ನಾನು ಮಂತ್ರಿ ಆಗಿಲ್ಲ, ಆದರೂ ಮಂತ್ರಿಗಿಂತ ಚೆನ್ನಾಗಿದ್ದೇನೆ: ಮುರುಗೇಶ್ ನಿರಾಣಿ
ಮೈಸೂರು, ಜುಲೈ 29: ರಾಜಕಾರಣದಲ್ಲಿ ನಾನು ಬಹಳ ಚಿಕ್ಕವ, ರಾಜಕಾರಣದಲ್ಲಿ ಏನಾಗುತ್ತಿದೆ ಎಂಬುದು ನನಗೆ ಗೊತ್ತಿಲ್ಲ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಲಕ್ಷ್ಮಣ ಸವದಿ ಅವರು ದೆಹಲಿಗೆ ಹೋಗಿರುವುದು ನನಗೆ ಗೊತ್ತಿಲ್ಲ. ನಾನು ಬೆಳಗಿನಿಂದ ರಾತ್ರಿವರೆಗೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದೆ. ರಾಜ್ಯ ರಾಜಕಾರಣದಲ್ಲಿ ಏನಾಗ್ತಿದೆ ಎಂಬುದು ನನಗೆ ಗೊತ್ತಿಲ್ಲ. ಈ ಬಗ್ಗೆ ಬೆಂಗಳೂರಿಗೆ ಹೋಗಿ ಮಾಹಿತಿ ಪಡೆಯುತ್ತೇನೆ. ಆದರೆ ಮೂರು ವರ್ಷವೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂದರು.
ಸರ್ಕಾರ ನನ್ನನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ: ಎಚ್.ವಿಶ್ವನಾಥ್
ನನ್ನ ಕಾರ್ಖಾನೆ ಬಗ್ಗೆ ಕೇಳಿದರೆ ಮಾತ್ರ ನಾನು ಹೇಳುತ್ತೇನೆ, ರಾಜಕಾರಣದ ಬಗ್ಗೆ ಅಷ್ಟೊಂದು ಗೊತ್ತಿಲ್ಲ. ನಾನು ಮಂತ್ರಿ ಆಗಿಲ್ಲ ಅಂದರೂ ಮಂತ್ರಿಗಿಂತ ಚೆನ್ನಾಗಿದ್ದೇನೆ. 5 ಸಾವಿರ ಕೋಟಿ ರೂ. ವಹಿವಾಟು ಇದೆ. ಮುಂದಿನ ಬಾರಿಯ ಚುನಾವಣೆಗೆ ಟಿಕೆಟ್ ಕೊಡದಿದ್ದರೂ, ನಾನು ಬಿಜೆಪಿಯಲ್ಲೇ ಇರುತ್ತೇನೆ ಎಂದು ಹೇಳಿದರು.
ಮೈಶುಗರ್ ಕಾರ್ಖಾನೆ ಮೇಲೆ ನಿರಾಣಿ ಕಣ್ಣಿದೆ ಎಂಬ ಚರ್ಚೆಗೆ ಪ್ರತಿಕ್ರಿಯಿಸಿರುವ ಅವರು, ನಾನೊಬ್ಬ ಕೈಗಾರಿಕೋದ್ಯಮಿ, ಟೆಂಡರ್ ಬಿಡ್ ವೇಳೆ ನನ್ನ ಬಳಿ ಅಷ್ಟು ಹಣ ಇದ್ದರೆ ಬಿಡ್ ನಲ್ಲಿ ಭಾಗಿಯಾಗುತ್ತೇನೆ. ಗ್ಲೋಬಲ್ನಲ್ಲಿ ಬಿಡ್ ಗೆ ಕೆಲವೊಂದು ನಿಯಮ ಇರಲಿದೆ. ಇದರಲ್ಲಿ ಯಾರೂ ಬೇಕಾದರು ಭಾಗಿಯಾಗಬಹುದು. ಇದರಲ್ಲಿ ಯಾರ ಹಸ್ತಕ್ಷೇಪವು ನಡೆಯಲ್ಲ ಎಂದು ತಿಳಿಸಿದರು.
ಇಂದು ಅರಮನೆಗೆ ಭೇಟಿ ನೀಡಿದ ಅವರು, ಆಗಸ್ಟ್ 11ರಂದು ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಪುನರ್ ಆರಂಭದ ಜೊತೆಗೆ ಟಿಸಿಡಿ ಸಾಮರ್ಥ್ಯ ವಿಸ್ತರಣೆಗಾಗಿ ಭೂಮಿ ಪೂಜೆ ಸಮಾರಂಭದಲ್ಲಿ ಭಾಗಿಯಾಗುವಂತೆ ಮೈಸೂರು ರಾಜ ವಂಶಸ್ಥರಿಗೆ ಆಹ್ವಾನ ನೀಡಿದರು. ಅಂತೆಯೇ ಸುತ್ತೂರು ಮಠಕ್ಕೂ ಭೇಟಿ ನೀಡಿದ್ದ ನಿರಾಣಿ, ಸುತ್ತೂರು ಶ್ರೀಗಳ ಆಶಿರ್ವಾದ ಪಡೆದು, ಶ್ರೀಗಳನ್ನು ಪೂಜೆ ಸಮಾರಂಭಕ್ಕೆ ಆಹ್ವಾನ ನೀಡಿದರು.