ದಾಖಲೆಗಳ ಸಮೇತ ಎಚ್.ವಿಶ್ವನಾಥ್ ಬಂಡವಾಳ ಬಯಲು ಮಾಡುವೆ: ಸಾ.ರಾ.ಮಹೇಶ್
ಬೆಂಗಳೂರು, ಸೆಪ್ಟೆಂಬರ್ 20: ಅನರ್ಹ ಶಾಸಕ ಎಚ್.ವಿಶ್ವನಾಥ್ ಯಾರು-ಯಾರ ಬಳಿ ಹಣ ಪಡೆದಿದ್ದಾರೆಂದು ದಾಖಲೆ ಸಮೇತ ಇದೇ ಭಾನುವಾರ ಬಹಿರಂಗಪಡಿಸುತ್ತೇನೆ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.
ಸಾ.ರಾ.ಮಹೇಶ್ ತಮ್ಮ ಕ್ಷೇತ್ರ ಅಭಿವೃದ್ಧಿ ಮಾಡಿಲ್ಲವೆಂಬ ಆರೋಪಕ್ಕೆ ಇಂದು ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ ಅವರು, 'ವಿಶ್ವನಾಥ್ಗೆ ಬೆಳಿಗ್ಗೆ ಎದ್ದರೆ ಯಾರಿಗೆ ವಿಷ ಹಾಕಬೇಕು ಎಂಬುದಷ್ಟೆ ಜ್ಞಾನ ಹಾಗಾಗಿ ನನ್ನ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಅವರ ಕಣ್ಣಿಗೆ ಬಿದ್ದಿಲ್ಲ' ಎಂದು ಆರೋಪಿಸಿದರು.
ಯಡಿಯೂರಪ್ಪ ಪತ್ನಿ ಅನುಮಾನಾಸ್ಪದ ಸಾವಿನ ಬಗ್ಗೆ ಎಚ್ ಡಿಕೆ ಪ್ರಸ್ತಾಪ
'ಯಾರ ಹತ್ತಿರ ಹಣ ತೆಗೆದುಕೊಂಡು ಜೀವನ ಸೆಟಲ್ ಮಾಡ್ಕೊಬೇಕು, ಯಾವಾಗ ಸರ್ಕಾರ ಬೀಳಿಸಬೇಕು, ಯಾವಾಗ ಯಾರಿಗೆ ಬೆನ್ನಿಗೆ ಚೂರಿ ಹಾಕಿ ಮೋಸ ಮಾಡಬೇಕು' ಎಂಬುದೇ ಎಚ್.ವಿಶ್ವನಾಥ್ ಅವರ ಯೋಚನೆಗಳು ಅದಕ್ಕಾಗಿ ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯ ಅವರ ಕಣ್ಣಿಗೆ ಬಿದ್ದಿಲ್ಲ ಎಂದು ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.
ಭಾನುವಾರ ಸುದ್ದಿಗೋಷ್ಠಿ ಕರೆಯಲಿದ್ದಾರೆ ಸಾ.ರಾ.ಮಹೇಶ್
ಭಾನುವಾರ ಸುದ್ದಿಗೋಷ್ಠಿ ಕರೆದು ದಾಖಲೆ ಸಮೇತ ವಿಶ್ವನಾಥ್ ಆರೋಪಗಳಿಗೆ ಉತ್ತರ ಕೊಡ್ತೀನಿ ಅಷ್ಟೆ ಅಲ್ಲ, ಅವರ ಬಂಡವಾಳವನ್ನೂ ಬಯಲು ಮಾಡುತ್ತೀನಿ ಎಂದು ಸಾ.ರಾ.ಮಹೇಶ್ ಹೇಳಿದ್ದಾರೆ.
ಸದನದಲ್ಲೇ ಹೇಳಿದ್ದರು ಸಾ.ರಾ.ಮಹೇಶ್
ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರು ಹಣ ಕೇಳಿದ್ದರ ಬಗ್ಗೆ ಹಾಗೂ ಬಿಜೆಪಿಯಿಂದ ಹಣದ ಆಫರ್ ಇರುವ ಬಗ್ಗೆ ಹೇಳಿಕೊಂಡಿದ್ದಾಗಿ ಸಾ.ರಾ.ಮಹೇಶ್ ಅವರು ಸದನದಲ್ಲಿಯೇ ಹೇಳಿದ್ದರು. ಈಗ ದಾಖಲೆಗಳನ್ನೂ ಬಿಡುಗಡೆ ಮಾಡುತ್ತೀನಿ ಎಂದು ಹೇಳುತ್ತಿದ್ದಾರೆ.
ವಿಪಕ್ಷ ನಾಯಕ ಆಗುವ ಸಿದ್ದರಾಮಯ್ಯ ಕನಸಿಗೆ ಸ್ವಪಕ್ಷೀಯರಿಂದ ಅಡ್ಡಗಾಲು
ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹರಾಗಿರುವ ವಿಶ್ವನಾಥ್
ಜೆಡಿಎಸ್ ಟಿಕೆಟ್ನಿಂದ ಹುಣಸೂರಿನಿಂದ ಗೆದ್ದು ಶಾಸಕರಾಗಿದ್ದ ಎಚ್.ವಿಶ್ವನಾಥ್ ಅವರನ್ನು ಜೆಡಿಎಸ್ನ ರಾಜ್ಯಾಧ್ಯಕ್ಷರನ್ನಾಗಿಯೂ ಮಾಡಲಾಗಿತ್ತು. ಆದರೆ ಆ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಶ್ವನಾಥ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ಪತನವಾಗುವಂತೆ ಮಾಡಿದರು.
ಯಡಿಯೂರಪ್ಪ ಸರ್ಕಾರ ಪತನದ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಹುಣಸೂರು ಕ್ಷೇತ್ರದ ಟಿಕೆಟ್ ಯಾರಿಗೆ?
ಹುಣಸೂರು ಕ್ಷೇತ್ರದಿಂದ ವಿಶ್ವನಾಥ್ ಪುತ್ರ ಅಥವಾ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರ ಪತ್ರನನ್ನು ಬಿಜೆಪಿ ಟಿಕೆಟ್ನಿಂದ ಕಣಕ್ಕೆ ಇಳಿಸುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ. ಜೆಡಿಎಸ್ ಸಹ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಹೇಗಾದರೂ ಮಾಡಿ ವಿಶ್ವನಾಥ್ಗೆ ರಾಜಕೀಯವಾಗಿ ಬುದ್ಧಿ ಕಲಿಸಬೇಕೆಂಬ ನಿರೀಕ್ಷೆಯಲ್ಲಿದೆ.