ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ: ಚಾಮುಂಡೇಶ್ವರಿಯಲ್ಲಿ ಅವರನ್ನು ಸೋಲಿಸಿದ ಕಾಂಗ್ರೆಸ್ ಮುಖಂಡರು ಯಾರು?
ತನಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನಿಂದ ಇನ್ನೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹೊರಬಂದಂತಿಲ್ಲ. ಮತ್ತೆಮತ್ತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಮುಂದೆ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.
ಕ್ಷೇತ್ರದಲ್ಲಾದ ಮುಖಭಂಗದ ನಂತರ ಮೊದಲ ಬಾರಿಗೆ ಅಲ್ಲಿಗೆ ಭೇಟಿ ನೀಡಿದ ಸಿದ್ದರಾಮಯ್ಯ, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದಾಗ ಭಾವೋದ್ವೇಗಕ್ಕೆ ಒಳಗಾದರು. ಆ ಸೋಲು ನನ್ನನ್ನು ಇನ್ನೂ ಕಾಡುತ್ತಿದೆ ಎಂದು ಹೇಳಿದರು.
ಮುಂದಿನ ಚುನಾವಣೆಗೆ ಸ್ಪರ್ಧೆ; ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ!
ಸಭೆಯಲ್ಲಿ ಸಿದ್ದರಾಮಯ್ಯನವರು ಆಡಿದ ಮಾತು, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಮುಂದಿನ ಚುನಾವಣೆಯಲ್ಲೂ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೋ, ಸ್ಪರ್ಧಿಸಿದರೆ ಬಾದಾಮಿಯಿಂದಲೋ, ಚಾಮುಂಡೇಶ್ವರಿಯಿಂದಲೋ ಅಥವಾ ಬೇರೆ ಕ್ಷೇತ್ರದಲ್ಲೋ ಎನ್ನುವ ಹೊಸ ವಿಷಯ ಮುನ್ನಲೆಗೆ ಬಂದಿದೆ.
ಕಳೆದ ಚುನಾವಣೆಯ ವೇಳೆ ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದ ಸಿದ್ದರಾಮಯ್ಯನವರು, ಮತ್ತೊಂದು ಅವಧಿಗೂ ಸ್ಪರ್ಧಿಸುವುದು ಬಹುತೇಕ ಖಚಿತ. ಒಂದು ವೇಳೆ ಸ್ಪರ್ಧಿಸಿದರೆ, ಯಾವ ಕ್ಷೇತ್ರದಲ್ಲಿ ಅವರು ಕಣಕ್ಕಿಳಿಯಬಹುದು ಎನ್ನುವ ವಿಚಾರದಲ್ಲಿ ಸಿದ್ದರಾಮಯ್ಯನವರು ನೀಡುತ್ತಿರುವ ಹೇಳಿಕೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತಿದೆ. ಅದಕ್ಕಿಂತ ಹೆಚ್ಚಾಗಿ, ನನ್ನ ಸೋಲಿಗೆ ಕಾಂಗ್ರೆಸ್ಸಿಗರೇ ಕಾರಣ ಎನ್ನುವ ಹೇಳಿಕೆ ಸಂಚಲನ ಮೂಡಿಸಿದೆ.
"ಶಕ್ತಿ ತುಂಬಿದ ಸಮುದಾಯಗಳನ್ನೇ ಮರೆತ ಸಿದ್ದರಾಮಯ್ಯ''
ನನ್ನ ಸೋಲಿಗೆ ನಮ್ಮವರೇ ಕಾರಣ, ನಮ್ಮವರೇ ಚೂರಿ ಹಾಕಿದರು
ಮೈಸೂರಿನಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, "ನನ್ನ ಸೋಲಿಗೆ ನಮ್ಮವರೇ ಕಾರಣ, ನಮ್ಮವರೇ ಚೂರಿ ಹಾಕಿದರು"ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಹೊಸ ಸಂಚಲನ ಮೂಡಿಸಿದೆ. ತಮ್ಮ ಭಾಷಣದ ವೇಳೆ ಆ ಸೋಲು ನನ್ನನ್ನೂ ಈಗಲೂ ಕಾಡುತ್ತಿದೆ ಎಂದು ಸಿದ್ದರಾಮಯ್ಯ ಒತ್ತಿಒತ್ತಿ ಹೇಳಿದರು.
ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಿದ್ದೆ
ಒಂದು ದಿನದ ಹಿಂದೆ ಬಾದಾಮಿಯ ವ್ಯಾಪ್ತಿಯ ಸಭೆಯೊಂದರಲ್ಲಿ ಮಾತನಾಡುತ್ತಿದ್ದ "ನಮ್ಮ ಸರಕಾರ ಅಧಿಕಾರಕ್ಕೆ ಬಂದಿದ್ದರೆ, ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಿದ್ದೆ. ನಾನು ಈ ಕ್ಷೇತ್ರದ ಶಾಸಕ, ನನ್ನ ಮೇಲೆ ನಿಮ್ಮ ಆಶೀರ್ವಾದ ಮತ್ತೆ ಇರಬೇಕು"ಎನ್ನುವ ಹೇಳಿಕೆಯನ್ನು ಸಿದ್ದರಾಮಯ್ಯನವರು ನೀಡಿದ್ದರು. ಹಾಗಾಗಿ, ಸಿದ್ದರಾಮಯ್ಯನವರು ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಬಹುತೇಕ ಖಾತ್ರಿ ಎಂದಾಗಿದೆ. ಆದರೆ..
ಈ ಕ್ಷೇತ್ರದ ಖುಣ ಸಂದಾಯ ಮಾಡಲು ಮತ್ತೆ ನಾನು ಸ್ಪರ್ಧಿಸಿದ್ದೆ
ಶುಕ್ರವಾರ ಮೈಸೂರಿನಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, "ಈ ಕ್ಷೇತ್ರದ ಖುಣ ಸಂದಾಯ ಮಾಡಲು ಮತ್ತೆ ನಾನು ಸ್ಪರ್ಧಿಸಿದ್ದೆ. ಆದರೆ, ನನ್ನನು ಹೀನಾಯವಾಗಿ ಸೋಲಿಸಿಬಿಟ್ಟರು. ನಾನೇನು ತಪ್ಪು ಮಾಡಿದ್ದೆ" ಎಂದು ಭಾವೋದ್ವೇಗಕ್ಕೆ ಒಳಗಾದರು. "ಆಗ, ನಿಮ್ಮವರೇ ನಿಮ್ಮನ್ನು ಸೋಲಿಸಿದ್ದು, ನೀವು ಮತ್ತೆ ಇಲ್ಲಿಂದಲೇ ಕಣಕ್ಕಿಳಿಯಬೇಕೆಂದು" ಎಂದು ಕಾರ್ಯಕರ್ತರೊಬ್ಬರು ಒತ್ತಾಯಿಸಿದರು. ಆಗ, "ಮತ್ತೆ ಚೂರಿ ಹಾಕಿದರೆ ಏನಪ್ಪಾ ಮಾಡೋದು"ಎಂದು ಮರು ಪ್ರಶ್ನಿಸಿದರು.
ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರ ಹೇಳಿಕೆ
ಚಾಮುಂಡೇಶ್ವರಿಯಲ್ಲಿ ಇಂದು ಸಿದ್ದರಾಮಯ್ಯನವರ ಹೇಳಿಕೆ, ಒಂದು ಕಾಂಗ್ರೆಸ್ ವಲಯದಲ್ಲೇ ನನ್ನ ವಿರೋಧಿಗಳಿದ್ದಾರೆ ಎನ್ನುವುದು. ಇನ್ನೊಂದು, ಬಾದಾಮಿಯಿಂದಲೋ, ಚಾಮುಂಡೇಶ್ವರಿಯಿಂದಲೋ ಅಥವಾ ಈ ಎರಡೂ ಬಿಟ್ಟು, ಸೇಫ್ ಕ್ಷೇತ್ರದ ಕಡೆ ಗಮನಹರಿಸುತ್ತಾರೋ ಎನ್ನುವುದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಕಾಂಗ್ರೆಸ್ಸಿಗರೇ ನನ್ನನ್ನು ಸೋಲಿಸಿದರು ಎನ್ನುವ ಹೇಳಿಕೆ, ಮುಂದಿನ ದಿನಗಳಲ್ಲಿ ಹೆಚ್ಚಿನ ತಿರುವನ್ನು ಪಡೆಯುವ ಸಾಧ್ಯತೆಯಿದೆ.