ಮೈಸೂರು; ಯಾವ ಬೆದರಿಕೆಗೂ ಬಗ್ಗುವುದಿಲ್ಲ, ಪ್ರಕಾಶ್ ರಾಜ್ ಕಿಡಿ
ಮೈಸೂರು, ಆಗಸ್ಟ್, 08: "ಪ್ರಸ್ತುತ ಕುಗ್ಗುತ್ತಿರುವ ದೇಶದ ಬಗ್ಗೆ ಚಿಂತಿಸುವುದರ ಜೊತೆಗೆ ಪ್ರತಿಯೊಬ್ಬರೂ ಸರ್ಕಾರದ ಬಳಿ ಪ್ರಶ್ನೆ ಕೇಳವುದು ಅಗತ್ಯವಾಗಿದೆ" ಎಂದು ಬಹುಭಾಷ ನಟ ಪ್ರಕಾಶ್ ರಾಜ್ ಹೇಳಿದರು.
ಸೋಮವಾರ ಮೈಸೂರಿನಲ್ಲಿ ಮಾತನಾಡಿದ ಅವರು, "ನಾನು ಈ ದೇಶದ ಪ್ರಜೆ, ಪ್ರಶ್ನಿಸುವುದು ನಮ್ಮ ಹಕ್ಕು. ನಾನು ಸಕ್ರಿಯ ರಾಜಕಾರಣಿ ಅಲ್ಲ. ನಟನೆ, ಕೃಷಿ, ಫೌಂಡೇಶನ್ ಮೂಲಕ ಸಮಾಜ ಸೇವೆ ಹೀಗೆ ಒಂದಲ್ಲ ಒಂದು ಕೆಲಸದಲ್ಲಿ ನಿರತನಾಗಿರುತ್ತೇನೆ. ಹಾಗಾಗಿ ನಾನು ಸಾಮಾಜಿಕ ಜಾಲತಾಣದ ಮೂಲಕ ಈಗಲೂ ಅವ್ಯವಸ್ಥೆಯನ್ನು ಪ್ರಶ್ನಿಸುತ್ತಿದ್ದೇನೆ" ಎಂದರು.
"ಇದಕ್ಕಾಗಿ ಕೆಲವರಿಂದ ಬೆದರಿಕೆಯೂ ಬಂದಿದೆ. ನಾನ ಯಾವುದಕ್ಕೂ ಹೆದರುವುದಿಲ್ಲ. ಬೇನಾಮಿ ಆಸ್ತಿ ಮಾಡಿಲ್ಲ, ತೆರಿಗೆ ವಂಚಿಸಿಲ್ಲ, ಹನಿಟ್ರ್ಯಾಪ್ ಕೂಡ ಇಲ್ಲ. ಹಾಗಾಗಿ ಸತ್ಯ ಹೇಳಲು ನಾನು ಹೆದರುವುದಿಲ್ಲ. ನನಗೆ ಯಾವ ಇಡಿ ದಾಳಿ ಭಯವಿಲ್ಲ" ಎಂದು ಪ್ರಕಾಶ್ ರಾಜ್ ತಿಳಿಸಿದರು.
ದೇಶಪ್ರೇಮದ ಬಗ್ಗೆ ವಿವರಣೆ: "ಪ್ರತಿ ಮನೆ ಮುಂದೆ ರಾಷ್ಟ್ರಧ್ವಜ ಹಾರಿಸಿದರೆ ಅದು ದೇಶಪ್ರೇಮ ಆಗುವುದಿಲ್ಲ. ಈಗ ಬಾವುಟಕ್ಕೂ ಪಾಲಿಸ್ಟರ್ ಬಂದಿದೆ. ಖಾದಿಯನ್ನೇ ನಂಬಿದ್ದ ಕೈಮಗ್ಗ ವ್ಯಾಪಾರಿಗಳ ಬದುಕು ಬೀದಿಗೆ ಬಂದಿದೆ. ಬೀಡಿ ಕಟ್ಟಿ ಬದುಕು ಸಾಗಿಸುತ್ತಿದ್ದ ಕಾರ್ಮಿಕರಿಗೂ ಶೇಕಡಾ 18ರಷ್ಟು ಜಿಎಸ್ಟಿ ವಿಧಿಸಲಾಗಿದೆ. ಯುವಕರಿಗೆ ಕೆಲಸವಿಲ್ಲದೇ ನಿರುದ್ಯೋಗ ಎಲ್ಲೆಡೆ ಮನೆ ಮಾಡಿದೆ" ಎಂದರು.
ಸಿನಿಮಾ ಕುರಿತು ಮಾತನಾಡಿದ ಅವರು, "ಬಾಹುಬಲಿ, ಕೆಜಿಎಫ್, ಆರ್ಆರ್ಆರ್ ಸಿನಿಮಾಗಳಂತೆ ಎಲ್ಲವನ್ನೂ ಪ್ಯಾನ್ ಇಂಡಿಯಾ ಪರಿಕಲ್ಪನೆಯಿಂದ ನೋಡಲಾಗದು. ಆದರೆ ನಮ್ಮ ಕನ್ನಡದ ಸಿನಿಮಾ ಬೇರೆ ಭಾಷೆಗಳಿಗೆ ಡಬ್ ಆಗಿ, ಇಂಗ್ಲಿಷ್ ಸಬ್ ಟೈಟಲ್ನೊಂದಿಗೆ ಭಾರತದ ಸಿನಿಮಾ ಆಗಿ ಪ್ರದರ್ಶನವಾಗಬಹುದು. ನಮ್ಮ ಭಾಷೆಯ ಸೊಗಡನ್ನು ಉಳಿಸಿಕೊಂಡು ಹಲವು ಭಾಷೆಗಳಲ್ಲಿ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ" ಎಂದು ಹೇಳಿದರು.
"ಕನ್ನಡದ ಚಿತ್ರ ಭಾರತದ ಸಿನಿಮಾ ಆಗಬೇಕು. ಕೆಜಿಎಫ್, ಆರ್ಆರ್ಆರ್ನಂತಹ ಪ್ರಾದೇಶಿಕ ಚಿತ್ರಗಳು ಭಾರತದ ಮಟ್ಟದಲ್ಲಿ ಹೆಸರು ಮಾಡಿರುವುದು ಇದಕ್ಕೊಂದು ಉದಾಹರಣೆ" ಎಂದು ಪ್ರಕಾಶ್ ರಾಜ್ ಮೈಸೂರಿನಲ್ಲಿ ತಿಳಿಸಿದರು.
"ಕನ್ನಡ, ತಮಿಳು, ಮಲಯಾಳಂನಲ್ಲಿ ಇತ್ತೀಚೆಗೆ ಅತ್ಯುತ್ತಮ ಚಿತ್ರಗಳು ಬರುತ್ತಿವೆ. ಕೆಲ ವರ್ಷಗಳಿಂದ ಹೊಸ ಪ್ರತಿಭೆಗಳು ಬೆಳೆಯುತ್ತಿದ್ದಾರೆ. ಚಾರ್ಲಿ ಸಿನಿಮಾ ಮೂರು ದಶಕಗಳಿಂದ ನಟನಾಗಿರುವ ನನ್ನನ್ನು ಪ್ರೇಕ್ಷಕನನ್ನಾಗಿ ಮಾಡಿತು. ವೈಜ್ಞಾನಿಕ ಬೆಳವಣಿಗೆ ನಡುವೆ ಓಟಿಟಿ ಸೇರಿದಂತೆ ಸಿನಿಮಾ ವೀಕ್ಷಣೆಯ ಆಯ್ಕೆ ಪ್ರೇಕ್ಷಕರದ್ದಾಗಿದೆ. ಪ್ರಸ್ತುತತೆಗೆ ಹೊಂದಿಕೊಂಡು ಮುನ್ನಡೆಯುವುದು ಅನಿವಾರ್ಯವಾಗಿದೆ" ಎಂದು ವಿವರಿಸಿದರು.
"ನಾನು ವ್ಯಾಪಾರದ ದೃಷ್ಟಿಯಿಂದ ನಿರ್ಮಾಪಕನಾಗಿಲ್ಲ. ಒಂದು ಒಳ್ಳೆಯ ಕತೆ ಬಂದಿದೆ. ಡಿಸೆಂಬರ್ ವೇಳೆಗೆ ಅಂತಿಮವಾಗುತ್ತದೆ. ಸಿನಿಮಾದಲ್ಲಿ ಕೆಟ್ಟದ್ದು ಒಳ್ಳೆಯದು ಎಂಬುದಿಲ್ಲ. ಈಗ ನಾನು ಒಳ್ಳೆಯ ನಟ ಎಂದು ತೋರಿಸಿಕೊಳ್ಳುವ ಸವಾಲು ಎದುರಾಗಿದೆ" ಎಂದರು.
"ನಾನು ಕರ್ನಾಟಕದಿಂದ ಹೋಗಿ ತಮಿಳುನಾಡು, ಮುಂಬೈ ಮುಂತಾದ ಕಡೆ ಸಾಮರ್ಥ್ಯ ಪ್ರದರ್ಶಿಸಬೇಕಾಯಿತು. ಹಿಂದಿ ರಾಷ್ಟ್ರಭಾಷೆ ಅಲ್ಲ ಎನ್ನುವುದು ಸತ್ಯ. ರಾಷ್ಟ್ರಭಾಷೆ ಎನ್ನುವುದು ತಪ್ಪು. ಈ ವಿಚಾರವಾಗಿ ಚರ್ಚೆ ಮುಂದುವರೆಸುವುದು ಅನಗತ್ಯ" ಎಂದು ಹೇಳಿದರು.