"ಜೆಡಿಎಸ್ ಶಾಸಕನಾಗೇ ಇರುತ್ತೇನೆ" ಎಂದು ಮತ್ತೆ ಸಿಎಂ ಹೊಗಳಿದ ಜಿಟಿಡಿ
ಮೈಸೂರು, ಡಿಸೆಂಬರ್ 12: ಜೆಡಿಎಸ್ ವರಿಷ್ಠರ ಬಗ್ಗೆ ಪದೇ ಪದೇ ಅಸಮಾಧಾನ ಹೊರಹಾಕುವ ಶಾಸಕ ಜಿ.ಟಿ.ದೇವೇಗೌಡ, ಪಕ್ಷ ಬದಲಿಸುತ್ತಾರೆಂಬ ಕುರಿತು ಆಗ್ಗಾಗ್ಗೆ ಕೇಳಿಬರುವ ಗಾಳಿ ಸುದ್ದಿಗಳಿಗೆ ಸ್ವತಃ ಜಿ.ಟಿ.ದೇವೇಗೌಡ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ಶಾಸಕ, ಜೆಡಿಎಸ್ ಶಾಸಕನಾಗಿಯೇ ಇರುತ್ತೇನೆ. ಕಾಂಗ್ರೆಸ್ ಅಥವಾ ಬಿಜೆಪಿಗೆ ಹೋಗುವುದಿಲ್ಲ. ಯಾವ ಪಕ್ಷದ ಕಡೆಯೋ ನಾನು ಮುಖ ಮಾಡುವುದಿಲ್ಲ ಎಂದು ಮತ್ತೆ ಪುನರುಚ್ಚಿಸಿದ್ದಾರೆ.
ಮತ್ತೆ ಯಡಿಯೂರಪ್ಪ ಪರ ಬ್ಯಾಟಿಂಗ್
ಯಡಿಯೂರಪ್ಪನವರಿಗೆ ಸರ್ಕಾರವನ್ನ ಮುನ್ನಡೆಸುವ ಶಕ್ತಿ ಸಾಮರ್ಥ್ಯ ಇದೆ. ಅಷ್ಟೇ ಕಷ್ಟವೂ ಇದೆ. ಆದರೂ ಅವರು ಯಶಸ್ವಿಯಾಗಿ ರಾಜ್ಯ ಅಭಿವೃದ್ಧಿಪಡಿಸಿ ಆಡಳಿತ ನಡೆಸಲಿ ಎಂದು ಹಾರೈಸುತ್ತೇನೆ ಎಂದು ಯಡಿಯೂರಪ್ಪ ಪರ ಬ್ಯಾಟಿಂಗ್ ಬೀಸಿದರು.
"ವಿಶ್ವನಾಥ್ ಪರ ಮಾತನಾಡಲ್ಲ"
ಪರಾಜಿತ ಅಭ್ಯರ್ಥಿ ವಿಶ್ವನಾಥ್ ಅವರನ್ನು ಮಂತ್ರಿ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಈ ವಿಚಾರದಲ್ಲಿ ನಾನು ಯಾರಿಗೂ ಏನು ಹೇಳುವುದಿಲ್ಲ. ನಾನು ಸಿಎಂ ಯಡಿಯೂರಪ್ಪ ಅವರಿಗೂ ಹೇಳುವುದಿಲ್ಲ. ಏನಾದ್ರೂ ನಾನು ವಿಶ್ವನಾಥ್ ಮಂತ್ರಿ ಮಾಡಿ ಅಂತ ಹೇಳಿದ್ರೆ, ನನ್ನ ವಿರುದ್ಧವೇ ತಿರುಗಿಬೀಳುವ ಸಾಧ್ಯತೆ ಇದೆ. ಮಂತ್ರಿ ಮಾಡಿ ಅಂತ ಹೇಳೊಕ್ಕೆ ಇವನ್ಯಾರು ಅಂತನೂ ಕೇಳಬಹುದು. ಹೀಗಾಗಿ ನಾನು ಯಾರ ಪರವೂ ಮಾತನಾಡುವುದಿಲ್ಲ" ಎಂದರು.
ಹುಣಸೂರಿನಲ್ಲಿ ವಿಶ್ವನಾಥ್ ಸೋಲಿಗೆ ಜಿಟಿಡಿ ಬೊಟ್ಟು ಮಾಡಿದ್ದು ಇವರತ್ತ
ಸಿದ್ದರಾಮಯ್ಯ ಗುಣಮುಖಲಾಗಲೆಂದು ಹಾರೈಸಿದ ಜಿಟಿಡಿ
ಮಾಜಿ ಸಿಎಂ ಸಿದ್ದರಾಮಯ್ಯ ಅನಾರೋಗ್ಯ ಹಿನ್ನೆಲೆಯಲ್ಲಿ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರು ಆದಷ್ಟು ಬೇಗ ಗುಣಮುಖರಾಗಲೆಂದು ತಾಯಿ ಚಾಮುಂಡೇಶ್ವರಿಯಲ್ಲಿ ಬೇಡಿಕೊಳ್ಳುತ್ತೇನೆ. ನಾನು, ಸಿದ್ದರಾಮಯ್ಯ ಹಲವು ದಶಕಗಳಿಂದ ಸ್ನೇಹಿತರು. ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿದುಬಂದಿದೆ. ಅವರು ವಿಶ್ರಾಂತಿ ಪಡೆಯದೇ ಸದಾಕಾಲವೂ ಓಡಾಡುವ ವ್ಯಕ್ತಿ. ಆದಷ್ಟು ಬೇಗ ಅವರು ಗುಣಮುಖರಾಗಲಿ" ಎಂದು ಹೇಳಿದರು.
ನಿಜವಾಯಿತು ಜಿಟಿಡಿ ಹೇಳಿದ್ದ ಭವಿಷ್ಯ
ಹುಣಸೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ವಿರುದ್ಧ ಗೆಲುವು ಸಾಧಿಸಿ ಕಾಂಗ್ರೆಸ್ ನೂತನ ಶಾಸಕರಾಗಿ ಆಯ್ಕೆಯಾಗಿರುವ ಎಚ್.ಪಿ ಮಂಜುನಾಥ್ ನಿನ್ನೆ ಜಿ.ಟಿ. ದೇವೇಗೌಡ ಅವರ ಮನೆಗೆ ತೆರಳಿ ದಂಪತಿಯನ್ನು ಸನ್ಮಾನಿಸಿ ಆಶೀರ್ವಾದ ಪಡೆದರು.
ಉಪಚುನಾವಣೆಗೆ ಮುನ್ನ ಹುಣಸೂರಿನಲ್ಲಿ ಎಚ್.ಪಿ ಮಂಜುನಾಥ್ ಗೆಲ್ಲುತ್ತಾರೆ ಎಂದು ಜಿ.ಟಿ ದೇವೇಗೌಡರು ಭವಿಷ್ಯ ನುಡಿದಿದ್ದರು. ಈ ನಡುವೆ ಉಪಚುನಾವಣೆ ವೇಳೆ ಜಿಟಿಡಿ ಪುತ್ರ ಹರೀಶ್ ಗೌಡ ಮಂಜುನಾಥ್ ಬೆಂಬಲಕ್ಕೆ ನಿಂತಿದ್ದರು. ಹೀಗಾಗಿ ಜಿ.ಟಿ. ದೇವೇಗೌಡರನ್ನು ಭೇಟಿಯಾಗಿ ಅವರಿಗೆ ಹಾರ ಹಾಕಿ ಸನ್ಮಾನಿಸಿದರು.