧಾರ ಕಾರ್ಡ್, ವೈದ್ಯಕೀಯ ಪ್ರಮಾಣ ಪತ್ರ, ಮಾಸಾಶನ ಪ್ರಮಾಣ ಪತ್ರ, ಗುರುತಿನ ಚೀಟಿ, ಭಾವಚಿತ್ರಗಳನ್ನು ಸ್ಕ್ಯಾನ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ನೂತನ ಕಾರ್ಡ್ ಮಾಡಿಸಿಕೊಳ್ಳದಿದ್ದರೆ ಇನ್ನು ಮುಂದೆ ಪಿಂಚಣಿ ಕೂಡಾ ರದ್ದಾಗಲಿದೆ.
ರೆಸ್ಟೋರೆಂಟ್ಗಳಲ್ಲಿ ವಿಕಲಚೇತನರಿಗೆ ರ್ಯಾಂಪ್ ಸೌಲಭ್ಯ!
ಈ ಕಾರ್ಡ್ ನೀಡುವುದಕ್ಕಾಗಿ ತಾಲ್ಲೂಕು ವೈದ್ಯಾಧಿಕಾರಿ ಅಧ್ಯಕ್ಷತೆಯಲ್ಲಿ ಸಕ್ಷಮ ಪ್ರಾಧಿಕಾರ ರಚನೆ ಮಾಡಲಾಗಿದೆ. ಅದು ನೀಡುವ ಪ್ರಮಾಣ ಪತ್ರವನ್ನು ಆಧರಿಸಿ ಹೆಸರು ನೋಂದಾಯಿಸಬಹುದಾಗಿದೆ. ಪ್ರತಿಯೊಂದು ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ಈ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ.