ಬ್ರೇಕಿಂಗ್ ನ್ಯೂಸ್ ಕೊಟ್ಟ ಚಾಮುಂಡೇಶ್ವರಿ ಶಾಸಕ ಜಿ. ಟಿ. ದೇವೇಗೌಡ!
ಮೈಸೂರು, ಮಾರ್ಚ್ 10 : ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಜೆಡಿಎಸ್ ತೊರೆಯಲಿದ್ದಾರೆ. ಯಡಿಯೂರಪ್ಪ ಹೊಗಳುವ ಅವರು ಬಿಜೆಪಿ ಸೇರಲಿದ್ದಾರೆ. ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಜಿ. ಟಿ. ದೇವೇಗೌಡ ಪಕ್ಷಾಂತರ ಮಾಡಲಿದ್ದಾರೆ ಹೀಗೆ ಮೈಸೂರಿಂದ ಬೆಂಗಳೂರಿನ ತನಕ ಜಿ. ಟಿ. ದೇವೇಗೌಡರ ಮುಂದಿನ ನಡೆ ಬಗ್ಗೆ ಹಲವು ಸುದ್ದಿಗಳು ಹಬ್ಬಿವೆ.
ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಮುಂದಿನ ನಡೆ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಜಿ. ಟಿ. ದೇವೇಗೌಡ ಪಕ್ಷದ ಚಟುವಟಿಕೆಯಿಂದ ದೂರವಾಗಿದ್ದಾರೆ.
ಪರಿಷತ್ ಚುನಾವಣೆ; ಜೆಡಿಎಸ್ ಶಾಸಕನಿಂದ ಬಿಜೆಪಿ ಅಭ್ಯರ್ಥಿಗೆ ಮತ
"ನಾನು ಜೆಡಿಎಸ್ ಪಕ್ಷದಿಂದ ಗೆದ್ದಿದ್ದೇನೆ. ಜೆಡಿಎಸ್ನಲ್ಲೇ ಇರುತ್ತೇನೆ. ಶಾಸಕ ಸ್ಥಾನದ ಅವಧಿ ಮುಗಿಯಲು ಇನ್ನೂ ಮೂರು ವರ್ಷಗಳಿವೆ. ಬೇರೆ ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ" ಎಂದು ಶಾಸಕ ಜಿ. ಟಿ. ದೇವೇಗೌಡ ಸ್ಪಷ್ಟಪಡಿಸಿದರು.
ಜಿಟಿ ದೇವೇಗೌಡ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ
ಶಾಸಕ ಜಿ. ಟಿ. ದೇವೇಗೌಡ ಬಗ್ಗೆ ಮಾತನಾಡಿದ್ದ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ, "ಜಿ. ಟಿ. ದೇವೇಗೌಡ ಪಕ್ಷ ಬಿಟ್ಟು ಹೋದರೆ ತಲೆ ಕೆಡಿಸಿಕೊಳ್ಳುವುದಿಲ್ಲ" ಎಂದು ಹೇಳಿಕೆ ನೀಡಿದ್ದರು. ಜಿ. ಟಿ. ದೇವೇಗೌಡರ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿತ್ತು.
ಜಿ. ಟಿ. ದೇವೇಗೌಡ ಬಿಜೆಪಿಗೆ; ದೇವೇಗೌಡರು ಹೇಳಿದ್ದೇನು?
ದೇವೇಗೌಡರ ಮಾತು ನಿಜ
"ಅಸಮಾಧಾನವಿದ್ದವರು ಪಕ್ಷ ಬಿಟ್ಟು ಹೋಗಲಿ ಎಂದು ಎಚ್. ಡಿ. ದೇವೇಗೌಡರು ನೇರವಾಗಿ ಹೇಳಿದ್ದಾರೆ. ಅವರ ಮಾತು ನಿಜ, ಕಾರ್ಯಕರ್ತರು ಪಕ್ಷದ ಆಸ್ತಿ" ಎಂದು ಜಿ. ಟಿ. ದೇವೇಗೌಡ ಹೇಳಿದರು.
"ಎಚ್. ಡಿ. ಕುಮಾರಸ್ವಾಮಿ ಅವರಿಗೆ ಇನ್ನೂ ವಯಸ್ಸಿದೆ. ದೈವಬಲವೂ ಇದೆ. ಪಕ್ಷದಲ್ಲಿ ಯಾರು ಇರಲಿ, ಹೋಗಲಿ ಮತ್ತೆ ಮುಖ್ಯಮಂತ್ರಿ ಆಗುವ ವಿಶ್ವಾಸ ಅವರಿಗೆ ಇದೆ" ಎಂದು ಜಿ. ಟಿ. ದೇವೇಗೌಡರು ತಿಳಿಸಿದರು.
ಮೈತ್ರಿ ಸರ್ಕಾರದಲ್ಲಿ ಅಸಮಾಧಾನ
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಜಿ. ಟಿ. ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆ ನೀಡಲಾಗಿತ್ತು. ಆದರೆ, ಖಾತೆ ಹಂಚಿಕೆ ಬಗ್ಗೆ ಅವರಿಗೆ ಅಸಮಾಧಾನವಿತ್ತು. ಸರ್ಕಾರ ಪತನವಾದ ಬಳಿಕ ಅವರು ಪಕ್ಷದ ಚಟುವಟಿಕೆಯಿಂದ ದೂರವಾಗಿದ್ದರು.
ಯಡಿಯೂರಪ್ಪ ಭೇಟಿ ಮಾಡಿದ್ದರು
ಜಿ. ಟಿ. ದೇವೇಗೌಡರು ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿ. ಎಸ್. ಯಡಿಯೂರಪ್ಪ ಹೊಗಳಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿಯಾಗಿದ್ದರು. ಆದ್ದರಿಂದ, ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು.
ಜೆಡಿಎಸ್ನಲ್ಲಿ ಅಸಮಾಧಾನ
ಜಿ. ಟಿ. ದೇವೇಗೌಡ ಪಕ್ಷದ ಚಟುವಟಿಕೆಯಿಂದ ದೂರವಾಗಿದ್ದಾರೆ. ಬಿಜೆಪಿ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಈ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಕೆ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರು. "ಜಿ. ಟಿ. ದೇವೇಗೌಡರು ದ್ವಂದ ನಿಲುವು ತಳೆದಿದ್ದಾರೆ. ಇಲ್ಲೂ ಇದ್ದು, ಅಲ್ಲೂ ಇರುವ ಕೆಲಸ ಮಾಡುತ್ತಿದ್ದಾರೆ. ಇದು ಅಶಿಸ್ತಿನ ಪರಮಾವಧಿ" ಎಂದು ಹೇಳಿದ್ದರು.
ಸಿದ್ದರಾಮಯ್ಯ ಸೋಲಿಸಿದ್ದಾರೆ
2018ರ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸೋಲಿಸಿ ಜಿ. ಟಿ. ದೇವೇಗೌಡ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1,21,325 ಮತಗಳನ್ನು ಪಡೆದು 85,283 ಮತಪಡೆದಿದ್ದ ಸಿದ್ದರಾಮಯ್ಯಗೆ ಸೋಲುಣಿಸಿದ್ದರು. ಬಾದಾಮಿಯಲ್ಲಿಯೂ ಕಣಕ್ಕಿಳಿದಿದ್ದ ಸಿದ್ದರಾಮಯ್ಯ ಅಲ್ಲಿ ಗೆದ್ದಿದ್ದರು.