ಸರ್ಕಾರ ರಚನೆಯಲ್ಲಿ ನನ್ನ ಪಾತ್ರ ದೊಡ್ಡದು, ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಎಚ್.ವಿಶ್ವನಾಥ್
ಮೈಸೂರು, ಆಗಸ್ಟ್ 25: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಲು ನಾನು ಮುಖ್ಯಮಂತ್ರಿಯಲ್ಲ, ಈ ಬಗ್ಗೆ ನನ್ನನ್ನು ಏಕೆ ಪ್ರಶ್ನೆ ಮಾಡುತ್ತಿದ್ದೀರಾ.? ಆದರೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದರೆ ತಾವೂ ಕೂಡಾ ಸಚಿವ ಸ್ಥಾನದ ಆಕಾಂಕ್ಷಿ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಸಹ ಸಚಿವ ಸಂಪುಟದ ಆಕಾಂಕ್ಷಿಯಾಗಿದ್ದು, ಇದು ಮುಖ್ಯಮಂತ್ರಿಗಳಿಗೆ ಮತ್ತು ಬಿಜೆಪಿ ಹೈಕಮಾಂಡ್ ಗೆ ಸಂಬಂಧಿಸಿದ ವಿಷಯ. ರಾಜ್ಯದಲ್ಲಿ ಯಡಿಯೂರಪ್ಪನವರ ಬಿಜೆಪಿ ಸರ್ಕಾರ ಬರಲು ನನ್ನ ಪಾತ್ರ ದೊಡ್ಡದಿದೆ. ಸಹಜವಾಗಿಯೇ ಸಂಪುಟ ವಿಸ್ತರಣೆಯಾದರೆ ಅದರಲ್ಲಿ ಸ್ಥಾನ ಪಡೆಯುತ್ತೇನೆ ಅನ್ನುವ ವಿಶ್ವಾಸ ಇದೆ ಎಂದು ಹೇಳಿದರು.
ಮೈಸೂರು: ವೈದ್ಯರ ಮುಷ್ಕರ ವಾಪಸ್, ಉಸ್ತುವಾರಿ ಸಚಿವರಿಂದ ಧನ್ಯವಾದ
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಪ್ರತಿಕ್ರಿಯಿಸಿದ ಎಚ್.ವಿಶ್ವನಾಥ್, ನೀತಿ ಜಾರಿ ಹಾಗೂ ಶಾಲೆ ಆರಂಭಕ್ಕೆ ಅವಸರ ಬೇಡ ಎಂದರು. ಶಿಕ್ಷಣ ನೀತಿ ಜಾರಿಗೆ ಸಮಿತಿ ರಚನೆ ಆಗುತ್ತಿದೆ. ಶಾಲಾ-ಕಾಲೇಜು ಆಡಳಿತ ಮಂಡಳಿಯವರನ್ನು ಶಿಕ್ಷಣ ತಜ್ಞರು ಎಂದು ಭ್ರಮಿಸುವುದು ಬೇಡ, ಹೆಚ್ಚು ಶಾಲಾ-ಕಾಲೇಜು ನಡೆಸುವವರು ಶಿಕ್ಷಣ ತಜ್ಞರಲ್ಲ, ಶಿಕ್ಷಣ ಜ್ಞಾನ ಇಲ್ಲದವರು ಸಮಿತಿಯಲ್ಲಿದ್ದಾರೆ ಎಂದು ತಿಳಿಸಿದರು.
ಶಿಕ್ಷಣ ನೀತಿ ಸಮರ್ಪಕ ಜಾರಿಯಾಗಬೇಕಾದರೆ ಸಮುದಾಯದ ಎಲ್ಲರೂ ಸಮಿತಿಯಲ್ಲಿರಬೇಕು. ಹೀಗಾಗಿ ಶಿಕ್ಷಣ ಮಾರುವವರನ್ನು ಸಮಿತಿಗೆ ಕರೆಯದೆ, ಶಿಕ್ಷಣ ಕಲಿಸುವವರನ್ನು ಕರೆದು ಮಾತನಾಡಿ, ಅರ್ಥಪೂರ್ಣ ಚರ್ಚೆ ನಡೆಸುವ ಮೂಲಕ ಅಂತಿಮ ನಿರ್ಧಾರ ಕೈಗೊಳ್ಳಿ ಎಂದು ಡಿಸಿಎಂ ಅಶ್ವಥ್ ನಾರಾಯಣ್ಗೆ ಸಲಹೆ ನೀಡಿದರು.
ಅಂತೆಯೇ ಶಾಲೆ ಆರಂಭಕ್ಕೂ ಯಾವುದೇ ಅವಸರ ಬೇಡ. ಶಾಲೆ ಪುನಾರಾರಂಭಿಸುವಂತೆ ಪೋಷಕರಾಗಲಿ, ಮಕ್ಕಳಾಗಲಿ ಕೇಳುತ್ತಿಲ್ಲ. ಹೀಗಾಗಿ ಆಡಳಿತ ಮಂಡಳಿಯ ಒತ್ತಡಕ್ಕೆ ಮಣಿಯಬೇಡಿ. ಶಾಲೆಗಳು ಹಾಗೂ ಆಸ್ಪತ್ರೆಗಳನ್ನು ನಡೆಸುವವರಲ್ಲಿ ನಮ್ಮ ರಾಜಕಾರಣಿಗಳೇ ಹೆಚ್ಚಾಗಿದ್ದಾರೆ ಎಂದರು.
ನಂಜನಗೂಡು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಿಶ್ವನಾಥ್, ಐಎಎಸ್ ಅಧಿಕಾರಿಗಳು ಸರ್ವಜ್ಞರಲ್ಲ, ಐಎಎಸ್ ಅಧಿಕಾರಿಗಳು ಪಿಪಿಇ ಕಿಟ್ಗಳನ್ನು ಹಾಕಿಕೊಂಡರೆ ವೈದ್ಯರ ಕಷ್ಟ ಏನೆಂಬುದು ಅವರಿಗೆ ಗೊತ್ತಾಗುತ್ತೆ. ಕೆಲವೊಂದು ವಿಚಾರದಲ್ಲಿ ವೈದ್ಯರಿಗೆ ಮುಕ್ತ ಅವಕಾಶ ನೀಡಬೇಕಿದೆ ಎಂದರು.
ಮೆಡಿಕಲ್ ವಿಚಾರವಾಗಿ ಡಿಎಚ್ಒಗಳಿಗೆ ಉಸ್ತುವಾರಿ ಕೊಡಬೇಕಿದ್ದು, ಆಡಳಿತ ವಿಚಾರ ಜಿಲ್ಲಾಡಳಿತ ನೋಡಿಕೊಳ್ಳಲಿ. ಇದರ ಬದಲು ಜಿಲ್ಲಾಡಳಿತವೇ ಅನ್ನ-ಸಾರು ಹಾಕುವ ಜೊತೆಗೆ ಇಂಜೆಕ್ಷನ್ ಕೊಡಲು ಆಗುವುದಿಲ್ಲ. ಆದ್ದರಿಂದ ವೈದ್ಯಕೀಯ ಕ್ಷೇತ್ರದ ಬಗ್ಗೆ ಜ್ಞಾನ ಇರುವವರನ್ನೇ ಉಸ್ತವಾರಿ ಮಾಡಬೇಕು ಎಂದು ಸಲಹೆ ನೀಡಿದರು.