ನಾನು ದೇವೇಗೌಡರಲ್ಲಿ ಕ್ಷಮೆ ಕೇಳುತ್ತೇನೆ ಎಂದ ಅನರ್ಹ ಶಾಸಕ ಎಚ್. ವಿಶ್ವನಾಥ್
Recommended Video
ಮೈಸೂರು, ಆಗಸ್ಟ್ 4 : "ಮೈತ್ರಿ ಸರಕಾರದ ಪತನಕ್ಕೆ ನಾವು ಕಾರಣರಲ್ಲ. ಸನ್ನಿವೇಶದ ಒತ್ತಡದಿಂದಾಗಿ ರಾಜೀನಾಮೆ ನೀಡಿದ್ದೇನೆ" ಎಂದು ಅನರ್ಹ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ರಾಜೀನಾಮೆ ವಿಚಾರವಾಗಿ ನಾನು ದೇವೇಗೌಡರ ಬಳಿ ಕ್ಷಮೆ ಕೇಳುತ್ತೇನೆ. ದೋಸ್ತಿ ಸರಕಾರ ಪತನಕ್ಕೆ ಆ ಸರಕಾರವನ್ನು ನಡೆಸಿದವರೇ ಕಾರಣ ಎಂದು ಹೇಳಿದರು.
"ದೋಸ್ತಿ ಸರಕಾರದ ಪತನಕ್ಕೆ ನಾವು 20 ಶಾಸಕರಾಗಲೀ, ಬಿಜೆಪಿ ಆಗಲೀ ಕಾರಣವಲ್ಲ. ಸರಕಾರ ನಡೆಸುವವರು ನಾಯಕರ ಥರ ಇರಲಿಲ್ಲ, ಮಾಲೀಕರ ರೀತಿ ಇದ್ದರು. ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರ ಕ್ಷಮೆ ಕೇಳುತ್ತೇನೆ. ಸನ್ನಿವೇಶದ ಒತ್ತಡ, ನನಗೆ ಆದ ಅವಮಾನ, ನನ್ನನ್ನು ನಿರ್ಲಕ್ಷಿಸಿದ ರೀತಿಯಿಂದ ರಾಜೀನಾಮೆ ಕೊಟ್ಟಿದ್ದೇನೆ" ಎಂದರು.
ಚುನಾವಣಾ ರಾಜಕೀಯ ಸಾಕಾಗಿದೆ, ಮತ್ತೆ ಬರಲ್ಲ ಎಂದ ವಿಶ್ವನಾಥ್
"ನಾವು ಯಾರೂ ಅತೃಪ್ತರಲ್ಲ. ನಾವು ತೃಪ್ತರು. ದೋಸ್ತಿ ಸರಕಾರ ನಡೆಸಿದವರು ಅತೃಪ್ತರಾಗಿದ್ದಾರೆ. ದೋಸ್ತಿಗಳ ನಡುವಿನ ಅತೃಪ್ತಿ, ಅಸಮಾಧಾನ, ಅನುಮಾನ ಇದರಿಂದ ಸರಕಾರ ಬೀಳಿಸಿಕೊಂಡಿರಿ. ಇದು ಆಪರೇಷನ್ ಕಮಲ ಅಲ್ಲ. ಸಾರಾ ಮಹೇಶ್ ಎಂಬ ಅಪ್ರಬುದ್ಧ ಬಾಯಿಗೆ ಬಂದಂತೆ ಹೇಳುತ್ತಾನೆ. 20 ಜನ ಶಾಸಕರು ದುಡ್ಡಿಗಾಗಿ ಮಾರಿಕೊಂಡಿಲ್ಲ. ಪದವಿಗಾಗಿ ಪದವಿ ತ್ಯಾಗ ಮಾಡಿಲ್ಲ. ರಾಜೀನಾಮೆ ಕೊಟ್ಟ ಶಾಸಕರು ದುಡ್ಡಿನ ಕುಳಗಳು" ಎಂದರು.
ಅನಿವಾರ್ಯವಾಗಿ ರಾಜೀನಾಮೆ ನೀಡುವ ಸನ್ನಿವೇಶ ಸೃಷ್ಟಿ
ಇನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕುರಿತು ವಾಗ್ದಾಳಿ ನಡೆಸಿದ ಅವರು, "ನಾನು ಸತ್ಯವಂತ, ಸಂತ, ಮಹಾತ್ಮ ಗಾಂಧಿ ಎಂದೆಲ್ಲ ರಮೇಶ್ ಕುಮಾರ್ ಹೇಳುತ್ತಿದ್ದರು. ಆದರೆ ಅವರು ಮಾಡಿದ್ದೇನು? ಸದನದಲ್ಲಿ ಇಲ್ಲದ ವ್ಯಕ್ತಿ ವಿರುದ್ಧ ಸದನದಲ್ಲಿ ಮಾತನಾಡಲು ಬಿಟ್ಟರು. ನಾನು ಹುಣಸೂರು ವಿಧಾನಸಭಾ ಕ್ಷೇತ್ರದ ಮತದಾರರ ಬಳಿ ಕ್ಷಮೆ ಕೇಳುತ್ತಿದ್ದೇನೆ. ಅನಿವಾರ್ಯವಾಗಿ ರಾಜೀನಾಮೆ ನೀಡುವ ಸನ್ನಿವೇಶ ಸೃಷ್ಟಿಯಾಯಿತು. ಇದಕ್ಕಾಗಿ ಸಾರ್ವಜನಿಕರಲ್ಲಿ, ಹುಣಸೂರು ಮತದಾರರಲ್ಲಿ ಕ್ಷಮೆ ಯಾಚಿಸುತ್ತೇನೆ. 20 ಜನ ಶಾಸಕರು ಹಾಗೂ ಮಂತ್ರಿಗಳನ್ನು ಒಳಗೊಂಡಂತೆ ರಾಜೀನಾಮೆ ನೀಡಿದ್ದು ಇದೀಗ ಇತಿಹಾಸ" ಎಂದರು.
ಕುಮಾರಸ್ವಾಮಿ ಬಗ್ಗೆ ಕಾಂಗ್ರೆಸ್ ನವರು ಏಕವಚನ
"ಕಾಂಗ್ರೆಸ್ ನವರು ಎಚ್ಡಿಕೆ ಬಗ್ಗೆ, ಇವನು ಯಾಕೋ ಮುಖ್ಯಮಂತ್ರಿ ಥರ ಕಾಣ್ತಾನೆ ಇಲ್ಲ. ನಾವು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಅಂತ ಒಪ್ಪಲ್ಲ ಎಂದು ಏಕವಚನದಲ್ಲೇ ಪದೇ - ಪದೇ ಹೇಳುತ್ತಿದ್ದರು. ಅಲ್ಲದೇ ನಮಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದರು. ಮಂಡ್ಯದ ಕೆ.ಆರ್. ಪೇಟೆಯಲ್ಲಿ ನಡೆದ ಸಭೆಯೊಂದರಲ್ಲಿ ಕುಮಾರಸ್ವಾಮಿ ಮಾತನಾಡುವ ವೇಳೆ ಜನ ನನಗೆ ವಿಷ ಕುಡಿಸಿದ್ದರು ಎಂದಿದ್ದರು. ಆದರೆ ದೇವೇಗೌಡರ ಕುಟುಂಬಕ್ಕೆ ವಿಷ ಕುಡಿಸಿದ್ದೇ ಈ ಸಾ.ರಾ. ಮಹೇಶ್. ದೇವೇಗೌಡರ ಕುಟುಂಬ ಹಾಳಾಗಲು ಕಾರಣ ಸಾ.ರಾ. ಮಹೇಶ್" ಎಂದು ವಾಗ್ದಾಳಿ ನಡೆಸಿದರು.
ಅನರ್ಹಗೊಂಡ ಶಾಸಕರು ಹತ್ತಕ್ಕೂ ಹೆಚ್ಚು
ರಮೇಶ್ ಜಾರಕಿಹೊಳಿ, ಮಹೇಶ್ ಕುಮಟವಳ್ಳಿ, ಪ್ರತಾಪ್ ಗೌಡ, ಬೈರತಿ ಬಸವರಾಜ್, ಶ್ರೀಮಂತಗೌಡ ಪಾಟೀಲ್, ಎಸ್.ಟಿ. ಸೋಮಶೇಖರ್, ಎಂಟಿಬಿ ನಾಗರಾಜ್, ಬಿ.ಸಿ. ಪಾಟೀಲ್, ಅರಬೈಲ್ ಶಿವರಾಂ ಹೆಬ್ಬಾರ್, ಡಾ.ಕೆ.ಸುಧಾಕರ್, ಮುನಿರತ್ನ, ನಾರಾಯಣ ಗೌಡ, ಕೆ. ಗೋಪಾಲಯ್ಯ, ವಿಶ್ವನಾಥ್ ಸೇರಿದಂತೆ ಹತ್ತಕ್ಕೂ ಹೆಚ್ಚು ಕಾಂಗ್ರೆಸ್ ಹಾಗೂ ಜೆಡಿಎಸ್ ನ ಶಾಸಕರನ್ನು ಅನರ್ಹಗೊಳಿಸಲಾಗಿದೆ. ಆದರೆ ಅತೃಪ್ತ ಶಾಸಕರು ರಾಜೀನಾಮೆ ಸಲ್ಲಿಸಿದ್ದರೂ ಅದನ್ನು ಒಪ್ಪಿಕೊಳ್ಳದೆ, ಆಯಾ ಪಕ್ಷದವರು ಸಲ್ಲಿಸಿದ ದೂರಿನ ಅನ್ವಯ ಅನರ್ಹಗೊಳಿಸಲಾಗಿದೆ.
ಮೈಸೂರಿನ ಪತ್ರಕರ್ತರ ಭವನಕ್ಕೆ ಪೊಲೀಸ್ ಬಂದೋಬಸ್ತ್
ವಿಶ್ವನಾಥ್ ಅವರು ಮುಂಬೈನಲ್ಲಿ ಇದ್ದ ಸಂದರ್ಭದಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಣುಕು ಶ್ರದ್ಧಾಂಜಲಿ ಅರ್ಪಿಸಲಾಗಿತ್ತು. ಮುಂಬೈನಿಂದ ವಾಪಸ್ ಆದ ನಂತರ ಇದೇ ಮೊದಲ ಬಾರಿಗೆ ವಿಶ್ವನಾಥ್ ಅವರು ಮೈಸೂರು ಜಿಲ್ಲೆ ವ್ಯಾಪ್ತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಇನ್ನು ಸುದ್ದಿಗೋಷ್ಠಿಗೂ ಮುನ್ನ ಮೈಸೂರು ಪತ್ರಕರ್ತರ ಭವನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಸುದ್ದಿಗೋಷ್ಠಿ ವೇಳೆ ಗಲಾಟೆಯಾಗುವ ಸಂಭವದಿಂದಾಗಿ ಎರಡು ತುಕಡಿ ಸಿಆರ್, ಕೆಎಸ್ ಆರ್ ಪಿ ಹಾಗೂ 30ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.