"ನಾನಿಲ್ಲಿ ರಾಜಕಾರಣ ಮಾಡಲು ಬಂದಿಲ್ಲ"; ಸಚಿವ ಸೋಮಶೇಖರ್
ಮೈಸೂರು, ಮೇ 02: "ನಾನು ಇಲ್ಲಿಗೆ ಬಂದಿರುವುದು ಅಭಿವೃದ್ಧಿಗಾಗಿ ಮಾತ್ರ. ರಾಜಕಾರಣ ಮಾಡಲು ಇದು ನನ್ನ ಕ್ಷೇತ್ರವಲ್ಲ. ಯಾರಿಗೋ ಒಬ್ಬರಿಗೆ ಅನುಕೂಲವಾಗಿ ಕೆಲಸ ಮಾಡುವವನು ನಾನಲ್ಲ. ಜಿಲ್ಲಾ ಉಸ್ತುವಾರಿ ಹೊಣೆಯನ್ನು ನನಗೆ ವಹಿಸಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು ನಾನು ಮಾಡುತ್ತಿದ್ದೇನೆ" ಎಂದರು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
Recommended Video
ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ನಿಯೋಗವು ಸಚಿವರ ಜೊತೆ ಸಭೆ ನಡೆಸಿ ಸಮಸ್ಯೆಗಳನ್ನು ಗಮನಕ್ಕೆ ತಂದರು. ಎಲ್ಲ ಸಮಸ್ಯೆಗಳಿಗೂ ಶೀಘ್ರವಾಗಿ ಪರಿಹಾರ ಕಲ್ಪಿಸುವುದಾಗಿ ಸಚಿವರು ಭರವಸೆ ನೀಡಿದರು.
ಕೊರೊನಾ ಮುಕ್ತ ಮೈಸೂರೇ ನಮ್ಮ ಗುರಿ: ಸೋಮಶೇಖರ್
ಅನುದಾನ ನೀಡುವ ಬಗ್ಗೆ ತೀರ್ಮಾನ
ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್ ಅವರು ಮೇ 7ರಂದು ಜಿಲ್ಲೆಗೆ ಭೇಟಿ ನೀಡಲಿದ್ದು, ಅವರ ಜೊತೆ ಸಭೆ ನಡೆಸಿ ತೀರ್ಮಾನವನ್ನು ತೆಗೆದುಕೊಳ್ಳಲಿದ್ದೇವೆ. ಸಚಿವ ಬಸವರಾಜ್ ಅವರ ಚಿಂತನೆಯನ್ನೂ ನೋಡಿಕೊಂಡು ಪ್ರತಿ ವಾರ್ಡ್ ಗಳಿಗೆ ಕಾರ್ಪೊರೇಟರ್ ಗಳ ನಿಧಿಯಿಂದ ಅನುದಾನ ನೀಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಚಿವರು ತಿಳಿಸಿದರು.
ಎರಡು ತಿಂಗಳು ಪಡಿತರ ವಿತರಣೆ
ಪಡಿತರ ಸಮಸ್ಯೆ ಇದ್ದರೆ ಗಮನಕ್ಕೆ ತನ್ನಿ, ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ದಾರರಿಗೆ 2 ತಿಂಗಳಿಗೆ ಆಹಾರ ಪದಾರ್ಥ ಕೊಡಬೇಕು. ಇನ್ನು ಬಿಪಿಎಲ್ ಕಾರ್ಡ್ ಗೆ ಅರ್ಜಿ ಹಾಕಿದವರಿಗೂ ತಲುಪಿಸಬೇಕೆಂಬ ನಿಯಮ ಸರ್ಕಾರದಿಂದ ಜಾರಿಗೆ ಬಂದಿದೆ. ಹೀಗಾಗಿ ಅಂತಹವರಿಗೂ ಪಡಿತರವನ್ನು ಇನ್ನೆರೆಡು ತಿಂಗಳು ವಿತರಣೆ ಮಾಡಲೇಬೇಕು. ಸಮಸ್ಯೆಯಾಗಿದ್ದರೆ ಗಮನಕ್ಕೆ ತನ್ನಿ, ಪರಿಹರಿಸುತ್ತೇವೆ ಎಂದು ಸಚಿವರು ತಿಳಿಸಿದರು. ಇನ್ನು ಬಜೆಟ್ ಮಂಡನೆ ವಿಚಾರವಾಗಿ ಮಾತನಾಡಿ, "ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಬಜೆಟ್ ಮಂಡಿಸಬೇಕು. ಇಲ್ಲವೇ ಬೆಂಗಳೂರಿನಲ್ಲಿ ಬಿಬಿಎಂಪಿ ಮಂಡಿಸಿದ ಬಜೆಟ್ ಮಾದರಿ ಅನುಸರಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕವೂ ಮಂಡಿಸಬಹುದು" ಎಂದು ತಿಳಿಸಿದರು.
ಹೆಣ್ಣಾನೆ ಚಾಮುಂಡಿಯನ್ನು ದತ್ತು ಪಡೆದ ಸಚಿವ ಸೋಮಶೇಖರ್
ಸಮನ್ವಯತೆ ಕೊರತೆ ಇಲ್ಲ
ಮೈಸೂರು ಮೇಯರ್ ಹಾಗೂ ಕಮೀಷನರ್ ಅವರ ಜೊತೆ ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ ಸಮನ್ವಯತೆಯಿಂದ ಕೆಲಸ ಮಾಡುವಂತೆ ನಾನೂ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇನೆ. ಹೀಗಾಗಿ ಮೇಯರ್-ಉಪಮೇಯರ್ ಹಾಗೂ ಪಕ್ಷಗಳ ಜಿಲ್ಲಾಧ್ಯಕ್ಷರಿಗೆ ಅವರವರ ವ್ಯಾಪ್ತಿಗೆ ಸಂಬಂಧಪಟ್ಟ ಸರ್ಕಾರಿ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಬೇಕೆಂದು ಕಮೀಷನರ್ ಸೇರಿ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ ಎಂದು ಸಚಿವರು ತಿಳಿಸಿದರು.
ಶಾಸಕ ರಾಮದಾಸ್ ಗೆ ಶ್ಲಾಘನೆ
ಇಲ್ಲಿನ ವಿವೇಕಾನಂದ ನಗರದ ವಿವೇಕಾನಂದ ವೃತ್ತದಲ್ಲಿ ಸಮೀಪ ಕೊರೊನಾ ಹಿನ್ನೆಲೆಯಲ್ಲಿ ಕಾರ್ಮಿಕ ವರ್ಗಕ್ಕೆ ವಿತರಿಸಲು ವ್ಯವಸ್ಥೆ ಮಾಡಲಾಗಿರುವ ಆಹಾರ ತಯಾರಿಸುವ ಅಡುಗೆ ಕೋಣೆಗೆ ಭೇಟಿ ನೀಡಿದ ಸಚಿವ ಎಸ್.ಟಿ.ಸೋಮಶೇಖರ್ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಮಾಜಿ ಸಚಿವ ಹಾಗೂ ಶಾಸಕ ಎಸ್.ಎ.ರಾಮದಾಸ್ ಅವರು ಕಾರ್ಮಿಕರಿಗಾಗಿ ಕೈಗೊಂಡಿರುವ ಆಹಾರ ನೀಡುವ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಕ್ಷೇತ್ರದ ಜನತೆಗೋಸ್ಕರ ಇವರು ಸಾಕಷ್ಟು ಉತ್ತಮ ಕಾರ್ಯಗಳನ್ನು ಕೈಗೊಂಡಿದ್ದಾರೆ. ಪ್ರತಿದಿನ 4 ಸಾವಿರ ಜನರಿಗೆ ಆಹಾರ ಕೊಡುತ್ತಿದ್ದಾರೆ. ಇವರ ಈ ಮಹತ್ಕಾರ್ಯಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ಹಾಗೂ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.