"ಬ್ಲಾಕ್ ಮೇಲ್ ಮಾಡುತ್ತಿಲ್ಲ, ಅನ್ಯಾಯದ ವಿರುದ್ಧ ಹೋರಾಟವಷ್ಟೆ"
ಮೈಸೂರು, ಮೇ 25: ಮೈಮುಲ್ ನೇಮಕಾತಿ ವಿಚಾರದಲ್ಲಿ ನಾನು ಯಾರನ್ನೂ ಬ್ಲಾಕ್ಮೇಲ್ ಮಾಡಲು ಹೊರಟಿಲ್ಲ. ನೇಮಕಾತಿಯಲ್ಲಿ ಆಗಿರುವ ಅಕ್ರಮದ, ಅವ್ಯವಹಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದೇನೆ ಎಂದಿದ್ದಾರೆ ಶಾಸಕ ಸಾರಾ ಮಹೇಶ್.
Recommended Video
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಅನ್ಯಾಯ, ಅಕ್ರಮ ನಡೆದಾಗ ನೋಡಿಕೊಂಡು ಸುಮ್ಮನಿರಲು ನನ್ನಿಂದ ಸಾಧ್ಯವಿಲ್ಲ. ಒಬ್ಬ ಶಾಸಕನಾಗಿ ಖಂಡಿಸುವುದು ನನ್ನ ಜವಾಬ್ದಾರಿ. ನಾನು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ" ಎಂದು ಹೇಳಿದರು.
"ಎಲ್ಲದರಲ್ಲೂ ಮೂಗು ತೂರಿಸಲು ನಾನು ಸಾ.ರಾ.ಮಹೇಶ್ ಅಲ್ಲ"
ಶಾಸಕ ಜಿ.ಟಿ.ದೇವೇಗೌಡ ಅವರು ಮೈಮುಲ್ ನ ನೇಮಕಾತಿಯಲ್ಲಿ ಎಲ್ಲವೂ ಪಾರದರ್ಶಕವಾಗಿದೆ ಎಂದು ಹೇಳುತ್ತಿದ್ದಾರೆ. ಈ ಮಾತನ್ನು ಅವರು ಸಾರ್ವಜನಿಕವಾಗಿ ಒಪ್ಪಿಕೊಳ್ಳಲಿ. ಹಾಗೆ ಒಪ್ಪಿಕೊಂಡರೆ ಈ ವಿಚಾರವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದು ನಾನು ನೇಮಕಾತಿಯ ವಿರುದ್ಧ ಕೈಗೆತ್ತಿಕೊಂಡಿರುವ ಹೋರಾಟವನ್ನು ಕೈಬಿಡುತ್ತೇನೆ ಎಂದು ಸವಾಲು ಹಾಕಿದರು.
ಈಚೆಗಷ್ಟೆ ಮೈಮುಲ್ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವುದಾಗಿ ಸಾರಾ ಮಹೇಶ್ ಆರೋಪ ಮಾಡಿದ್ದರು. ಈ ಕುರಿತು ಆಡಿಯೋವೊಂದನ್ನೂ ಬಿಡುಗಡೆಮಾಡಿದ್ದರು. ಸದ್ಯ, ಮೈಮುಲ್ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.