ಹುಣಸೂರು ಕ್ಷೇತ್ರದಿಂದ ನಾನೇ ಚುನಾವಣೆ ಸ್ಪರ್ಧಿಸುತ್ತೇನೆ: ಎಚ್.ವಿಶ್ವನಾಥ್
ಹುಣಸೂರು, ಸೆಪ್ಟೆಂಬರ್ 29: ಹುಣಸೂರು ಕ್ಷೇತ್ರ ಉಪಚುನಾವಣೆ ಟಿಕೆಟ್ ವಿಷಯ ಬಹು ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ಅನರ್ಹ ಶಾಸಕ ಎಚ್.ವಿಶ್ವನಾಥ್ ಪೂರ್ಣ ವಿರಾಮವಿಟ್ಟಿದ್ದಾರೆ.
'ಹುಣಸೂರು ಕ್ಷೇತ್ರದ ಉಪಚುನಾವಣೆಗೆ ನಾನೇ ಸ್ಪರ್ಧಿಸುತ್ತೇನೆ' ಎಂದು ಎಚ್.ವಿಶ್ವನಾಥ್ ಹೇಳಿದ್ದು, ವಿಶ್ವನಾಥ್ ಅವರ ಈ ಹೇಳಿಕೆ ಮಗನಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡಲು ಮುಂದಾಗಿದ್ದ ಜಿ.ಟಿ.ದೇವೇಗೌಡ ಅವರಿಗೆ ಭಾರಿ ನಿರಾಸೆ ಆಗಿದೆ.
ಜಿ.ಟಿ.ದೇವೇಗೌಡ ಅವರ ಮಗ ಹುಣಸೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ನಿಂದ ಉಪಚುನಾವಣೆ ಸ್ಪರ್ಧಿಸುತ್ತಾರೆ ಎಂದು ಸುದ್ದಿ ಹರಿದಾಡಿತ್ತು. ಇದಕ್ಕೆ ಪೂರಕವೆಂಬಂತೆ ಜಿ.ಟಿ.ದೇವೇಗೌಡ ಯಡಿಯೂರಪ್ಪ ಅವರನ್ನು ಕೆಲವು ಭಾರಿ ಭೇಟಿ ಆಗಿದ್ದರು. ಯಡಿಯೂರಪ್ಪ ಅವರನ್ನು ಅವಕಾಶ ಸಿಕ್ಕಾಗೆಲ್ಲಾ ಹಾಡಿ ಹೊಗಳುತ್ತಿದ್ದರು.
ಆದರೆ ಅನರ್ಹ ಶಾಸಕ ವಿಶ್ವನಾಥ್ ಅವರು ನಾನೇ ಹುಣಸೂರು ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸುತ್ತೇನೆ ಎನ್ನುವ ಮೂಲಕ ಟಿಕೆಟ್ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ವಿಶ್ವನಾಥ್ ಅವರ ಪುತ್ರ ಪೂರ್ವಜ್ ವಿಶ್ವನಾಥ್ ಉಪಚುನಾವಣೆ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು, ಆದರೆ ಈ ಸುದ್ದಿಯನ್ನೂ ಸ್ವತಃ ಪೂರ್ವಜ್ ತಳ್ಳಿ ಹಾಕಿದ್ದು, ತಾವು ಉಪಚುನಾವಣೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದರು. ಹಾಗಾಗಿ ಈಗ ವಿಶ್ವನಾಥ್ ಅವರು ತಾವೇ ಉಪಚುನಾವಣೆ ಸ್ಪರ್ಧಿಸುವುದಾಗಿ ಹೇಳಿದ್ದರು.