ಕೆಲ ಸಚಿವರ ದಬ್ಬಾಳಿಕೆ ಸಹಿಸಲಾಗದೆ ಹೊರಬಂದೆ: ವಿಶ್ವನಾಥ್ ಸಂದರ್ಶನ
ಮೈಸೂರು, ಜುಲೈ 9: ಎಚ್ ವಿಶ್ವನಾಥ್ ಅವರು ಜೆಡಿಎಸ್ ಪಕ್ಷದಿಂದ ಹುಣಸೂರಿನಲ್ಲಿ ಸ್ಪರ್ಧಿಸಿ, ಸದ್ಯ ಪಕ್ಷದ ಮೇಲಿನ ಅಸಮಾಧಾನದಿಂದ ಹೊರಬಂದಿದ್ದಾರೆ. ಅಲ್ಲದೇ ತಮ್ಮ ರಾಜೀನಾಮೆ ಕುರಿತಾಗಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಮುಂಚಿನಿಂದಲೂ ಪಕ್ಷದ ಹುಳುಕನ್ನು ಎತ್ತಿ ತೋರಿಸಿದ್ದ ವಿಶ್ವನಾಥ್ ಗೆ ಇದ್ದ ನಿಜವಾದ ಅಸಮಾಧಾನವಾದರೂ ಏನು ಎಂಬುದರ ಕುರಿತಾಗಿ ಒನ್ ಇಂಡಿಯಾದೊಂದಿಗೆ ಮಾತನಾಡಿದ್ದಾರೆ. ಇಲ್ಲಿದೆ ಅದರ ಸಾರ:
ಮಹಿಳೆ ಜೊತೆ ಎಚ್ ವಿಶ್ವನಾಥ್ ಧ್ವನಿಯಂತಿರುವ ಅಸಭ್ಯ ಆಡಿಯೋ ವೈರಲ್ : ಸ್ಪಷ್ಟನೆ
1. ನಿಮ್ಮ ಈ ನಿರ್ಧಾರ ನಿಮಗೇ ಕುಂದು ತರುತ್ತದೆ ಎಂದು ಭಾಸವಾಗುತ್ತಿಲ್ಲವೇ?
ಖಂಡಿತಾ ಅನ್ನಿಸಿಲ್ಲ. ರಾಜಕಾರಣದಲ್ಲಿ ನಾನು ಮೊದಲಿನಿಂದಲೂ ನಿಷ್ಠೆಯಿಂದ ಬೆಳೆದು ಬಂದವನು. ಇಲ್ಲಿ ವ್ಯಕ್ತಿತ್ವಕ್ಕೆ ಯಾರು ತಾನೆ ಬೆಲೆ ಕೊಡುತ್ತಾರೆ ನೀವೇ ಹೇಳಿ...
2. ಜೆಡಿಎಸ್ ಪಕ್ಷ ನಿಮಗೆ ಆಸರೆ ನೀಡಿ, ಶಾಸಕರಾಗಲು ಮುಂದಾಯಿತು. ಆದರೆ ನೀವು ದ್ರೋಹ ಬಗೆದ ಹಾಗಾಗಲಿಲ್ಲವೇ?
ಯಾವ ಪಕ್ಷದಲ್ಲಾದರೂ ಸರಿಯಿಲ್ಲ ಎನಿಸಿದರೆ ಬೇಸರ ತರಿಸುತ್ತದೆ. ಇಲ್ಲಿನ ಕೆಲ ಸಚಿವರ ನಡೆ ನನ್ನ ಸ್ವಾಭಿಮಾನವನ್ನು ಕೆಣಕುವಂತೆ ಮಾಡಿತು. ಪಕ್ಷದ ರಾಜ್ಯಾಧ್ಯಕ್ಷನಾಗಿದ್ದರೂ ಗೌರವ ಸಿಗಲಿಲ್ಲ. ಪಕ್ಷದಲ್ಲಿ ನಾನು ಹೇಳಿದವರಿಗೆ ಪುರಸಭಾ ಚುನಾವಣೆಯಲ್ಲಿಯೂ ಟಿಕೆಟ್ ನೀಡಲಿಲ್ಲ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜ್ಯದ ಅಭಿವೃದ್ಧಿ ನಿಂತ ನೀರಾಗಿದೆ. ಈ ತೀರ್ಮಾನ ಹಿಂದೆಯೇ ಆಗಬೇಕಿತ್ತು, ಆದರೆ ತಡವಾಗಿದೆ ಪರವಾಗಿಲ್ಲ.
3. ರಾಜಕೀಯ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಏನೂ ಮಾಡಲು ಸಾಧ್ಯವಿಲ್ಲವೇ?
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಕೂಡ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಇಂದಿನ ಪರಿಸ್ಥಿತಿಗೆ ಸಿದ್ದರಾಮಯ್ಯ ಅವರೇ ಕಾರಣ. ಸಿಎಂ ಕುಮಾರಸ್ವಾಮಿ ಅವರು ಈ ಪರಿಸ್ಥಿತಿಗೆ ಒಂದರ್ಥದಲ್ಲಿ ಕಾರಣವಾಗಿದ್ದಾರೆ ಎಂದರೆ ತಪ್ಪಿಲ್ಲ.
ವ್ಯಂಗ್ಯವಾಗಿ ಸಿದ್ದರಾಮಯ್ಯಗೆ ಥ್ಯಾಂಕ್ಸ್ ಹೇಳಿದ ವಿಶ್ವನಾಥ್
4. ಸಾರಾ ಮಹೇಶ್ ಮೇಲೆ ನಿಮಗೆ ಮುನಿಸೇಕೆ ?
ಇವತ್ತಿನ ಸರ್ಕಾರ ಹಾಗೂ ಕುಮಾರಸ್ವಾಮಿಯವರ ಈ ಸ್ಥಿತಿಗೆ ಸಾರಾ ಮಹೇಶ್ ಹಾಗೂ ಭೋಜೇಗೌಡರೇ ಪ್ರಮುಖ ಕಾರಣ. ಈ ಬಗ್ಗೆ ನಾನು ಬರೆದ ಪುಸ್ತಕದಲ್ಲೂ ಈ ಹಿಂದೆ ತಿಳಿಸಿದ್ದೆ. ಈ ಪರಿಸ್ಥಿತಿಗೆ ಸಿಎಂ ಮಾತ್ರವಲ್ಲ, ಜೊತೆಗಿದ್ದವರು ಕೂಡ ಕಾರಣರಾಗುತ್ತಾರೆ. ಅಧಿಕಾರದಲ್ಲಿದ್ದಾಗಲೂ ಅಷ್ಟೆ, ಸಿಎಂ ಗಮನಹರಿಸಲಿಲ್ಲ.
5. ಈ ಬಗ್ಗೆ ದೂರು ನೀಡಿದ್ದೀರಾ?
ಖಂಡಿತಾ ನಾನು ದೂರು ಸಲ್ಲಿಸಿದ್ದೆ. ಅವರ ಉಡಾಫೆ ಮಾತುಗಳು, ಪಕ್ಷದ ಬುಡವನ್ನೇ ಅಲ್ಲಾಡಿಸಿದೆ.
6. ನಿಮ್ಮ ಬಗ್ಗೆ ಅಸಮಾಧಾನ ಪ್ರತಿಭಟನೆ ನಡೆಯುತ್ತಿದೆಯಲ್ಲವೇ?
ಆಗಲಿ ಬಿಡಿ. ರಾಜಕಾರಣದಲ್ಲಿ ಇದೆಲ್ಲ ಸಹಜ. ಅದು ಮಾಡಿಸುತ್ತಿರುವ ಪ್ರತಿಭಟನೆ. ಸ್ವಯಂಕೃತವಲ್ಲ. ಜೆಡಿಎಸ್ ನಿಂದಲೂ ಸದ್ಯ ಯಾರು ಸಹ ನಮ್ಮನ್ನು ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ.
'ರಾಜೀನಾಮೆ ಕೊಟ್ಟ ಶಾಸಕರಿಗೆ ಕ್ಯಾಕರಿಸಿ ಉಗೀರಿ'
7. ನಿಮ್ಮನ್ನು ಪಕ್ಷದಿಂದ ಉಚ್ಛಾಟಿಸುವ ನಿರ್ಧಾರಕ್ಕೆ ಬಂದಿದ್ದಾರಲ್ಲ, ಏನನಿಸುತ್ತದೆ?
ಮಾಡಲಿ ಬಿಡಿ. ಅವರು ಯಾವ ತೀರ್ಮಾನ ಬೇಕಾದರೂ ತೆಗೆದುಕೊಳ್ಳಬಹುದು. ಕಾನೂನು ಎಲ್ಲರಿಗೂ ಇದೆ. ನಮಗೂ ಏನು ಮಾಡಬೇಕೆಂಬ ಅರಿವು ಇದೆ.
8. 40 ಕೋಟಿ ಹಣವನ್ನು ಪಡೆದು ಹೋದಿರಿ ಎಂದು ಕೆಲ ನಾಯಕರು ಆಕ್ಷೇಪಿಸುತ್ತಿದ್ದಾರೆ. ಇದು ನಿಜವೇ?
ನನ್ನ ಸಾರ್ವಜನಿಕ ಬದುಕನ್ನು ಬಲ್ಲವರಿಗೆ ಅರಿವಿದೆ, ನಾನೆಷ್ಟು ಪಾರದರ್ಶಕ ಎಂಬುದು. ನಾನು ದುಡ್ಡಿಗೆ ಈ ಕೆಲಸ ಮಾಡಿದೆನಾ ಅಥವಾ ತತ್ವ, ಸಿದ್ಧಾಂತಕ್ಕೆ ಈ ಕೆಲಸ ಮಾಡಿದೆನಾ ಎಂಬುದು ಎಲ್ಲರಿಗೂ ಗೊತ್ತಿದೆ. ಆ ದುಡ್ಡನ್ನು ತೆಗೆದುಕೊಂಡು ನಾನೇನು ಮಾಡಲಿ, ನಾವೆಲ್ಲಾ ದುಡಿದು ತಿನ್ನುವ ಜನ. ದಲ್ಲಾಳಿ, ರಿಯಲ್ ಎಸ್ಟೇಟ್ ಯಾವ ವ್ಯಾಪಾರಿಯವನೂ ನಾನಲ್ಲ. 40 ವರ್ಷದಿಂದಲೂ ರಾಜಕಾರಣದಲ್ಲಿದ್ದೇನೆ. ಆಗಲೇ ಕೋಟ್ಯಂತರ ರೂಪಾಯಿ ಹೊಡೆಯಬಹುದಿತ್ತು. ಆದರೆ ಈಗ ಈ ಮಾತು ಸರಿಯಲ್ಲ.
9. ಮುಂದಿನ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹುಣಸೂರಿನಿಂದ ಸ್ಪರ್ಧಿಸುತ್ತೀರಾ?
ಮುಂದಿನ ರಾಜಕೀಯ ಸನ್ನಿವೇಶ ಬದಲಾದ ಹಾಗೆ ನೋಡಿಕೊಳ್ಳೋಣ!