ತಟಸ್ಥವಾಗಿದ್ದೇನೆ ಎಂದು ತಣ್ಣಗಾದ ಜಿಟಿಡಿ; ಆದರೂ ಹೊಗೆಯಾಡುತ್ತಿದೆ ಅಸಮಾಧಾನ
ಮೈಸೂರು, ನವೆಂಬರ್ 25: "ಹುಣಸೂರು ಉಪ ಚುನಾವಣೆ ಹಿನ್ನೆಲೆಯಲ್ಲಿ ಮೂರು ಪಕ್ಷದವರು ನನ್ನ ಬೆಂಬಲ ಕೇಳಿದ್ದಾರೆ. ಆದರೆ ನಾನು ಸದ್ಯಕ್ಕೆ ತಟಸ್ಥವಾಗಿದ್ದೇನೆ" ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.
"ಹುಣಸೂರು ಉಪ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕರೆ ಮಾಡಿ ಬೆಂಬಲ ಕೇಳಿದ್ದಾರೆ. ಮೂರು ಪಕ್ಷದವರೂ ಬೆಂಬಲಿಸಿ ಎಂದಿದ್ದಾರೆ. ಆದರೆ ಎಲ್ಲರಿಗೂ ಒಳ್ಳೆಯದಾಗಲಿ ಅಂತ ಹೇಳಿದ್ದೇನೆ ಅಷ್ಟೆ. ನಾನು ಸದ್ಯಕ್ಕೆ ತಟಸ್ಥವಾಗಿದ್ದೇನೆ" ಎಂದು ತಿಳಿಸಿದರು.
ಎಂದೂ ನಾಯಕತ್ವ ಕೊಡಲಿಲ್ಲ ಎಂಬ ಅಸಮಾಧಾನ
ಜೆಡಿಎಸ್ ಪಕ್ಷ ನನಗೆ ಎಂದೂ ನಾಯಕತ್ವ ಕೊಟ್ಟಿಲ್ಲ. ನಾನೇ ನಾಯಕತ್ವ ತೆಗೆದುಕೊಂಡು ಪಕ್ಷವನ್ನು ಬೆಳೆಸಲು ಮುಂದಾದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಇದೇ ರೀತಿ ಮಲಗಿದ್ದರೆ ಆಗಲ್ಲ ಎಂಬ ಉದ್ದೇಶದಿಂದ ಚಾಮುಂಡೇಶ್ವರಿ ಕ್ಷೇತ್ರದಿಂದ ಪಕ್ಷ ಬಲಪಡಿಸಲು ಪ್ರಾರಂಭಿಸಿದೆ. ಎಲ್ಲರನ್ನೂ ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕರೆ ತಂದೆ. ಕುಮಾರಸ್ವಾಮಿ ಸಿಎಂ ಆಗಬೇಕು ಎಂಬ ಚಟ ಏರಿದ್ದು ನನಗೆ ಹೊರತು, ಕುಮಾರಸ್ವಾಮಿ ಅವರಿಗಲ್ಲ. ಆದರೆ ನನ್ನನ್ನೇ ನಾಯಕನನ್ನಾಗಿ ನೋಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಚ್ಚರಿ ಬೆಳವಣಿಗೆ; ದೇವೇಗೌಡ ಭೇಟಿಯಾದ ಶ್ರೀರಾಮುಲು!
ಬೈದಾಡಿಕೊಂಡವರು ತಬ್ಬಿಕೊಳ್ತಾರೆ
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ನವರು ಯಾವ ರೀತಿ ಕಚ್ಚಾಡಿದ್ರು, ಆದರೆ ಫಲಿತಾಂಶ ಬಂದ ನಂತರ ಲವರ್ ತರಹ ತಬ್ಬಿಕೊಂಡ್ರು. ಈಗ ಯಡಿಯೂರಪ್ಪ ಅವರ ಸರ್ಕಾರದ ಬೀಳಿಸಲ್ಲ ಅಂತ ಕುಮಾರಸ್ವಾಮಿ ಹೇಳ್ತಾರೆ. ಅದಕ್ಕೆ ಯಡಿಯೂರಪ್ಪ ಧನ್ಯವಾದ ಅಂತಾರೆ. ಈ ರೀತಿ ಪರಿಸ್ಥಿತಿ ಇರುವಾಗ ಹೋರಾಟ ಮಾಡಿದವರ ಕತೆ ಏನು?. ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯದಲ್ಲಿ ತತ್ವ, ಸಿದ್ಧಾಂತ ಇಲ್ಲ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ರಾಜಕೀಯ ಬೆಳವಣಿಗೆ ಬಗ್ಗೆ ಜಿಟಿಡಿ ವಿಷಾದ ವ್ಯಕ್ತಪಡಿಸಿದರು.
ಪ್ರಾಮಾಣಿಕತೆ ಎಲ್ಲಿದೆ?
ನಾನು ಸಾಕಷ್ಟು ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ. ಜಿ.ಟಿ.ದೇವೆಗೌಡರ ಆಸ್ತಿ ಎಷ್ಟು, ಹತ್ತು ವರ್ಷದಿಂದ ರಾಜಕೀಯಕ್ಕೆ ಬಂದವರ ಆಸ್ತಿ ಎಷ್ಟಿದೆ ಎಂಬುದನ್ನು ಯಾರೂ ನೋಡುವುದಿಲ್ಲ. ಹಾಗೇ ರಾಜಕೀಯದಲ್ಲಿ ಪ್ರಾಮಾಣಿಕತೆ ಎಲ್ಲಿದೆ ಅಂತ ದುಡ್ಡು ಮಾಡುವವರು ಕೇಳುತ್ತಾರೆ. ಈಗಿನ ರಾಜಕೀಯ ಯಾರಿಗೂ ಬೇಡ ಎಂದು ಜಿ.ಟಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು.
ನೋ ಎಲೆಕ್ಷನ್ ಟೆನ್ಷನ್; ಜಿಟಿಡಿ ಭರ್ಜರಿ ಡಾನ್ಸ್ ವೈರಲ್
ಶ್ರೀರಾಮುಲು ಹೊಗಳಿದ ಜಿಟಿಡಿ
ಇಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರ 70ನೇ ವರ್ಷದ ಹುಟ್ಟಹಬ್ಬದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು, ಮೈಸೂರಿನ ಜಿಟಿಡಿ ನಿವಾಸಕ್ಕೆ ಭೇಟಿ ನೀಡಿ ಶುಭಕೋರಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಜಿಟಿಡಿ, "ಶ್ರೀರಾಮುಲು ಉತ್ತಮ ವ್ಯಕ್ತಿತ್ವದ ರಾಜಕಾರಣಿ. ಅವರು ಇಂದು ನನಗೆ ಶುಭ ಕೋರಲು ಬಂದಿದ್ದಾರೆ. ಶ್ರೀರಾಮುಲು ಅವರಿಗೆ ಹಿಂದೆಯೇ ಡಿಸಿಎಂ ಹುದ್ದೆ ನಿರ್ಧಾರ ಆಗಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅದು ಈಡೇರಿಲ್ಲ. ಕೆಲವೊಮ್ಮೆ ಕೆಲ ಸನ್ನಿವೇಶಗಳಲ್ಲಿ ವ್ಯತ್ಯಾಸ ಆಗುತ್ತೆ. ಆದರೂ ಶ್ರೀರಾಮುಲು ಬೇಸರ, ಸಿಟ್ಟು ಮಾಡಿಕೊಳ್ಳದೆ ಪಕ್ಷ ನಿಷ್ಠೆಯಿಂದ, ಪಕ್ಷದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಮುಂದೆ ಶ್ರೀರಾಮುಲು ಅವರಿಗೆ ಒಳ್ಳೆಯದಾಗೇ ಆಗುತ್ತೆ" ಎಂದು ಹೇಳಿದರು. ಉಪ ಚುನಾವಣೆಗೆ ಕೆಲವೇ ದಿನಗಳ ಬಾಕಿ ಇರುವಾಗ ನಡೆದ ಈ ಬೆಳವಣಿಗೆಯಿಂದ ಜೆಡಿಎಸ್ ಪಕ್ಷಕ್ಕೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ ಎಂದು ಲೆಕ್ಕಾಚಾರ ಹಾಕಲಾಗಿದೆ.