84ರ ಪ್ರಾಯದಲ್ಲಿ ಮದುವೆ ಆಗೋಕೆ ಸಾಧ್ಯವೇ: ಕೃಷ್ಣಗೆ ಇಬ್ರಾಹಿಂ ಲೇವಡಿ
ನಂಜನಗೂಡಿನ ಹುಲ್ಲಹಳ್ಳಿಯಲ್ಲಿ ಉಪಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದ ಅವರು, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಮಾಜಿ ಮುಖ್ಯಮಂತ್ರಿ ಬಗ್ಗೆ ವ್ಯಂಗ್ಯವಾಡಿದ ಇಬ್ರಾಹಿಂ.
ನಂಜನಗೂಡು, ಏಪ್ರಿಲ್ 4: ''ಮೂವತ್ತೈದು ವರ್ಷವಾಗಿದ್ದಾಗ ಮದುವೆ ಆಗಬಹುದು. ಆದರೆ, 84 ವರ್ಷವಾದಾಗ ಮದುವೆ ಆಗಲು ಸಾಧ್ಯವೇ?'' ಎಂದು ಕೇಳುವ ಮೂಲಕ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ, ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ಅವರನ್ನು ಲೇವಡಿ ಮಾಡಿದ್ದಾರೆ.
ನಂಜನಗೂಡಿನ ಹುಲ್ಲಹಳ್ಳಿಯಲ್ಲಿ ಉಪಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದ ಅವರು, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.[ಎಸ್ಸೆಂ ಕೃಷ್ಣರನ್ನು ಲೇವಡಿ ಮಾಡಿದ ಇಬ್ರಾಹಿಂಗೆ ಜಗ್ಗೇಶ್ ತಿರುಗೇಟು]
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ಸಜ್ಜಾದ ಅವರ ಮಾತುಗಳು ಎಸ್.ಕೃಷ್ಣ ಅವರ ಕಡೆಗೆ ಹೊರಳಿದವು. ''ಮನೆಯ ಯಜಮಾನ ತನಗಿಂತ ಚಿಕ್ಕವರಿಗೆ ಮದುವೆ ಮಾಡಿಸಬೇಕು. ಆದರೆ, ತಾನೇ ಮದುವೆ ಆಗ್ತೀನಿ ಅಂದ್ರೆ ಹೇಗೆ'' ಎಂದು ಅವರು ಕೃಷ್ಣ ಅವರ ಬಗ್ಗೆ ಕೊಂಕು ಮಾತುಗಳನ್ನಾಡಿದರು.
ಈಗ ಬಿಜೆಪಿ ಸೇರಿದ ಮಾತ್ರಕ್ಕೆ ತಮಗೆ ಅಧಿಕಾರ, ಗೌರವ ಸ್ಥಾನಮಾನಗಳನ್ನು ನೀಡಿದ ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದರಲ್ಲಿ ಏನಿದೆ ಅರ್ಥ? ಎಂದೂ ಅವರು ಪ್ರಶ್ನಿಸಿದರು.